
ದಿ ಹಂಡ್ರೆಡ್ (The Hundred) ಲೀಗ್ ಹರಾಜಿನಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಅಬ್ರಾರ್ ಅಹ್ಮದ್ನನ್ನು ಕಾವ್ಯ ಮಾರನ್ ( Kavya Maran) ಮಾಲೀಕತ್ವದ ಸನ್ರೈಸರ್ಸ್ ಲೀಡ್ಸ್ ಫ್ರಾಂಚೈಸಿ ಖರೀದಿ ಮಾಡಿರುವುದು ಭಾರತೀಯರನ್ನು ಕೆರಳಿಸಿದೆ. ನಿನ್ನೆ ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ನ (Abrar Ahmed) ಕಾವ್ಯ ಮಾರನ್ ಖರೀದಿ ಮಾಡುತ್ತಿದ್ದಂತೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ, ಈ ಹಿಂದೆ ಆಪರೇಷನ್ ಸಿಂಧೂರ್ ಸಮಯದಲ್ಲಿ ಅಬ್ರಾರ್ ಅಹ್ಮದ್ ಭಾರತೀಯ ವಾಯುಪಡೆಯನ್ನು ಅಪಹಾಸ್ಯ ಮಾಡಿದ್ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಈ ಫೋಟೋ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಭಾರತೀಯರು ಕಾವ್ಯ ಮಾರನ್ ಮೇಲೆ ಮುಗಿಬಿದಿದ್ದಾರೆ.
ವಾಸ್ತವವಾಗಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪಹಲ್ಗಾಮ್ನಲ್ಲಿ ನಡೆಸಿದ ಅಟ್ಟಹಾಸದಿಂದ 26 ಅಮಾಯಕ ಭಾರತೀಯರು ಸಾವನ್ನಪ್ಪಿದರು. ಇದಕ್ಕೆ ಪ್ರತಿಕಾರವಾಗಿ ಭಾರತ ಸರ್ಕಾರ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನಕ್ಕೆ ಸರಿಯಾಗಿ ತಿರುಗೇಟು ನೀಡಿತ್ತು. ಇದೇ ಸಂದರ್ಭದಲ್ಲಿ ಈ ಅಬ್ರಾರ್ ಅಹ್ಮದ್ ಭಾರತದ ವಾಯುಪಡೆಯನ್ನು ಅಪಹಾಸ್ಯ ಮಾಡಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಟೀ ಕಪ್ ಹಿಡಿದು ನಿಂತಿದ್ದ ಅಹ್ಮದ್, ‘ರಂಜಾನ್ ಪ್ರಾರಂಭವಾಗುವ ಮೊದಲು ಅದ್ಭುತವಾದ ಮುಸ್ಸಂಜೆಯ ಚಹಾ ಸವಿಯುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.
ಅಬ್ರಾರ್ ಹಂಚಿಕೊಂಡಿದ್ದ ಈ ಪೋಸ್ಟ್ 2019 ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಘಟನೆಯನ್ನು ನೆನಪಿಸಿತ್ತು. ವಾಸ್ತವವಾಗಿ ಪಾಕ್ ಮೂಲದ ಉಗ್ರಸಂಘಟನೆ 2019 ರ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ಉಗ್ರದಾಳಿ ನಡೆಸಿ 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ, ಬಾಲಾಕೋಟ್ ಏರ್ಸ್ಟ್ರೈಕ್ ನಡೆಸಿತ್ತು. ಆ ಸಮಯದಲ್ಲಿ ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಆಗಸದಲ್ಲೇ ಹೊಡೆದು ಉರುಳಸಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನದಲ್ಲಿ ಸೆರೆ ಹಿಡಿಯಲಾಗಿತ್ತು. ಆ ಸಮಯದಲ್ಲಿ ಅಭಿನಂದನ್ ಚಹಾ ಕುಡಿಯುತ್ತಿರುವ ವಿಡಿಯೋವನ್ನು ಪಾಕಿಸ್ತಾನ ಸೇನೆ ಬಿಡುಗಡೆ ಮಾಡಿತ್ತು. ಆ ವಿಡಿಯೋದಲ್ಲಿ ಚಹಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಅಭಿನಂದನ್ ‘ಟೀ ತುಂಬಾ ಚೆನ್ನಾಗಿದೆ, ಧನ್ಯವಾದಗಳು’ ಎಂದು ಉತ್ತರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Fri, 13 March 26