ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರನೇ ಮತ್ತು ಕೊನೆಯ ಟಿ20 ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಮೈದಾನವನ್ನು ಉಪ್ಪಲ್ ಸ್ಟೇಡಿಯಂ ಎಂತಲೂ ಕರೆಯಲಾಗುತ್ತದೆ. ಈ ಕ್ರೀಡಾಂಗಣದಲ್ಲಿ ಇದುವರೆಗೆ ಕೇವಲ 2 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಮಾತ್ರ ನಡೆದಿವೆ. ಮೊದಲೆರಡು ಪಂದ್ಯಗಳಲ್ಲಿ ಬಾಂಗ್ಲಾದೇಶವನ್ನು ಅನಾಯಾಸವಾಗಿ ಮಣಿಸಿರುವ ಭಾರತ ತಂಡ, ಪ್ರವಾಸಿ ತಂಡವನ್ನು ವೈಟ್ ವಾಶ್ ಮಾಡುವ ಉದ್ದೇಶದಿಂದ ಅಖಾಡಕ್ಕಿಳಿಯಲಿದೆ. ಮೊದಲೆರಡು ಪಂದ್ಯಗಳಂತೆ ಇಲ್ಲೂ ಕೂಡ ಬ್ಯಾಟ್ಸ್ಮನ್ಗಳು ಮೇಲುಗೈ ಸಾಧಿಸುತ್ತಾರಾ ಅಥವಾ ಹೈದರಾಬಾದ್ ಪಿಚ್ನಲ್ಲಿ ಬೌಲರ್ಗಳು ಮೇಲುಗೈ ಸಾಧಿಸುತ್ತಾರಾ?. ಈ ಪಂದ್ಯಕ್ಕೆ ಮಳೆಯ ಆತಂಕವಿದೆಯಾ? ಎಂಬುದರ ವಿವರ ಇಲ್ಲಿದೆ.
ಹೈದರಾಬಾದ್ನಲ್ಲಿ ಕೇವಲ 2 ಟಿ20 ಅಂತರರಾಷ್ಟ್ರೀಯ ಪಂದ್ಯಗಳು ನಡೆದಿರುವುದರಿಂದ ಈ ಪಿಚ್ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ ಸಾಧ್ಯ. ಆದರೆ, ಸಾಮಾನ್ಯವಾಗಿ, ಇಲ್ಲಿನ ವಿಕೆಟ್ ಫ್ಲಾಟ್ ಆಗಿರುತ್ತದೆ. ಹೀಗಾಗಿ ಈ ಪಿಚ್ನಲ್ಲಿ ಬ್ಯಾಟ್ಸ್ಮನ್ಗಳು ಹೆಚ್ಚಿನ ಸಹಾಯ ಪಡೆಯುತ್ತಾರೆ. ಆಟ ಮುಂದುವರೆದಂತೆ, ಪಿಚ್ ನಿಧಾನವಾಗುತ್ತದೆ. ಅಂದರೆ ವೇಗದ ಬೌಲರ್ಗಳಿಗಿಂತ ಸ್ಪಿನ್ನರ್ಗಳು ಮೇಲುಗೈ ಸಾಧಿಸಬಹುದು. ಇದೇ ಮೈದಾನದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಟಿ20ಯಲ್ಲಿ ಕೇವಲ 18.4 ಓವರ್ಗಳಲ್ಲಿ 209 ರನ್ಗಳ ಗುರಿಯನ್ನು ಸಾಧಿಸಿತ್ತು.
ಹೈದರಾಬಾದ್ ಪಿಚ್ನಲ್ಲಿ ಇದುವರೆಗೆ ನಡೆದ 2 ಟಿ20 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಸೋಲು ಕಂಡಿದೆ. ಪಿಚ್ ಸಮತಟ್ಟಾಗಿರುವುದರಿಂದ ಗುರಿಯನ್ನು ಬೆನ್ನಟ್ಟುವುದು ಸುಲಭವಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲೂ ಬೃಹತ್ ಸ್ಕೋರ್ ದಾಖಲಾಗುವುದನ್ನು ನಿರೀಕ್ಷಿಸಬಹುದಾಗಿದೆ.
ಹೈದರಾಬಾದ್ನಲ್ಲಿ ಇಂದು ಅಂದರೆ ಅಕ್ಟೋಬರ್ 11 ರಂದು ಶೇ.31ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಆದರೆ ಪಂದ್ಯದ ದಿನ ಅಂದರೆ ಅಕ್ಟೋಬರ್ 12 ರ ಶನಿವಾರದಂದು ಮಳೆಯಾಗುವ ಸಾಧ್ಯತೆ ಶೇ.41ಕ್ಕೆ ಏರಿಕೆಯಾಗಲಿದೆ. ಮುಂಜಾನೆ ಕೆಲವೆಡೆ ಮಳೆಯಾಗಬಹುದು ಆದರೆ ದಿನ ಕಳೆದಂತೆ ಹವಾಮಾನ ಸುಧಾರಿಸಲಿದ್ದು, ಮಳೆಯಾಗುವ ಸಾಧ್ಯತೆ ಕಡಿಮೆ. ಆದರೆ, ರಾತ್ರಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ತುಂತುರು ಮಳೆ ಬಿದ್ದರೂ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆ ತೀರ ಕಡಿಮೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