IND vs BAN: ಕಾನ್ಪುರದಲ್ಲಿ ಮಳೆ ಆರಂಭ; ಟಾಸ್ ವಿಳಂಬ

|

Updated on: Sep 27, 2024 | 9:04 AM

IND vs BAN Kanpur Weather Forecast: ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಕಾನ್ಪುರದಲ್ಲಿ ಮಳೆ ಸುರಿಯಲಾರಂಭಿಸಿದೆ. ಹೀಗಾಗಿ ಟಾಸ್ ವಿಳಂಬವಾಗುವ ಸಾಧ್ಯತೆಗಳಿವೆ. ಮಳೆಯಿಂದಾಗಿ ಮೈದಾನದ ಮೇಲೆ ಹೊದಿಕೆಗಳನ್ನು ಹಾಕಲಾಗಿದ್ದು, ಪ್ರಸ್ತುತ ಮಳೆ ನಿಂತಿದ್ದರೂ, ಅವುಗಳನ್ನು ತೆರವುಗೊಳಿಸಲಾಗಿಲ್ಲ.

IND vs BAN: ಕಾನ್ಪುರದಲ್ಲಿ ಮಳೆ ಆರಂಭ; ಟಾಸ್ ವಿಳಂಬ
ಕಾನ್ಪುರ ಟೆಸ್ಟ್
Follow us on

ಕಾನ್ಪುರದಲ್ಲಿ ಇಂದಿನಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ನಿಗದಿಯಂತೆ ಪಂದ್ಯ ಇಂದು ಮುಂಜಾನೆ 9:30 ಕ್ಕೆ ಆರಂಭವಾಗಲಿದ್ದು, ಟಾಸ್ 9 ಗಂಟೆಗೆ ನಡೆಯಲಿದೆ. ಆದರೆ ಈ ಮೊದಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದಂತೆ ಕಾನ್ಪುರದಲ್ಲಿ ಮಳೆ ಸುರಿಯಲಾರಂಭಿಸಿದೆ. ಹೀಗಾಗಿ ಟಾಸ್ ವಿಳಂಬವಾಗಲಿದೆ. ಮಳೆಯಿಂದಾಗಿ ಮೈದಾನದ ಮೇಲೆ ಹೊದಿಕೆಗಳನ್ನು ಹಾಕಲಾಗಿದ್ದು, ಪ್ರಸ್ತುತ ಮಳೆ ನಿಂತಿದ್ದರೂ, ಅವುಗಳನ್ನು ತೆರವುಗೊಳಿಸಲಾಗಿಲ್ಲ.

ಪಂದ್ಯಕ್ಕೂ ಮುನ್ನ ಮಳೆ

ಸುಮಾರು 1000 ದಿನಗಳ ನಂತರ ಕಾನ್ಪುರದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟೀಂ ಇಂಡಿಯಾ ಕೊನೆಯದಾಗಿ 2021ರಲ್ಲಿ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತ್ತು. ಅದರ ನಂತರ ಇದೀಗ ತಂಡ, ಬಾಂಗ್ಲಾದೇಶವನ್ನು ಎದುರಿಸಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಪಂದ್ಯಕ್ಕೆ ಒಂದು ದಿನ ಮೊದಲು ಮಳೆಯಿಂದಾಗಿ, ಆಟಗಾರರು ಹೆಚ್ಚು ಸಮಯ ಅಭ್ಯಾಸ ನಡೆಸಲು ಸಾಧ್ಯವಾಗಲಿಲ್ಲ. ಇತ್ತ ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಆಟ ವಿಳಂಬವಾಗಲಿದೆ.

ಮುಂದಿನ 5 ದಿನಗಳ ಹವಾಮಾನ ವರದಿ ಇಲ್ಲಿದೆ

ಹವಾಮಾನ ಇಲಾಖೆಯ ವರದಿಯ ಪ್ರಕಾರ ಮೊದಲ ದಿನ ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಿನವಿಡೀ ದಟ್ಟವಾದ ಮೋಡ ಕವಿದ ವಾತಾವರಣ ಇರಲಿದೆ. ಹೀಗಾಗಿ ಪಂದ್ಯ ನಡೆಯುವ ಸಾಧ್ಯತೆ ಕಡಿಮೆ. ಅದರಲ್ಲೂ ಮೊದಲ ಸೆಷನ್ ನಂತರ ಶೇ.50ರಿಂದ 80ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಪಂದ್ಯದ ಎರಡನೇ ದಿನವೂ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಹವಾಮಾನ ಇಲಾಖೆ ಪ್ರಕಾರ, ಆಟದ ಮೂರನೇ ದಿನ ಅಂದರೆ ಭಾನುವಾರ ಬೆಳಿಗ್ಗೆ ಮಳೆ ಬೀಳುವ ಸಾಧ್ಯತೆ ಇದ್ದು, ಆ ಬಳಿಕ ದಿನವಿಡೀ ಮೋಡ ಕವಿದ ವಾತಾವರಣ ಇರುತ್ತದೆ. ಆದರೆ ಪಂದ್ಯದ ನಾಲ್ಕನೇ ಮತ್ತು ಐದನೇ ದಿನ ಹವಾಮಾನ ಸ್ಪಷ್ಟವಾಗಿರಲಿದ್ದು, ಪಂದ್ಯಕ್ಕೆ ಯಾವುದೇ ಅಡೆಚಣೆಗಳಿರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎರಡನೇ ಟೆಸ್ಟ್‌ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:54 am, Fri, 27 September 24