Hardik Pandya: ತಾನು ಎದುರಿಸಿದ ಕೆಟ್ಟ ದಿನಗಳ ಬಗ್ಗೆ ಕೊನೆಗೂ ಮೌನ ಮುರಿದ ಹಾರ್ದಿಕ್ ಪಾಂಡ್ಯ
Hardik Pandya: ಚಾಂಪಿಯನ್ ಪ್ರದರ್ಶನದ ಮೂಲಕ ಹಾರ್ದಿಕ್ ಕಳೆದ ಕೆಲವು ತಿಂಗಳುಗಳಿಂದ ತನ್ನನ್ನು ಮನಬಂದಂತೆ ನಿಂದಿಸಿದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ಭಾರತ ಚಾಂಪಿಯನ್ ಆದ ಬಳಿಕ ಮಾತನಾಡಿದ ಹಾರ್ದಿಕ್, ಕೆಲವು ತಿಂಗಳುಗಳಿಂದ ತಾನು ಅನುಭವಿಸಿದ ಮಾನಸಿಕ ಯಾತನೆಯ ಬಗ್ಗೆ ಮೌನ ಮುರಿದಿದ್ದಾರೆ.
![Hardik Pandya: ತಾನು ಎದುರಿಸಿದ ಕೆಟ್ಟ ದಿನಗಳ ಬಗ್ಗೆ ಕೊನೆಗೂ ಮೌನ ಮುರಿದ ಹಾರ್ದಿಕ್ ಪಾಂಡ್ಯ](https://images.tv9kannada.com/wp-content/uploads/2024/06/hardik-pandya-7.jpg?w=1280)
ಭಾರತ ತಂಡ ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗಿದೆ. ಇದಕ್ಕಾಗಿ ರೋಹಿತ್ ಶರ್ಮಾ ಜತೆಗೆ ಭಾರತ ತಂಡದ ಆಟಗಾರರು ಶ್ರಮಿಸಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಒಂದೇ ಒಂದು ಪಂದ್ಯವನ್ನು ಸೋತಿರದಿರುವುದು ತಂಡದ ಒಗ್ಗಟ್ಟಿನ ಪ್ರದರ್ಶನಕ್ಕೆ ಉದಾಹರಣೆಯಾಗಿದೆ. ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವಲ್ಲಿ ತಂಡದ ಪ್ರತಿಯೊಬ್ಬ ಆಟಗಾರರು ಶ್ರಮಿಸಿದ್ದಾರೆ. ಆದರೆ ಮಹತ್ವದ ಸಮಯದಲ್ಲಿ ಪ್ರಮುಖ 2 ವಿಕೆಟ್ ಉರುಳಿಸಿದ ಹಾರ್ದಿಕ್ ಪಾಂಡ್ಯ ಈ ಗೆಲುವಿನ ದೊಡ್ಡ ಹೀರೋ ಎನಿಸಿಕೊಂಡರು. ಈ ಚಾಂಪಿಯನ್ ಪ್ರದರ್ಶನದ ಮೂಲಕ ಹಾರ್ದಿಕ್ ಕಳೆದ ಕೆಲವು ತಿಂಗಳುಗಳಿಂದ ತನ್ನನ್ನು ಮನಬಂದಂತೆ ನಿಂದಿಸಿದವರ ಬಾಯಿ ಮುಚ್ಚಿಸುವ ಕೆಲಸ ಮಾಡಿದ್ದಾರೆ. ಭಾರತ ಚಾಂಪಿಯನ್ ಆದ ಬಳಿಕ ಮಾತನಾಡಿದ ಹಾರ್ದಿಕ್, ಕೆಲವು ತಿಂಗಳುಗಳಿಂದ ತಾನು ಅನುಭವಿಸಿದ ಮಾನಸಿಕ ಯಾತನೆಯ ಬಗ್ಗೆ ಮೌನ ಮುರಿದಿದ್ದಾರೆ.
