IND vs NZ: ಕುಡಿಯುವ ನೀರಿಗೆ ಹಾಹಾಕಾರ; ತಾಳ್ಮೆ ಕಳೆದುಕೊಂಡ ಫ್ಯಾನ್ಸ್ ಬಳಿ ಕ್ಷಮೆಯಾಚಿಸಿದ ಎಂಸಿಎ

|

Updated on: Oct 24, 2024 | 8:32 PM

IND vs NZ: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಭಿಮಾನಿಗಳಿಗೆ ಕುಡಿಯುವ ನೀರಿನ ಕೊರತೆಯಿಂದಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ವಿರುದ್ಧ ಘೋಷಣೆಗಳು ಕೇಳಿಬಂದವು. ನೀರಿನ ಸಮಸ್ಯೆಯಿಂದಾಗಿ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಎಂಸಿಎ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ. ನೀರಿನ ಪೂರೈಕೆಯಲ್ಲಿ ವಿಳಂಬವಾದ ಕಾರಣಕ್ಕಾಗಿ ಈ ಘಟನೆ ಸಂಭವಿಸಿದೆ ಎಂದು ಎಂಸಿಎ ಸ್ಪಷ್ಟಪಡಿಸಿದೆ.

IND vs NZ: ಕುಡಿಯುವ ನೀರಿಗೆ ಹಾಹಾಕಾರ; ತಾಳ್ಮೆ ಕಳೆದುಕೊಂಡ ಫ್ಯಾನ್ಸ್ ಬಳಿ ಕ್ಷಮೆಯಾಚಿಸಿದ ಎಂಸಿಎ
ಟೀಂ ಇಂಡಿಯಾ
Follow us on

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಪುಣೆಯಲ್ಲಿ ನಡೆಯುತ್ತಿದೆ. ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ನಂತರವೂ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 259 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಪಂದ್ಯದ ನಡುವೆ ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಘೋಷಣೆ ಕೂಗಿದ ಪ್ರಸಂಗ ನಡೆದಿದೆ. ಅಂತಿಮವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಭಿಮಾನಿಗಳ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದೆ.

ಕುಡಿಯುವ ನೀರಿಗಾಗಿ ಪರದಾಟ

ಈ ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಮೈದಾನಕ್ಕೆ ಸರಿಯಾದ ಸಮಯಕ್ಕೆ ನೀರಿನ ಬಾಟಲಿಗಳನ್ನು ತರುವಲ್ಲಿ ಆಯೋಜಕರು ವಿಫಲರಾಗಿದ್ದು, ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಕುಡಿಯುವ ನೀರಿಗಾಗಿ ಪರದಾಟ ನಡೆಸಬೇಕಾಯಿತು. ಅತಿಯಾದ ಬಿಸಿಲಿನಿಂದ ಬಳಲಿದ್ದ ಅಭಿಮಾನಿಗಳು ಕುಡಿಯಲು ನೀರು ಸಿಗದ ಕಾರಣ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಹೀಗಾಗಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಭಿಮಾನಿಗಳ ಕ್ಷಮೆ ಕೇಳಬೇಕಾಯಿತು.

ಈ ಪಂದ್ಯವನ್ನು ವೀಕ್ಷಿಸಲು ಮೊದಲ ದಿನದಂದು 18000 ಅಭಿಮಾನಿಗಳು ಮೈದಾನಕ್ಕೆ ಆಗಮನಿಸಿದ್ದರು. ಆದರೆ ಪಂದ್ಯದ ಮೊದಲ ಸೆಷನ್‌ನಲ್ಲಿಯೇ ನೀರಿನ ಅಭಾವ ಉಂಟಾದ ಕಾರಣ ಮೈದಾನದಲ್ಲಿ ಕೊಂಚ ಗದ್ದಲ ಉಂಟಾಯಿತು. ವಾಸ್ತವವಾಗಿ ಈ ಮೈದಾನದ ಬಹುತೇಕ ಭಾಗಕ್ಕೆ ಮೇಲ್ಛಾಬಣಿ ಇಲ್ಲವಾಗಿದ್ದು, ಬಿಸಿಲಲ್ಲಿ ಕುಳಿತ ಅಭಿಮಾನಿಗಳು ಆಟದ ಮೊದಲ ಸೆಷನ್ ಮುಗಿಸಿ ನೀರಿನ ಬಾಟಲ್ ಖರೀದಿಸಲು ತೆರಳಿದ್ದಾರೆ. ಆದರೆ ನೀರಿನ ಬಾಟಲ್​ಗಳನ್ನು ಸರಿಯಾದ ಸಮಯಕ್ಕೆ ಮೈದಾನಕ್ಕೆ ತಲುಪಿಸದ ಕಾರಣ ಅಭಿಮಾನಿಗಳು ರೊಚ್ಚಿಗೆದ್ದರು.

