Rishabh Pant: ‘ಈ ಜಗತ್ತಿನಲ್ಲಿ ನನ್ನ ಸಮಯ ಮುಗಿಯಿತು’; ಆ ಕರಾಳ ರಾತ್ರಿಯ ಬಗ್ಗೆ ರಿಷಭ್ ಪಂತ್ ಮನದಾಳ

| Updated By: Digi Tech Desk

Updated on: Feb 14, 2024 | 3:11 PM

Rishabh Pant: 2022 ರ ಡಿಸೆಂಬರ್​ 31 ರಂದು ಭೀಕರ ಕಾರು ಅಪಘಾತಕ್ಕೀಡಾಗಿ ಕ್ರಿಕೆಟ್​ನಿಂದ ದೂರವಿರುವ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದು, ಮುಂಬರುವ ಐಪಿಎಲ್​ನಲ್ಲಿ ಅಖಾಡಕ್ಕಿಳಿಯಲು ತಯಾರಿ ಆರಂಭಿಸಿದ್ದಾರೆ. ಈ ನಡುವೆ ಅಂದು ನಡೆದ ಘಟನೆಯ ಬಗ್ಗೆ ರಿಷಭ್ ಪಂತ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

Rishabh Pant: ‘ಈ ಜಗತ್ತಿನಲ್ಲಿ ನನ್ನ ಸಮಯ ಮುಗಿಯಿತು’; ಆ ಕರಾಳ ರಾತ್ರಿಯ ಬಗ್ಗೆ ರಿಷಭ್ ಪಂತ್ ಮನದಾಳ
ರಿಷಭ್ ಪಂತ್
Follow us on

2022 ರ ಡಿಸೆಂಬರ್​ 31 ರಂದು ಭೀಕರ ಕಾರು ಅಪಘಾತಕ್ಕೀಡಾಗಿ (Car Accident) ಕ್ರಿಕೆಟ್​ನಿಂದ ದೂರವಿರುವ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಪ್ರಸ್ತುತ ಚೇತರಿಕೆಯ ಹಾದಿಯಲ್ಲಿದ್ದು, ಮುಂಬರುವ ಐಪಿಎಲ್​ನಲ್ಲಿ (IPL 2024) ಅಖಾಡಕ್ಕಿಳಿಯುವ ಮೂಲಕ ಮತ್ತೊಮ್ಮೆ ವೃತ್ತಿಪರ ಕ್ರಿಕೆಟ್​ನತ್ತ ತನ್ನ ಗಮನ ಹರಿಸಲು ಮುಂದಾಗಿದ್ದಾರೆ. ಕಾರು ಅಪಘಾತದಲ್ಲಿ ಕಾಲು ಮುಳೆ ಮುರಿತಕ್ಕೊಳಗಾಗಿದ್ದ ಪಂತ್​ಗೆ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಕೂಡ ನಡೆದಿತ್ತು. ಆ ಬಳಿಕ ಬಿಸಿಸಿಐನ (BCCI) ವೈಧ್ಯರ ಮೇಲ್ವಿಚಾರಣೆಯಲ್ಲಿದ್ದ ಪಂತ್ ಇದೀಗ ಬೆಂಗಳೂರಿನ ಎನ್​ಸಿಎನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಕೆಟ್​ ಅಖಾಡಕ್ಕಿಳಿಯಲು ಸಜ್ಜಾಗಿರುವ ಪಂತ್, ಬರೋಬ್ಬರಿ 1 ವರ್ಷದ ಬಳಿಕ ಆ ಕರಾಳ ರಾತ್ರಿಯ ಬಗ್ಗೆ ಮೊದಲ ಬಾರಿಗೆ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ.

ನನ್ನ ಸಮಯ ಮುಗಿದಿದೆ

ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಸ್ತುತಪಡಿಸುತ್ತಿರುವ ಬಿಲೀವ್ ಎಂಬ ಸೀರಿಸ್​ನಲ್ಲಿ ಡಿಸೆಂಬರ್ 31 ರ ಮಧ್ಯರಾತ್ರಿಯಂದು ನಡೆದ ಅಪಘಾತದ ಬಗ್ಗೆ ಮಾತನಾಡಿರುವ ಪಂತ್, ಆ ಕ್ಷಣದಲ್ಲಿ ತನಗೆ ಅನಿಸಿದ್ದನ್ನು ಮುಕ್ತವಾಗಿ ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ. ಇದೀಗ ಸ್ಟಾರ್ ಸ್ಪೋರ್ಟ್ಸ್ ಈ ಸೀರಿಸ್​ನ ಪ್ರೋಮೊವನ್ನು ಹರಿಬಿಟ್ಟಿದ್ದು ಅದರಲ್ಲಿ ಪಂತ್, ‘‘ಮೊದಲ ಬಾರಿಗೆ, ಈ ಜಗತ್ತಿನಲ್ಲಿ ನನ್ನ ಸಮಯ ಮುಗಿದಿದೆ ಎಂದು ನಾನು ಭಾವಿಸಿದೆ. ನನ್ನ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ನಂತರ ನಾನು ಸಾಯುವುದು ಖಚಿತ ಎಂದೆನಿಸಿತು.