ಕೆಟ್ಟ ಸಮಯ ಶಾಶ್ವತವಾಗಿ ಉಳಿಯುವುದಿಲ್ಲ- ಹಾರ್ದಿಕ್
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಹಾರ್ದಿಕ್, ‘ನಾನು ಘನತೆಯ ಮೇಲೆ ನಂಬಿಕೆ ಇಟ್ಟಿದ್ದೇನೆ. ನನ್ನ ಬಗ್ಗೆ ಒಂದು ಪರ್ಸೆಂಟ್ ಕೂಡ ಗೊತ್ತಿಲ್ಲದ ಜನರು ನನ್ನ ಬಗ್ಗೆ ತುಂಬಾ ಮಾತನಾಡಿದರು. ಜನ ಮಾತಾಡಿದರೂ ಪರವಾಗಿಲ್ಲ. ಯಾವಾಗಲೂ ಮಾತಿನಲ್ಲಿ ಪ್ರತಿಕ್ರಿಯಿಸಬಾರದು, ಸಂದರ್ಭಗಳು ಪ್ರತಿಕ್ರಿಯಿಸಬೇಕು ಎಂದು ನಂಬಿರುವವನು ನಾನು. ಕೆಟ್ಟ ಸಮಯ ಶಾಶ್ವತವಾಗಿ ಉಳಿಯುವುದಿಲ್ಲ. ಆದರೆ ಗೆದ್ದರೂ ಸೋತರೂ ಘನತೆ ಕಾಪಾಡುವುದು ಮುಖ್ಯ.
ಅಭಿಮಾನಿಗಳು ಮತ್ತು ಪ್ರತಿಯೊಬ್ಬರೂ ಇದನ್ನು ಕಲಿಯಬೇಕು (ಸಭ್ಯವಾಗಿ ಬದುಕಲು). ನಾವು ಉತ್ತಮ ನಡವಳಿಕೆಯನ್ನು ರೂಡಿಸಿಕೊಳ್ಳಬೇಕು. ಆ ಜನರು ಮಾತ್ರ ಸಂತೋಷವಾಗಿರುತ್ತಾರೆ ಎಂಬುದು ನನ್ನ ಅನಿಸಿಕೆಯಾಗಿದೆ. ನಿಜ ಹೇಳಬೇಕೆಂದರೆ, ನಾನು ಪ್ರತಿಯೊಂದನ್ನು ಆನಂದಿಸುತ್ತಿದ್ದೆ. ಕೆಲವೇ ಕೆಲವು ಜನರು ಇಂತಹ ಜೀವನವನ್ನು ಬದಲಾಯಿಸುವ ಅವಕಾಶಗಳನ್ನು ಪಡೆಯುತ್ತಾರೆ. ಅದರಲ್ಲಿ ನಾನೂ ಒಬ್ಬ ಎಂಬುದು ನನಗೆ ಹೆಮ್ಮೆ ಎನಿಸಿದೆ.
View this post on Instagram
ಕೊಹ್ಲಿ- ರೋಹಿತ್ ಬಗ್ಗೆ ಹಾರ್ದಿಕ್ ಮಾತು
ನಾನು ಎಂದೂ ಒತ್ತಡಕ್ಕೆ ಒಳಗಾಗಲಿಲ್ಲ. ಬದಲಿಗೆ ನನ್ನ ಕೌಶಲ್ಯದಲ್ಲಿ ವಿಶ್ವಾಸವಿಟ್ಟೆ ಎಂದರು. ಇನ್ನು ಮುಂದಿನ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಲ್ಲಿದ್ದು, ಟೀಂ ಇಂಡಿಯಾವನ್ನು ಹಾರ್ದಿಕ್ ಮುನ್ನಡೆಸಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಉತ್ತರಿಸಿದ ಅವರು, ‘ನಾನು ಅಷ್ಟು ದೂರ ಯೋಚಿಸುತ್ತಿಲ್ಲ. 2026ಕ್ಕೆ ಸಾಕಷ್ಟು ಸಮಯವಿದೆ. ರೋಹಿತ್ ಮತ್ತು ವಿರಾಟ್ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ. ಈ ಗೆಲುವಿಗೆ ಅರ್ಹರಾದ ಭಾರತೀಯ ಕ್ರಿಕೆಟ್ನ ಇಬ್ಬರು ದಿಗ್ಗಜರು ಅವರು. ಈ ಸ್ವರೂಪದಲ್ಲಿ ಅವರೊಂದಿಗೆ ಆಡುವುದು ಖುಷಿಯಾಯಿತು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ವಿದಾಯ ಹೇಳಲುಅವರಿಗೆ ಇದಕ್ಕಿಂತ ಉತ್ತಮ ಸಮಯ ಇರಲು ಸಾಧ್ಯವಿಲ್ಲ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