ಅಲ್ಲದೆ ಬೂತ್‌ನಲ್ಲಿ ನೀರಿಗಾಗಿ ನೂಕುನುಗ್ಗಲು ಉಂಟಾಗಿ ಕೆಲ ಹೊತ್ತು ಕಾದು ಅಭಿಮಾನಿಗಳು ಎಂಸಿಎ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಅಷ್ಟರಲ್ಲಾಗಲೇ ಭದ್ರತಾ ಸಿಬ್ಬಂದಿ ನೀರಿನ ಬಾಟಲಿಗಳನ್ನು ಹಂಚುವ ಮೂಲಕ ಪರಿಸ್ಥಿತಿ ಶಾಂತಗೊಳಿಸಿದರು. ಅಲ್ಲದೆ ಕ್ರೀಡಾಂಗಣ ನಗರದ ಹೊರವಲಯದಲ್ಲಿರುವ ಕಾರಣ ಬೆಳಿಗ್ಗೆ ವಾಹನ ದಟ್ಟಣೆ ಹೆಚ್ಚಿದ್ದಿದ್ದರಿಂದ ನೀರು ತರುವ ವಾಹನ ತಡವಾಗಿ ಮೈದಾನಕ್ಕೆ ಬಂದಿದ್ದೆ ಈ ಅವಘಡಕ್ಕೆ ಕಾರಣವಾಯಿತು ಎಂಬುದನ್ನು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಕ್ಷಮೆಯಾಚಿಸಿದ ಎಂಸಿಎ ಕಾರ್ಯದರ್ಶಿ

ಈ ಅವಘಡದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಎಂಸಿಎ ಕಾರ್ಯದರ್ಶಿ ಕಮಲೇಶ್ ಪಿಸಾಲ್, ‘ ಈ ಅನಾನುಕೂಲಕ್ಕಾಗಿ ನಾವು ಎಲ್ಲಾ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇವೆ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸುತ್ತೇವೆ. ಪ್ರಸ್ತುತ ನೀರಿನ ಸಮಸ್ಯೆ ಬಗೆಹರಿಸಿದ್ದೇವೆ. ಊಟದ ವಿರಾಮದ ವೇಳೆಗೆ ಸಾಕಷ್ಟು ಜನಸಂದಣಿ ಇದ್ದ ಕಾರಣ ಕೆಲವು ಮಳಿಗೆಗಳಲ್ಲಿ ನೀರು ಖಾಲಿಯಾಗಿ ಕೆಲ ಸಮಸ್ಯೆಗಳು ಉಂಟಾಗಿವೆ. ನೀರಿನ ಪಾತ್ರೆಗಳನ್ನು ತುಂಬಲು ನಮಗೆ 15 ರಿಂದ 20 ನಿಮಿಷಗಳು ಬೇಕಾಗುತ್ತವೆ. ಆದ್ದರಿಂದ ನೀರು ಪೂರೈಸಲು ವಿಳಂಬವಾಯಿತು. ಹೀಗಾಗಿ ನಾವು ಪ್ರೇಕ್ಷಕರಿಗೆ ಬಾಟಲಿಯಲ್ಲಿ ನೀರನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:30 pm, Thu, 24 October 24