Rohit Sharma: ವಿಶ್ವಕಪ್​ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ ರೋಹಿತ್ ಶರ್ಮಾ

Team India: ಸೌತ್ ಆಫ್ರಿಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ, ಡಿಸೆಂಬರ್ 26 ರಿಂದ ಶುರುವಾಗಲಿರುವ ಟೆಸ್ಟ್ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಂದರೆ ಏಕದಿನ ವಿಶ್ವಕಪ್​ ಫೈನಲ್ ಬಳಿಕ ಟೆಸ್ಟ್ ಪಂದ್ಯದ ಮೂಲಕ ಮತ್ತೆ ಕಣಕ್ಕಿಳಿಯಲು ಹಿಟ್​ಮ್ಯಾನ್ ಸಜ್ಜಾಗುತ್ತಿದ್ದಾರೆ.

Rohit Sharma: ವಿಶ್ವಕಪ್​ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ ರೋಹಿತ್ ಶರ್ಮಾ
Rohit Sharma
Updated By: ಝಾಹಿರ್ ಯೂಸುಫ್

Updated on: Dec 13, 2023 | 3:58 PM

2011 ರ ಬಳಿಕ ಏಕದಿನ ವಿಶ್ವಕಪ್​ ಗೆಲ್ಲುವ ಟೀಮ್ ಇಂಡಿಯಾ (Team India) ಕನಸು ಕನಸಾಗಿಯೇ ಉಳಿದಿದೆ. ಈ ಬಾರಿಯ ವಿಶ್ವಕಪ್​ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡವು ಚಾಂಪಿಯನ್​ ಪಟ್ಟಕ್ಕೇರುವ ನಿರೀಕ್ಷೆ ಮೂಡಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸುವ ಮೂಲಕ ನಿರಾಸೆ ಮೂಡಿಸಿತು. ಈ ಸೋಲಿನೊಂದಿಗೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣ್ಣೀರಿನೊಂದಿದೆ ಮೈದಾನ ತೊರೆದಿದ್ದರು. ಆ ಬಳಿಕ ಎಲ್ಲೂ ಕಾಣಿಸಿಕೊಳ್ಳದೇ ರೋಹಿತ್ ಶರ್ಮಾ ಇದೀಗ ವಿಶ್ವಕಪ್​​ ಫೈನಲ್​ ಸೋಲಿನ ಬಳಿಕ ಉಂಟಾದ ತಳಮಳಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ವಿಶ್ವಕಪ್ ಫೈನಲ್ ಸೋಲಿನ ಬಳಿಕ ನನಗೆ ಏನೂ ಕೂಡ ತೋಚುತ್ತಿರಲಿಲ್ಲ. ಹೀಗಾಗಿ ರಿಫ್ರೆಶ್ ಆಗಲು ಇಂಗ್ಲೆಂಡ್​ಗೆ ತೆರಳಿದ್ದೆ. ಕೆಲ ದಿನಗಳವರೆಗೆ ಈ ಸೋಲಿನ ನೋವಿಂದ ನಾನು ಹೇಗೆ ಚೇತರಿಸಿಕೊಳ್ಳುತ್ತೇನೆ ಎಂಬುದೇ ಚಿಂತೆಯಾಗಿತ್ತು. ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನನ್ನು ಪ್ರೇರೇಪಿಸಿದರು. ಸೋಲನ್ನು ಅರಗಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಮುನ್ನಡೆಯುವುದು ಅನಿವಾರ್ಯವಾಗಿತ್ತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಜನರು ನನ್ನ ಬಳಿ ಬಂದು ತಂಡದ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ ಎಂದು ಹೇಳುತ್ತಿದ್ದರು. ನನಗೆ ತುಂಬಾ ಸಮಾಧಾನವಾಯಿತು. ಇದರೊಂದಿಗೆ ನಾನು ಕೂಡ ನೋವಿನಿಂದ ಚೇತರಿಸಿಕೊಂಡೆ. ಆಟಗಾರರ ಮನದಲ್ಲಿ ಏನಿದೆ ಎಂಬುದನ್ನು ಜನರು ಅರ್ಥಮಾಡಿಕೊಂಡಾಗ ಮತ್ತು ಅವರು ಹತಾಶೆ ಅಥವಾ ಕೋಪವನ್ನು ಹೊರಹಾಕುವುದಿಲ್ಲ. ಜನರಿಗೂ ನಮ್ಮ ಮೇಲೆ ಕೋಪ ಇರಲಿಲ್ಲ.

