
ಕ್ರಿಕೆಟ್ ಲೋಕದ ಹೊಸ ಸೆನ್ಸೇಷನ್ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದ ಯುವ ದಾಂಡಿಗ ಇತ್ತೀಚೆಗೆ ಶ್ರೀಲಂಕಾ ಎ ವಿರುದ್ಧದ ಏಕದಿನ ಪಂದ್ಯದಲ್ಲೂ ಅಬ್ಬರಿಸಿದ್ದಾರೆ. ಅದು ಕೂಡ ಕೇವಲ 29 ಎಸೆತಗಳಲ್ಲಿ 94 ರನ್ ಚಚ್ಚುವ ಮೂಲಕ. ಈ ಸ್ಫೋಟಕ ಇನಿಂಗ್ಸ್ ಬೆನ್ನಲ್ಲೇ ಸೌತ್ ಆಫ್ರಿಕಾದ ಮಾಜಿ ದಿಗ್ಗಜ ಬ್ಯಾಟರ್ ಡ್ಯಾರಿಲ್ ಕಲ್ಲಿನನ್ ಅವರು ವೈಭವ್ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಡ್ಯಾರಿಲ್ ಕಲ್ಲಿನನ್, ವೈವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಶೈಲಿ ಮತ್ತು ಅವರ ಫಿಟ್ನೆಸ್ ಬಗ್ಗೆ ನಾನು ತೀವ್ರ ಕಳವಳವಿದೆ. ಏಕೆಂದರೆ ಈ ಹುಡುಗನ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಆತನ ಕೆರಿಯರ್ ಅಪಾಯಕ್ಕೆ ಸಿಲುಕಲಿದೆ ಎಂದಿದ್ದಾರೆ. ಇದಕ್ಕೆ ಅವರು ಕಾರಣಗಳನ್ನು ಸಹ ನೀಡಿದ್ದಾರೆ.
ಡ್ಯಾರಿಲ್ ಕಲ್ಲಿನನ್ ತಮ್ಮ ವಾದಕ್ಕೆ ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಉದಾಹರಣೆಯನ್ನು ನೀಡಿದ್ದಾರೆ. 2004ರಲ್ಲಿ ಸಚಿನ್ ಅವರು ಭಾರವಾದ ಬ್ಯಾಟ್ ಬಳಸಿದ್ದರಿಂದಲೇ ಭೀಕರ ‘ಟೆನ್ನಿಸ್ ಎಲ್ಬೋ’ ಗಾಯಕ್ಕೆ ತುತ್ತಾಗಿ, ವೃತ್ತಿಜೀವನವೇ ಕೊನೆಗೊಳ್ಳುವ ಹಂತ ತಲುಪಿತ್ತು ಎಂಬುದನ್ನು ನೆನಪಿಸಿದ್ದಾರೆ. ಇದೇ ಕಾರಣದಿಂದಾಗಿ ಯುವ ದಾಂಡಿಗ ಕೆರಿಯರ್ ಬೇಗನೆ ಕೊನೆಗೊಳ್ಳುತ್ತಾ ಎಂಬ ಭಯ ಕಾಡ್ತಿದೆ ಎಂದು ಕಲ್ಲಿನನ್ ಹೇಳಿದ್ದಾರೆ.
ಅದರಲ್ಲೂ ಈ ವಯಸ್ಸಿನಲ್ಲೇ ಅತಿಯಾಗಿ ಪಂದ್ಯಗಳನ್ನು ಆಡುವುದು ಮತ್ತು ನಿರಂತರವಾಗಿ ಸಿಕ್ಸರ್-ಬೌಂಡರಿಗಳ ಮೇಲೆಯೇ ಅವಲಂಬಿತವಾಗುವುದು ಕೂಡ ದೀರ್ಘಾವಧಿಯ ವೃತ್ತಿಜೀವನಕ್ಕೆ ಒಳ್ಳೆಯದಲ್ಲ ಎಂಬುದನ್ನು ಸಹ ಕಲ್ಲಿನನ್ ಒತ್ತಿ ಹೇಳಿದ್ದಾರೆ. ಹೀಗಾಗಿ ವೈಭವ್ ಸೂರ್ಯವಂಶಿ ಈ ಬಗ್ಗೆ ಈಗಲೇ ಎಚ್ಚರಿಕೆ ವಹಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ.
ಇದನ್ನೂ ಓದಿ: ವಿಸ್ಫೋಟಕ ಸೆಂಚುರಿ ಸಿಡಿಸಿದ ನಿಕಿನ್ ಜೋಸ್: ಪಾಂಡೆ ಪಡೆಗೆ ಸೋಲು!
ಒಟ್ಟಾರೆಯಾಗಿ, ಡ್ಯಾರಿಲ್ ಕಲ್ಲಿನನ್ ಅವರು ವೈಭವ್ ಸೂರ್ಯವಂಶಿ ಅವರ ಅದ್ಭುತ ಪ್ರತಿಭೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಯುವ ಆಟಗಾರ ಕಾರ್ಯೊತ್ತಡವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಗಾಯಗಳ ಸಮಸ್ಯೆಯಿಂದಾಗಿ ಅವರ ಸುದೀರ್ಘ ಕ್ರಿಕೆಟ್ ಭವಿಷ್ಯಕ್ಕೆ ಧಕ್ಕೆಯಾಗಬಹುದು ಎಂದು ಎಚ್ಚರಿಸಿದ್ದಾರೆ.