ತಿಮ್ಮಪ್ಪನ ದರ್ಶನ ಪಡೆದ ರಿಷಭ್ ಪಂತ್- ಅಕ್ಷರ್ ಪಟೇಲ್; ತಂಡ ಸೇರುವುದು ಯಾವಾಗ? ವಿಡಿಯೋ ನೋಡಿ

ನಾನು ತುಂಬಾ ಅದೃಷ್ಟಶಾಲಿ

ಅಪಘಾತದ ಸಮಯದಲ್ಲಿ ಆದ ಗಾಯಗಳ ಬಗ್ಗೆ ನನಗೆ ತಿಳಿದಿತ್ತು. ಆದರೆ ನಾನು ಅದೃಷ್ಟಶಾಲಿಯಾಗಿದ್ದೆ ಏಕೆಂದರೆ ನನಗಾದ ಗಾಯಗಳು ಹೆಚ್ಚು ಗಂಭೀರವಾಗಿರಲಿಲ್ಲ. ಆ ಸಮಯದಲ್ಲಿ ಯಾವುದೋ ಒಂದು ಅಗೋಚರ ಶಕ್ತಿ ನನ್ನನ್ನು ಕಾಪಾಡಿದ ಹಾಗೆ ಅನಿಸಿತು. ನಾನು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರನ್ನು ಕೇಳಿದೆ. ಅದಕ್ಕೆ ಅವರು 16ರಿಂದ 18 ತಿಂಗಳು ಬೇಕು ಎಂದರು. ಈ ಚೇತರಿಕೆಯ ಸಮಯವನ್ನು ಕಡಿಮೆ ಮಾಡಲು ನಾನು ಕಷ್ಟಪಟ್ಟು ಕೆಲಸ ಮಾಡಬೇಕೆಂದು ನನಗೆ ತಿಳಿದಿತ್ತು. ನಾನು ತುಂಬಾ ಅದೃಷ್ಟಶಾಲಿ. ಏಕೆಂದರೆ ನನಗೆ ಪುನರ್​ಜನ್ಮ ಸಿಕ್ಕಿದೆ. ಎಲ್ಲರಿಗೂ ಈ ರೀತಿಯ ಅವಕಾಶ ಸಿಗುವುದಿಲ್ಲ’’ ಎಂದು ಪಂತ್ ಹೇಳಿಕೊಂಡಿದ್ದಾರೆ.

ರಿಷಬ್ ಪಂತ್​ಗೆ ಅವಕಾಶ

ಪ್ರಸ್ತುತ ಚೇತರಿಸಿಕೊಂಡಿರುವ ರಿಷಬ್ ಪಂತ್ ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಂತ್ ಪೂರ್ಣ ಪ್ರಮಾಣದ ಆಟಗಾರನಾಗಿ ಆಡುವ ಸಾಧ್ಯತೆ ಕಡಿಮೆ ಇದ್ದರೂ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ಆಡಿಸಲು ಫ್ರಾಂಚೈಸ್ ಯೋಚಿಸಿದೆ. ಅದರಂತೆ ಐಪಿಎಲ್​ನಲ್ಲಿ ಪಂತ್ ಗಮನಾರ್ಹ ಪ್ರದರ್ಶನ ನೀಡಿದರೆ, ಈ ವರ್ಷ ಜೂನ್‌ನಲ್ಲಿ ನಡೆಯಲ್ಲಿರುವ ಟಿ20 ವಿಶ್ವಕಪ್​ಗೆ ಭಾರತ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳಿವೆ.

ಪಂತ್ ವೃತ್ತಿಬದುಕು

ರಿಷಬ್ ಪಂತ್ ಇದುವರೆಗೆ ಟೀಂ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳಲ್ಲಿ 5 ಶತಕ ಮತ್ತು 11 ಅರ್ಧಶತಕ ಸೇರಿದಂತೆ 43.67 ಸರಾಸರಿಯಲ್ಲಿ 2271 ರನ್ ಗಳಿಸಿದ್ದಾರೆ. ಹಾಗೆಯೇ 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಅರ್ಧಶತಕಗಳೊಂದಿಗೆ 987 ರನ್ ಕಲೆಹಾಕಿದ್ದಾರೆ. ಭಾರತದ ಪರ 30 ಏಕದಿನ ಪಂದ್ಯಗಳನ್ನೂ ಆಡಿರುವ ಪಂತ್, 34.60 ರ ಸರಾಸರಿಯಲ್ಲಿ 865 ರನ್ (1 ಶತಕ, 5 ಅರ್ಧಶತಕ) ಗಳಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Tue, 30 January 24