ಇದೇ ಕಾರಣದಿಂದಾಗಿ ನಾವು ಭೇಟಿಯಾದಾಗಲೆಲ್ಲಾ ಅವರು ಪ್ರೀತಿಯನ್ನು ಮಾತ್ರ ವ್ಯಕ್ತಪಡಿಸುತ್ತಿದ್ದರು. ಜನರ ಶುದ್ಧ ಪ್ರೀತಿ ಮತ್ತು ಅದನ್ನು ನೋಡುವುದೇ ಅದ್ಭುತ. ಇದು ನಮಗೆ ಕಂಬ್ಯಾಕ್ ಮಾಡಲು ಮತ್ತು ಮತ್ತೆ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಒಂದು ಸೋಲಿನ ಹೊರತಾಗಿಯೂ ಜನರಿಂದ ಸಿಕ್ಕ ಬೆಂಬಲವು ಇದೀಗ ನನಗೆ ಹೊಸ ಸ್ಪೂರ್ತಿ ನೀಡಿದೆ. ಮತ್ತೊಮ್ಮೆ ಉನ್ನತ ಸ್ಥಾನವನ್ನು ತಲುಪಲು ಪ್ರಯತ್ನಿಸಬೇಕು. ವಿಶ್ವಕಪ್‌ನುದ್ದಕ್ಕೂ ನಮಗೆ ಪ್ರೇಕ್ಷಕರಿಂದ ಅಪಾರ ಬೆಂಬಲ ಸಿಕ್ಕಿತು. ಸ್ಟೇಡಿಯಂನಲ್ಲಿ ಮತ್ತು ಮನೆಯಲ್ಲಿ ನೋಡಿದವರಿಂದ ಅಪೂರ್ವ ಬೆಂಬಲ ವ್ಯಕ್ತವಾಗಿತ್ತು. ಇಂತಹ ಬೆಂಬಲವನ್ನು ನಾವು ಶ್ಲಾಘಿಸಲೇಬೇಕು ಎಂದು ರೋಹಿತ್ ಶರ್ಮಾ ಹೇಳಿದರು.

ಇದಾಗ್ಯೂ ವಿಶ್ವಕಪ್ ಸೋಲಿನ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. ನಮಗೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂಬ ನೋವಿದೆ. ಏಕೆಂದರೆ ನಾನು 50 ಓವರ್‌ಗಳ ವಿಶ್ವಕಪ್ ನೋಡುತ್ತಾ ಬೆಳೆದವನು. ಇದು ನನಗೆ ಸಿಕ್ಕ ದೊಡ್ಡ ಅವಕಾಶ. ಇದಕ್ಕಾಗಿ ನಾವು ತುಂಬಾ ಶ್ರಮಿಸಿದ್ದೇವೆ. ಆದರೆ ಅಂತಿಮ ಹಂತದಲ್ಲಿ ಎಡವಿರುವುದು ನಿರಾಸೆಯನ್ನುಂಟು ಮಾಡಿದೆ. ಕಷ್ಟಪಟ್ಟು ದುಡಿದದ್ದು, ಕಂಡ ಕನಸು ಈಡೇರದಾಗ ಹತಾಶೆ ಉಂಟಾಗುತ್ತದೆ. ಅದೇ ರೀತಿ ನನಗೂ ಹತಾಶೆಯಾಗಿದೆ. ಆದರೆ ಫೈನಲ್ ಸೋಲಿನ ಹೊರತಾಗಿಯೂ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಂದ ಸಿಕ್ಕ ಅಭೂತಪೂರ್ವ ಬೆಂಬಲವು ಇದೀಗ ನನ್ನನ್ನು ಮತ್ತೆ ಕಂಬ್ಯಾಕ್ ಮಾಡಲು ಪ್ರೇರೇಪಿಸಿದೆ ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಸೂರ್ಯಕುಮಾರ್ ಯಾದವ್

ಸದ್ಯ ಸೌತ್ ಆಫ್ರಿಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯಿಂದ ಹೊರಗುಳಿದಿರುವ ರೋಹಿತ್ ಶರ್ಮಾ, ಡಿಸೆಂಬರ್ 26 ರಿಂದ ಶುರುವಾಗಲಿರುವ ಟೆಸ್ಟ್ ಸರಣಿ ವೇಳೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅಂದರೆ ಏಕದಿನ ವಿಶ್ವಕಪ್​ ಫೈನಲ್ ಬಳಿಕ ಟೆಸ್ಟ್ ಪಂದ್ಯದ ಮೂಲಕ ಮತ್ತೆ ಕಣಕ್ಕಿಳಿಯಲು ಹಿಟ್​ಮ್ಯಾನ್ ಸಜ್ಜಾಗುತ್ತಿದ್ದಾರೆ.