
ಕೊಲೊಂಬೊದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಯಶಸ್ವಿ ಜೈಸ್ವಾಲ್ ಹಾಗೂ ಅಸಿತ ಫೆರ್ನಾಂಡೋ ನಡುವೆ ನಡೆದ ಜಗಳ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಕುರಿತು ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಚೇತೇಶ್ವರ್ ಪೂಜಾರ ಮತ್ತು ಸಬಾ ಕರೀಮ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಭಾರತದ ಮೊದಲ ಇನ್ನಿಂಗ್ಸ್ನಲ್ಲಿ 45 ರನ್ ಗಳಿಸಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಅಸಿತ ಫೆರ್ನಾಂಡೋ ಔಟ್ ಮಾಡಿದರು. ವಿಕೆಟ್ ಪಡೆದ ಸಂಭ್ರಮದಲ್ಲಿದ್ದ ಫೆರ್ನಾಂಡೋ, ಜೈಸ್ವಾಲ್ ವಿರುದ್ಧ ಅತಿರೇಕದ ವರ್ತನೆ ತೋರಿ ‘ಸೆಂಡ್-ಆಫ್’ ನೀಡಿದರು.
ಇದರಿಂದ ಕೆರಳಿದ ಜೈಸ್ವಾಲ್, ಕ್ರೀಸ್ ಬಿಟ್ಟು ಹೊರಡುವ ಮುನ್ನ ಬೌಲರ್ ಕಡೆಗೆ ತಿರುಗಿ ಮುನ್ನುಗ್ಗಿದರು. ಇಬ್ಬರೂ ಆಟಗಾರರು ಮುಖಾಮುಖಿಯಾಗಿ ವಾಗ್ವಾದ ನಡೆಸಿದರಲ್ಲದೆ, ಒಬ್ಬರಿಗೊಬ್ಬರು ತಲೆ ಮುಟ್ಟಿಸುವ ಮೂಲಕ (ಹೆಡ್ಬಟ್) ದೈಹಿಕ ಸಂಘರ್ಷಕ್ಕೆ ಇಳಿದರು. ತಕ್ಷಣವೇ ಅಂಪೈರ್ಗಳು ಮತ್ತು ಸಹ ಆಟಗಾರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕಾಯಿತು.
ICC’s version of the Jaiswal-Fernando clash: “Fernando moved his head first, Jaiswal just leaned in.”
Video says otherwise.
Governing body getting the basic facts wrong. #SLVIND pic.twitter.com/uy2sAK0YEK— Nibraz Ramzan (@nibraz88cricket) August 25, 2026
ಈ ವರ್ತನೆ ಬಗ್ಗೆ ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ಮಾತನಾಡಿದ ಚೇತಶ್ವರ ಪೂಜಾರ, “ಔಟ್ ಆದಾಗ ಬ್ಯಾಟರ್ಗೆ ಕೋಪ ಅಥವಾ ನಿರಾಸೆ ಬರುವುದು ಸಹಜ. ಆದರೆ ಮೈದಾನದಲ್ಲಿ ಮತ್ತೊಬ್ಬ ಆಟಗಾರನ ದೇಹಕ್ಕೆ ಮುಟ್ಟುವುದು ಅಥವಾ ದೈಹಿಕವಾಗಿ ಸಂಘರ್ಷಕ್ಕೆ ಇಳಿಯುವುದು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದ್ದು. ಆಟಗಾರರು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು” ಎಂದು ಜೈಸ್ವಾಲ್ಗೆ ಕಿವಿಮಾತು ಹೇಳಿದ್ದಾರೆ.
ಮಾಜಿ ಕ್ರಿಕೆಟಿಗ ಸಬಾ ಕರೀಮ್ ಕೂಡ ಈ ಘಟನೆಯನ್ನು “ಬಾಲಿಶ ಮತ್ತು ಅನಗತ್ಯ” ಎಂದು ಕರೆದಿದ್ದು, ಕ್ರಿಕೆಟ್ ಒಂದು ಸಂಪರ್ಕ ರಹಿತ ಕ್ರೀಡೆಯಾಗಿದ್ದು, ಇಂತಹ ವರ್ತನೆಗಳಿಗೆ ಇಲ್ಲಿ ಜಾಗವಿಲ್ಲ ಎಂದಿದ್ದಾರೆ.
ಮೈದಾನದಲ್ಲಿ ಅಶಿಸ್ತು ತೋರಿದ ಕಾರಣಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇಬ್ಬರೂ ಆಟಗಾರರಿಗೆ ಶಿಕ್ಷೆ ವಿಧಿಸಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿದ್ದಕ್ಕಾಗಿ ಜೈಸ್ವಾಲ್ ಮತ್ತು ಫೆರ್ನಾಂಡೋ ಇಬ್ಬರಿಗೂ ಪಂದ್ಯದ ಸಂಭಾವನೆಯಲ್ಲಿ ಶೇಕಡಾ 25 ರಷ್ಟು ದಂಡ ಹಾಗೂ ತಲಾ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಇದನ್ನೂ ಓದಿ: ಭಯ ಪಡಬೇಡ, ನೀನು ಆಡು ಬ್ರೋ: ಸರ್ಫರಾಝ್ ಮಾತು ಕೇಳಿ ಔಟಾದ ಲಂಕಾ ನಾಯಕ!
ಮತ್ತೊಂದೆಡೆ, ತಮ್ಮ ಮೇಲಿನ ಟೀಕೆಗಳಿಗೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪ್ರತಿಕ್ರಿಯಿಸಿರುವ ಯಶಸ್ವಿ ಜೈಸ್ವಾಲ್, “ಅವರು ನನಗೆ ಏನು ಹೇಳಿದರು ಎಂಬುದು ತಿಳಿಯದೆ ದಯವಿಟ್ಟು ಯಾರೂ ತೀರ್ಪು ನೀಡಬೇಡಿ. ಯಾರಾದರೂ ಗೆರೆ ದಾಟಿದರೆ, ನಾವು ತಿರುಗೇಟು ನೀಡುತ್ತೇವೆ ಎಂಬುದನ್ನು ನಾವು ಅವರಿಗೆ ತಿಳಿಸಬೇಕಾಗುತ್ತದೆ” ಎಂದ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.