ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2024 ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯವನ್ನು 7 ರನ್ಗಳಿಂದ ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡ ಎರಡನೇ ಬಾರಿಗೆ ಈ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೆ ಟ್ರೋಫಿ ಗೆದ್ದುಕೊಂಡಿತು. ಇದರೊಂದಿಗೆ ಭಾರತ 11 ವರ್ಷಗಳ ನಂತರ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಹೀಗಾಗಿ ವೆಸ್ಟ್ ಇಂಡೀಸ್ ನೆಲದಲ್ಲಿ ಟೀಂ ಇಂಡಿಯಾದ ವಿಜಯ, ದೇಶವಾಸಿಗಳ ಭಾವುಕತೆಯ ಕಟ್ಟೆ ಒಡೆಯುವಂತೆ ಮಾಡಿದೆ. ಈ ಟ್ರೋಫಿಗಾಗಿ ಕಾದು ಕುಳಿತಿದ್ದ ಟೀಂ ಇಂಡಿಯಾ ಆಟಗಾರರ ಜತೆಗೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳ ಕಣ್ಣುಗಳಲ್ಲೂ ಕೂಡ ಆನಂದ ಬಾಷ್ಪ ಹರಿದಿದೆ. ಬಾರ್ಬಡೋಸ್ನಲ್ಲಿ ರೋಹಿತ್ ಶರ್ಮಾ ಟ್ರೋಫಿ ಎತ್ತಿದ ತಕ್ಷಣ, 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಇರ್ಫಾನ್ ಪಠಾಣ್, ರಾಬಿನ್ ಉತ್ತಪ್ಪ ಕಣ್ಣೀರಿಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯದ ವೀಕ್ಷಕ ವಿವರಣೆ ನೀಡುತ್ತಿದ್ದ ಇರ್ಫಾನ್ ಪಠಾಣ್, ಭಾರತ ತಂಡ ಗೆದ್ದ ತಕ್ಷಣ ಭಾರತದ ಧ್ವಜವನ್ನು ಹಾರಿಸಿದರು. ಇದಾದ ನಂತರ ಅವರು ಅಳಲು ಆರಂಭಿಸಿದರು. ಹಲವು ವರ್ಷಗಳ ನಂತರ ರೋಹಿತ್ ಶರ್ಮಾ ನಮ್ಮ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ. ಇದಕ್ಕಾಗಿ ಇಡೀ ದೇಶವೇ ಬಹಳ ದಿನಗಳಿಂದ ಕಾಯುತ್ತಿತ್ತು ಎಂದರು. ಅಲ್ಲದೆ ಅದ್ಭುತ ಪ್ರದರ್ಶನಕ್ಕಾಗಿ ಪಠಾಣ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೆ ಧನ್ಯವಾದ ಹೇಳಿದರು. ಹಾಗೆಯೇ ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಅನ್ನು ಶ್ಲಾಘಿಸಿದ ಅವರು, ಕೊನೆಯ ಉಸಿರು ಇರುವವರೆಗೂ ಈ ಅದ್ಭುತ ಕ್ಯಾಚ್ ಅನ್ನು ಮರೆಯುವುದಿಲ್ಲ ಎಂದು ಹೇಳಿದರು.
ಇದಲ್ಲದೆ ತಂಡದ ಮಾಜಿ ಆಟಗಾರರಾದ ರಾಬಿನ್ ಉತ್ತಪ್ಪ ಹಾಗೂ ರವಿಚಂದ್ರನ್ ಅಶ್ವಿನ್ ಅವರ ನಡುವಿನ ಸಂಭಾಷಣೆಯ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಈ ಪಂದ್ಯದ ಬಗ್ಗೆ ರಾಬಿನ್ ಉತ್ತಪ್ಪ ರವಿಚಂದ್ರನ್ ಅಶ್ವಿನ್ ಜೊತೆ ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ ಉತ್ತಪ್ಪ ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದರು. ಅವರು ಅಳುವುದನ್ನು ನೋಡಿ ಅಶ್ವಿನ್ ಕೂಡ ಭಾವುಕರಾದರು.
ಟಿ20 ವಿಶ್ವಕಪ್ ಗೆದ್ದ ಬಳಿಕ ಭಾವುಕರಾದ ರೋಹಿತ್ ಶರ್ಮಾ ಮೈದಾನದಲ್ಲಿ ಕಣ್ಣೀರು ಸುರಿಸಿದ್ದರು. ನಂತರ ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ನಿಭಾಯಿಸಲು ಪ್ರಯತ್ನಿಸಿದರು. ಅವರ ಜೊತೆಗೆ ವಿರಾಟ್ ಕೊಹ್ಲಿ ಮೈದಾನದಲ್ಲಿಯೇ ಅಳಲು ಆರಂಭಿಸಿದರು. ಇಬ್ಬರೂ ಕೂಡ ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಈ ಇಬ್ಬರಿಗಿಂತ ಹೆಚ್ಚು ಭಾವುಕರಾಗಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಕಳೆದ 6 ತಿಂಗಳ ಹೋರಾಟವನ್ನು ನೆನೆದು ಕಣ್ಣೀರಿಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