
1983 ರ ವಿಶ್ವಕಪ್ ಐತಿಹಾಸಿಕ ಗೆಲುವಿನ ಹಿಂದಿರುವ ರಿಯಲ್ ಕಹಾನಿಯನ್ನು ತಿಳಿಸುವ "83" ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಜರಂಗಿ ಭಾಯಿಜಾನ್ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ದಿ ಲೆಜೆಂಡ್ ಕಪಿಲ್ ದೇವ್ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಇನ್ನು 1983 ರ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸೈಯದ್ ಮುಜ್ತಬಾ ಹುಸೈನ್ ಕಿರ್ಮಾನಿ (ಸೈಯದ್ ಕಿರ್ಮಾನಿ) ಪಾತ್ರದಲ್ಲಿ ಬಾಲಿವುಡ್ ನಟ ಸಾಹಿಲ್ ಕಟ್ಟರ್ ಅಭಿನಯಿಸಿದ್ದಾರೆ.

ಬೆಂಗಳೂರು ಮೂಲದವರಾದ ಕಿರ್ಮಾನಿ ಅವರೊಂದಿಗೆ ಇಂದು (ಡಿ.26) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋರಮಂಗಲದ ಫೋರಂ ಮಾಲ್ನಲ್ಲಿರುವ ಪಿ.ವಿ.ಆರ್. ಚಿತ್ರಮಂದಿರದಲ್ಲಿ 83 ಚಿತ್ರವನ್ನು ವೀಕ್ಷಿಸಿದರು. ಇದೇ ವೇಳೆ ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇನ್ನು ಚಿತ್ರ ಪ್ರಾರಂಭವಾಗುವುದಕ್ಕೂ ಮುನ್ನ ದಿವಂಗತ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಅವರ ಸ್ಮರಣಾರ್ಥ ಒಂದು ನಿಮೀಷದ ಮೌನಾಚರಣೆ ಮಾಡಲಾಯಿತು.

ಡಿಸೆಂಬರ್ 24 ರಂದು ಕನ್ನಡ ಸೇರಿದಂತೆ ಪಂಚಭಾಷೆಯಲ್ಲಿ ತೆರೆಕಂಡಿರುವ 83 ಚಿತ್ರಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಣವೀರ್ ಸಿಂಗ್ ಅವರ ಅಭಿನಯಕ್ಕೆ ಎಲ್ಲೆಡೆಯಿಂದಲೂ ಬಹುಪರಾಕ್ ಕೇಳಿ ಬರುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸೈಯದ್ ಕಿರ್ಮಾನಿ

ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸೈಯದ್ ಕಿರ್ಮಾನಿ ಕುಟುಂಬಸ್ಥರು