Hardik Pandya: ಐಪಿಎಲ್ 2022 ರಲ್ಲಿ ಎರಡನೇ ಸೋಲುಂಡ ಬಳಿಕ ಹಾರ್ದಿಕ್ ಪಾಂಡ್ಯ ಶಾಕಿಂಗ್ ಹೇಳಿಕೆ

| Updated By: Vinay Bhat

Updated on: May 04, 2022 | 10:55 AM

GT vs PBKS, IPL 2022: ಚೇಸಿಂಗ್​ನಲ್ಲಿ ಊಹಿಸಲಾಗದ ಮಟ್ಟದಲ್ಲಿ ಬಲಿಷ್ಠವಾಗಿರುವ ಗುಜರಾತ್ ಟೈಟಾನ್ಸ್ ಇದೀಗ ಮೊದಲು ಬ್ಯಾಟಿಂಗ್ ಮಾಡಿ ಪಂಜಾಬ್ ಕಿಂಗ್ಸ್ ಸೋಲುಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Hardik Pandya: ಐಪಿಎಲ್ 2022 ರಲ್ಲಿ ಎರಡನೇ ಸೋಲುಂಡ ಬಳಿಕ ಹಾರ್ದಿಕ್ ಪಾಂಡ್ಯ ಶಾಕಿಂಗ್ ಹೇಳಿಕೆ
Hardik Pandya post-match presentation GT vs PBKS
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2022 ಆರಂಭದಿಂದ ಭರ್ಜರಿ ಪ್ರದರ್ಶನ ತೋರುತ್ತಿರುವ ಗುಜರಾತ್ ಟೈಟಾನ್ಸ್ (Gujarat Titans) ತಂಡ ಇದೀಗ ಎರಡನೇ ಸೋಲು ಕಂಡಿದೆ. ತನ್ನ ಪ್ಲೇ ಆಫ್ ಹಂತವನ್ನು ಬಹುತೇಕ ಖಚಿತ ಪಡಿಸಿಕೊಂಡರೂ ಜಿಟಿ ತಂಡಕ್ಕೆ ಈ ಸೋಲು ದೊಡ್ಡ ಆಘಾತ ಉಂಟು ಮಾಡಿದೆ. ಚೇಸಿಂಗ್​ನಲ್ಲಿ ಊಹಿಸಲಾಗದ ಮಟ್ಟದಲ್ಲಿ ಬಲಿಷ್ಠವಾಗಿರುವ ಹಾರ್ದಿಕ್ ಪಡೆ ಇದೀಗ ಮೊದಲು ಬ್ಯಾಟಿಂಗ್ ಮಾಡಿ ಸೋಲುಂಡಿದೆ. ಸತತ 5 ಜಯದೊಂದಿಗೆ ಬೀಗುತ್ತಿದ್ದ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ (GT vs PBKS) ತಂಡದ ಸರ್ವಾಂಗೀಣ ನಿರ್ವಹಣೆ ಎದುರು 8 ವಿಕೆಟ್‌ಗಳಿಂದ ಶರಣಾಯಿತು. ಕಗಿಸೊ ರಬಾಡ ಮಾರಕ ದಾಳಿ ಹಾಗೂ ಅನುಭವಿ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್‌ನಿಂದ ಅಗರ್ವಾಲ್ ಬಳಗ ಪ್ಲೇಆಫ್ ರೇಸ್‌ನಲ್ಲಿ ಉಳಿದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕೆಲ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

“ನಾವು ಅಂದುಕೊಂಡಷ್ಟು ರನ್ ಗಳಿಸಲು ಸಾಧ್ಯವಾಗಲಿಲ್ಲ. 170 ರನ್ ಕಲೆಹಾಕುವುದು ನಮ್ಮ ಯೋಜನೆಯಾಗಿತ್ತು. ಆದರೆ, ನಾವು ವಿಕೆಟ್​ಗಳನ್ನು ಕಳೆದುಕೊಳ್ಳುತ್ತಾ ಸಾಗಿದೆವು. ಆ ಸ್ಕೋರ್ ಹತ್ತಿರ ಕೂಡ ತಲುಪಲು ಸಾಧ್ಯವಾಗಲಿಲ್ಲ. ನಾವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡೆವು, ಹಾಗಂತ ಅದು ತಪ್ಪು ನಿರ್ಧಾರ ಎಂದು ನಾನು ಹೇಳುವುದಿಲ್ಲ. ನಾವು ಈ ಸೀಸನ್​ನಲ್ಲಿ ಟಾರ್ಗೆಟ್ ಚೇಸ್ ಮಾಡಿದ್ದೇ ಹೆಚ್ಚು. ಅದಕ್ಕಾಗಿ ಆ ಸುಲಭವಾದ ವೃತ್ತದಿಂದ ನಾವು ಹೊರಬರಬೇಕಿತ್ತು. ನಾವು ಚೇಸಿಂಗ್​ನಲ್ಲಿ ಉತ್ತಮವಾಗಿ ಆಡಿದ್ದೇವೆ. ಆದರೆ, ಮುಂದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ನಮಗೆ ಬಂದರೆ ಯಾವರೀತಿ ಪ್ರದರ್ಶನ ತೋರಬೇಕು, ಎಷ್ಟು ಟಾರ್ಗೆಟ್ ಸೆಟ್ ಮಾಡಬೇಕು ಎಂಬುದು ತಿಳಿಯಬೇಕಿತ್ತು,” ಎಂದು ಸೋತರೂ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

“ಇದರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಸುಲಭದ ದಾರಿ ಬಿಟ್ಟು ಕಷ್ಟದ ದಾರಿ ಆಯ್ಕೆ ಮಾಡಿಕೊಂಡಾಗ ಏನೆಲ್ಲ ಸವಾಲು ಎದುರಿಸಬೇಕಾಗುತ್ತದೆ ಎಂದು ತಿಳಿದುಕೊಂಡಿದ್ದೇವೆ. ನಾವು ಪ್ರತಿ ಬಾರಿ ಗೆದ್ದಾಗ ಇನ್ನೂ ಏನು ಉತ್ತಮವಾಗಿ ಆಡಲು ಸಾಧ್ಯ ಎಂಬ ಬಗ್ಗೆ ಮಾತನಾಡಿಕೊಳ್ಳುತ್ತೇವೆ. ಈ ಪಂದ್ಯದಲ್ಲಿ ನಾವು ಅಂದುಕೊಂಡ ರೀತಿ ಸಾಗಲಿಲ್ಲ. ಮುಂದಿನ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುತ್ತೇವೆ. ಕೆಲವೇ ದಿನದಲ್ಲಿ ಮತ್ತೊಂದು ಪಂದ್ಯವಿದೆ, ಅದಕ್ಕೆ ಸಜ್ಜಾಗಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮಾಮೂಲಿ,” ಎಂಬುದು ಹಾರ್ದಿಕ್ ಮಾತು.

RCB vs CSK: ಸಿಎಸ್​​ಕೆ ವಿರುದ್ಧ ಹೊಸ ಪ್ರಯೋಗಕ್ಕೆ ಮುಂದಾದ ಆರ್​ಸಿಬಿ: ಶಹಬಾಜ್ ಔಟ್, ಈ ಆಟಗಾರ ಇನ್?

ಇನ್ನು ಗೆದ್ದ ತಂಡದ ನಾಯಕ ಮಯಾಂಕ್ ಅಗರ್ವಾಲ್ ಮಾತನಾಡಿ, “ಇಂದಿನ ಪಂದ್ಯದಲ್ಲಿ ನಾವು ಅತ್ಯುತ್ತಮವಾಗಿ ಬೌಲ್‌ ಮಾಡಿದೆವು. ಆರಂಭದಲ್ಲಿ ವಿಕೆಟ್‌ಗಳನ್ನು ಪಡೆದುಕೊಳ್ಳುವುದು ಮುಖ್ಯ. ಅದನ್ನು ನಾವು ಮಾಡಿದೆವು. ಹಾಗೆಯೆ ಮಧ್ಯಮ ಕ್ರಮಾಂಕದಲ್ಲಿಯೂ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ್ದೆವು. ಇದರಿಂದಾಗಿ 143ಕ್ಕೆ ಗುಜರಾತ್‌ ಟೈಟನ್ಸ್‌ ತಂಡವನ್ನು ನಿಯಂತ್ರಿಸಲು ಸಾಧ್ಯವಾಯಿತು. ನಾವು ಚೇಸಿಂಗ್‌ ಮಾಡುವಾಗ ಧವನ್‌ ಮತ್ತು ರಾಜಪಕ್ಷ ಅವರ ಜೊತೆಯಾಟ ಪ್ರಮುಖವಾಯಿತು. ಲಿಯಾಮ್‌ ಲಿವಿಂಗ್‌ಸ್ಟೋನ್ ಆಟ ಕೂಡ ಚೆನ್ನಾಗಿತ್ತು. ಲಿವಿಂಗ್‌ಸ್ಟೋನ್ ಕ್ರೀಸ್‌ಗೆ ತೆರಳಿ ತನಗೆ ಇಷ್ಟ ಬಂದಂತೆ ಬ್ಯಾಟ್‌ ಮಾಡಲು ಅವಕಾಶ ಮಾಡಿಕೊಡಲಾಗಿದೆ. ನಾನು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಅಗತ್ಯವಿರುವ ರೀತಿ ಬ್ಯಾಟಿಂಗ್ ಮಾಡುತ್ತೇನೆ,” ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಗುಜರಾತ್‌ ಟೈಟನ್ಸ್‌ ತಂಡ ಕಗಿಸೊ ರಬಾಡ(33ಕ್ಕೆ 4) ಮಾರಕ ದಾಲಿಗೆ ನಲುಗಿ 143 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್‌, ಶಿಖರ್‌ ಧವನ್‌(62*), ಭನುಕ ರಾಜಪಕ್ಷ(40) ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌(30) ಅವರ ಸ್ಫೋಟಕ ನೆರವಿನಿಂದ ಇನ್ನೂ ನಾಲ್ಕು ಓವರ್ ಬಾಕಿಯಿರುವಂತೆಯೇ 145 ರನ್‌ ಗಳಿಸಿ ಗೆದ್ದುಬೀಗಿತು.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:55 am, Wed, 4 May 22