VHT 2025-26: ಕರುಣ್, ಪಡಿಕ್ಕಲ್ ಶತಕ; ಕರ್ನಾಟಕಕ್ಕೆ ಸತತ 2ನೇ ಜಯ
Vijay Hazare Trophy: ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿನ ಹಿನ್ನಡೆಯ ನಂತರ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಬಲಿಷ್ಠ ಜಾರ್ಖಂಡ್ ವಿರುದ್ಧ 412 ರನ್ ಬೆನ್ನಟ್ಟಿ ಗೆದ್ದ ತಂಡ, ನಂತರ ಕೇರಳ ವಿರುದ್ಧ 8 ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕರ್ನಾಟಕದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ.

ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ ಎಡವಿದ್ದ ಕರ್ನಾಟಕ ತಂಡ ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ( Vijay Hazare Trophy) ಭರ್ಜರಿ ಪ್ರದರ್ಶನ ನೀಡುತ್ತಿದೆ. ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಜಾರ್ಖಂಡ್ ನೀಡಿದ್ದ 412 ರನ್ಗಳ ದಾಖಲೆಯ ಗುರಿಯನ್ನು ಬೆನ್ನಟ್ಟಿ ಗೆದ್ದ ಕರ್ನಾಟಕ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಕೇರಳ ವಿರುದ್ಧ 8ವಿಕೆಟ್ಗಳ ಸುಲಭ ಜಯ ದಾಖಲಿಸಿದೆ. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ತಂಡದ ಗೆಲುವಿಗೆ ಕಾರಣರಾಗಿದ್ದ ದೇವದತ್ ಪಡಿಕ್ಕಲ್ (Devdutt Padikkal), ಈ ಪಂದ್ಯದಲ್ಲೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೇರಳ ತಂಡ 284 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಕೇವಲ 2 ವಿಕೆಟ್ಗಳನ್ನು ಕಳೆದುಕೊಂಡು ಇನ್ನು 10 ಎಸೆತಗಳು ಬಾಕಿ ಇರುವಂತೆಯೇ ಜಯ ದಾಖಲಿಸಿತು. ಕರ್ನಾಟಕ ಪರ ಮಿಂಚಿದ ಪಡಿಕ್ಕಲ್ 124 ರನ್ಗಳ ಇನ್ನಿಂಗ್ಸ್ ಆಡಿದರೆ, ಕರುಣ್ ನಾಯರ್ (Karun Nair) ಕೂಡ ಅಜೇಯ 130 ರನ್ ಬಾರಿಸಿದರು.
285 ರನ್ಗಳ ಗುರಿ ನೀಡಿದ ಕೇರಳ
ಮೊದಲ ಪಂದ್ಯದಂತೆ ಈ ಪಂದ್ಯದಲ್ಲೂ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಆಯ್ದುಕೊಂಡಿತ್ತು. ಮೊದಲ ಪಂದ್ಯದಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದ ಕರ್ನಾಟಕದ ಬೌಲರ್ಗಳು ಈ ಪಂದ್ಯದಲ್ಲಿ ಕೇರಳದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕಿದರು. ಹೀಗಾಗಿ ತಂಡದ ಮೊದಲ ನಾಲ್ವರು ಬ್ಯಾಟ್ಸ್ಮನ್ಗಳಿಗೆ ಬಿಗ್ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಆದಾಗ್ಯೂ 5ನೇ ಕ್ರಮಾಂಕದಲ್ಲಿ ಬಂದ ಅನುಭವಿ ಬ್ಯಾಟ್ಸ್ಮನ್ ಬಾಬಾ ಅಪರಾಜಿತ್ 71 ರನ್ಗಳ ಇನ್ನಿಂಗ್ಸ್ ಆಡಿದರೆ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಜರುದ್ಧೀನ್ ಅತ್ಯಧಿಕ 84 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ವಿಷ್ಣು ವಿನೋದ್ 35 ರನ್ಗಳ ಕೊಡುಗೆ ನೀಡಿದರೆ, ನಿದೀಶ್ 34 ರನ್ ಬಾರಿಸಿದರು. ಇವರ ಆಟದಿಂದಾಗಿ ಕೇರಳ ತಂಡ 284 ರನ್ ಕಲೆಹಾಕಿತು. ಇತ್ತ ಕರ್ನಾಟಕ ಪರ ಬೌಲಿಂಗ್ನಲ್ಲಿ ಮಿಂಚಿದ ಅಭಿಲಾಶ್ ಶೆಟ್ಟಿ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು.
ಕರುಣ್, ಪಡಿಕ್ಕಲ್ ಶತಕ
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಮಯಾಂಕ್ ಅಗರ್ವಾಲ್ ಕೇವಲ 1 ರನ್ಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ದಾಖಲೆಯ ಜೊತೆಯಾಟ ಕಟ್ಟಿದರು. ಇವರಿಬ್ಬರು 2ನೇ ವಿಕೆಟ್ಗೆ 223 ರನ್ ಸೇರಿಸಿದರು. ಈ ವೇಳೆ ಇಬ್ಬರು ಶತಕ ಸಿಡಿಸಿ ಮಿಂಚಿದರು.
IND vs AUS: ಆಸ್ಟ್ರೇಲಿಯಾ ವಿರುದ್ಧ 150 ರನ್ ಚಚ್ಚಿದ ಕನ್ನಡಿಗ ದೇವದತ್ ಪಡಿಕ್ಕಲ್
ಮೊದಲ ಪಂದ್ಯದಲ್ಲಿ 147 ರನ್ ಬಾರಿಸಿದ್ದ ದೇವದತ್ ಪಡಿಕ್ಕಲ್, ಎರಡನೇ ಪಂದ್ಯದಲ್ಲೂ ಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 137 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 3 ಸಿಕ್ಸರ್ಗಳು ಮತ್ತು 12 ಬೌಂಡರಿಗಳ ಸಹಿತ 124 ರನ್ ಬಾರಿಸಿದರು. ಪಡಿಕ್ಕಲ್ಗೆ ಸಾಥ್ ನೀಡಿದ ಅನುಭವಿ ಕರುಣ್ ನಾಯರ್ ಕೂಡ 130 ಎಸೆತಗಳಲ್ಲಿ 14 ಬೌಂಡರಿ ಸಹಿತ ಅಜೇಯ 130 ರನ್ ಬಾರಿಸಿದರು. ಪಡಿಕ್ಕಲ್ ಔಟಾದ ಬಳಿಕ ಬಂದ ಸ್ಮರಣ್ ರವಿಚಂದ್ರನ್ 25 ರನ್ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:26 pm, Fri, 26 December 25
