‘ಇಷ್ಟೊಂದು ಫೋಟೋ ತಗೊಂಡು ಏನು ಮಾಡ್ತೀರಿ’; ವಿಮಾನ ನಿಲ್ದಾಣದಲ್ಲಿ ಕೋಪಗೊಂಡ ರೋಹಿತ್! ವಿಡಿಯೋ

Rohit Sharma: ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದನ್ನು ಕಂಡು ಕೋಪಗೊಂಡ ನಾಯಕ ರೋಹಿತ್ ಶರ್ಮಾ, ಇಷ್ಟೊಂದು ಫೋಟೋಗಳನ್ನು ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪತ್ರಕರ್ತರನ್ನು ಗದರಿದ್ದಾರೆ.

‘ಇಷ್ಟೊಂದು ಫೋಟೋ ತಗೊಂಡು ಏನು ಮಾಡ್ತೀರಿ’; ವಿಮಾನ ನಿಲ್ದಾಣದಲ್ಲಿ ಕೋಪಗೊಂಡ ರೋಹಿತ್! ವಿಡಿಯೋ
rohit sharma
Updated By: ಪೃಥ್ವಿಶಂಕರ

Updated on: Dec 03, 2022 | 11:09 AM

ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಭಾನುವಾರ ಅಂದರೆ ಡಿ.4ರಂದು ಡಾಕಾದಲ್ಲಿ ನಡೆಯಲಿದೆ. ಈ ಸರಣಿಗಾಗಿ ಈಗಾಗಲೇ ಟೀಂ ಇಂಡಿಯಾ (Team India) ಬಾಂಗ್ಲಾ ತಲುಪಿದೆ. ಈ ಸರಣಿಗಾಗಿ ಟಿ20 ವಿಶ್ವಕಪ್ (T20 World CUP) ಬಳಿಕ ವಿಶ್ರಾಂತಿ ಪಡೆದಿದ್ದ ಹಲವು ಹಿರಿಯ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಇವರಲ್ಲಿ ನಾಯಕ ರೋಹಿತ್ (Rohit Sharma), ಉಪನಾಯಕ ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮುಂತಾದವರಿದ್ದಾರೆ. ವಿಶ್ರಾಂತಿ ಬಳಿಕ ತಂಡ ಸೇರಿಕೊಂಡ ಹಿರಿಯ ಆಟಗಾರರು ಗುರುವಾರ ಮುಂಬೈನಿಂದ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರ ಫೋಟೋಗಳನ್ನು ಕ್ಲಿಕ್ಕಿಸಲು ಮುಂದಾದ ಪತ್ರಕರ್ತರ ಮೇಲೆ ಟೀಂ ಇಂಡಿಯಾ ನಾಯಕ ಸಿಡಿಮಿಡಿಗೊಂಡಿದ್ದಾರೆ.

ವಾಸ್ತವವಾಗಿ ಟೀಂ ಇಂಡಿಯಾ ಬಾಂಗ್ಲಾದೇಶದಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಟೀಂ ಇಂಡಿಯಾದಲ್ಲಿ ಅನೇಕ ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲಾಗಿದೆ. ಇದರಲ್ಲಿ ನ್ಯೂಜಿಲೆಂಡ್ ಪ್ರವಾಸ ಮಾಡಿದ್ದ ಹಲವು ಆಟಗಾರರು ಸೇರಿದ್ದಾರೆ. ಅವರೆಲ್ಲರು ಶುಕ್ರವಾರ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಿದರು. ಆದರೆ ಕಿವೀಸ್ ಪ್ರವಾಸದಿಂದ ಹೊರಗುಳಿದಿದ್ದ ಹಿರಿಯ ಆಟಗಾರರು ಗುರುವಾರ ಸರಣಿಗಾಗಿ ಮುಂಬೈನಿಂದ ಬಾಂಗ್ಲಾದೇಶಕ್ಕೆ ಪ್ರಯಾಣಿಸಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರು ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದನ್ನು ಕಂಡು ಕೋಪಗೊಂಡ ನಾಯಕ ರೋಹಿತ್ ಶರ್ಮಾ, ಇಷ್ಟೊಂದು ಫೋಟೋಗಳನ್ನು ತೆಗೆದುಕೊಂಡು ಏನು ಮಾಡುತ್ತೀರಿ ಎಂದು ಪತ್ರಕರ್ತರನ್ನು ಗದರಿದ್ದಾರೆ.

ಇದಕ್ಕೆ ಉತ್ತರಿಸಿದ ಅಲ್ಲಿದ್ದ ಪತ್ರಕರ್ತರು, ನಾವು ಮಾಧ್ಯಮದಿಂದ ಬಂದವರು. ಹೀಗಾಗಿ ನಾವು ಮಾಧ್ಯಮಗಳಿಗೆ ಫೋಟೋಗಳನ್ನು ನೀಡಬೇಕಾಗಿದೆ ಎಂದಿದ್ದಾರೆ. ಮಾಧ್ಯಮದವರ ಈ ಉತ್ತರ ಕೇಳಿಸಿಕೊಂಡ ರೋಹಿತ್ ಏನು ಪ್ರತಿಕ್ರಿಯೆ ನೀಡದೆ ಅಲ್ಲಿಂದ ನಿರ್ಗಮಿಸಿದ್ದಾರೆ. ರೋಹಿತ್ ಈ ರೀತಿ ಪ್ರತಿಕ್ರಿಯಿಸಿರುವ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ: Rohit Sharma: ಇಂದು ಮಧ್ಯಾಹ್ನ ಬಾಂಗ್ಲಾದೇಶದಲ್ಲಿ ರೋಹಿತ್ ಶರ್ಮಾ ಸುದ್ದಿಗೋಷ್ಠಿ: ಮಹತ್ವದ ಹೇಳಿಕೆ ಸಾಧ್ಯತೆ

ವಾಸ್ತವವಾಗಿ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದ ನಂತರ ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾಗೊಳಿಸಿತು. ಅಲ್ಲದೆ ಮುಂದಿನ ದಿನಗಳಲ್ಲಿ ಟಿ20 ನಾಯಕತ್ವದಿಂದ ರೋಹಿತ್​ರವನ್ನು ಕೆಳಗಿಳಿಸಿ ಅವರ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯರನ್ನು ಕರೆತರುವ ಯೋಜನೆಗಳು ಸಿದ್ದವಾಗಿವೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್‌ ಕೀಪರ್), ಇಶಾನ್ ಕಿಶನ್, ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:05 am, Sat, 3 December 22