ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ RCB ಮಾಲಕಿ: ವಿಡಿಯೋ ವೈರಲ್!
ಆರ್ಸಿಬಿ (RCB) ಸಹ-ಮಾಲಕಿ ಹಾಗೂ ಉದ್ಯಮಿ ಅನನ್ಯಾ ಬಿರ್ಲಾ ಅವರು ಇತ್ತೀಚೆಗೆ ಪ್ರವಾಹ ಪೀಡಿತ ಅಸ್ಸಾಂಗೆ ಖುದ್ದಾಗಿ ಭೇಟಿ ನೀಡಿ, ಅಲ್ಲಿನ ಸಂತ್ರಸ್ತ ಸಮುದಾಯಗಳಿಗೆ ನೆರವು ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇವಲ ಸಾಮಾಜಿಕ ಮಾಧ್ಯಮಗಳಲ್ಲಿ ಸಾಂತ್ವನ ಹೇಳುವುದಕ್ಕೆ ಸೀಮಿತವಾಗದ ಅವರು, ತಮ್ಮ ತಂಡದೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳ ಭೇಟಿ ನೀಡಿ ನೆರವು ನೀಡಿರುವುದು ವಿಶೇಷ.

ಅಸ್ಸಾಂ ರಾಜ್ಯವು ಈ ವರ್ಷ ಭೀಕರ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಲಕ್ಷಾಂತರ ಜನರ ಬದುಕು ತಲ್ಲಣಗೊಂಡಿದೆ. ಇಂತಹ ಕಷ್ಟದ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸಹ-ಮಾಲಕಿ ಹಾಗೂ ಉದ್ಯಮಿ ಅನನ್ಯಾ ಬಿರ್ಲಾ ನೆರವಿನ ಹಸ್ತ ಚಾಚಿದ್ದಾರೆ.
ರಂಗಕ್ಕಿಳಿದ ಬಿರ್ಲಾ ಫೌಂಡೇಶನ್:
ಅನನ್ಯಾ ಬಿರ್ಲಾ ಅವರು ತಮ್ಮ ‘ಅನನ್ಯಾ ಬಿರ್ಲಾ ಫೌಂಡೇಶನ್’ ಮೂಲಕ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ದೊಡ್ಡ ಮಟ್ಟದ ಪರಿಹಾರ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ಕೇವಲ ಹಣಕಾಸಿನ ನೆರವು ನೀಡುವುದಷ್ಟೇ ಅಲ್ಲದೆ, ಪ್ರವಾಹದಿಂದ ತತ್ತರಿಸಿರುವ ಜೋರ್ಹತ್ ಮತ್ತು ಶಿವಸಾಗರ್ ಸೇರಿದಂತೆ ಹಲವು ಜಿಲ್ಲೆಗಳ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದಾರೆ. ಇದೀಗ ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೂರು ನಗರಗಳಲ್ಲಿ ಕಲೆಕ್ಷನ್ ಸೆಂಟರ್ಗಳು:
ಅಸ್ಸಾಂ ಜನರಿಗಾಗಿ ದೇಶಾದ್ಯಂತ ನೆರವು ಸಂಗ್ರಹಿಸಲು ಅನನ್ಯಾ ಬಿರ್ಲಾ ಅವರು ಬೆಂಗಳೂರು, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಜುಲೈ 28 ರಿಂದ ಆಗಸ್ಟ್ 2 ರವರೆಗೆ ವಿಶೇಷ ಪರಿಹಾರ ಸಾಮಗ್ರಿ ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿದ್ದರು. ಸಾರ್ವಜನಿಕರು ನೀಡಿದ ಕೊಡುಗೆಗಳನ್ನು ನೇರವಾಗಿ ಸಂತ್ರಸ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ಅವರ ತಂಡ ಯಶಸ್ವಿಯಾಗಿ ನಿಭಾಯಿಸಿದೆ.
ಸಂತ್ರಸ್ತರಿಗೆ ವಿತರಿಸಲಾದ ಸಾಮಗ್ರಿಗಳು:
- ಒಣ ರೇಷನ್ ಕಿಟ್ಗಳು: ಅಕ್ಕಿ, ಬೇಳೆಕಾಳುಗಳು ಮತ್ತು ಅಡುಗೆ ಎಣ್ಣೆ.
- ಆರೋಗ್ಯ ಮತ್ತು ನೈರ್ಮಲ್ಯ ಕಿಟ್ಗಳು: ಸೋಪು, ಟೂತ್ಪೇಸ್ಟ್ ಮತ್ತು ಸ್ಯಾನಿಟರಿ ಪ್ಯಾಡ್ಗಳು.
- ತುರ್ತು ಸಾಮಗ್ರಿಗಳು: ಸೊಳ್ಳೆ ಪರದೆಗಳು, ಟಾರ್ಪಾಲಿನ್ಗಳು ಮತ್ತು ಮಕ್ಕಳಿಗೆ ಅಗತ್ಯವಿರುವ ಶೈಕ್ಷಣಿಕ ಪರಿಕರಗಳು.
“ಇದು ನನ್ನ ಕರ್ತವ್ಯ”
ಅಸ್ಸಾಂನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದಾಗ, ಪಾಪರಾಜಿಗಳು ಅವರ ಈ ಮಹತ್ಕಾರ್ಯವನ್ನು ಶ್ಲಾಘಿಸಿದರು. ಅದಕ್ಕೆ ಅತ್ಯಂತ ಸರಳವಾಗಿ ಉತ್ತರಿಸಿದ ಅನನ್ಯಾ, “ಇದು ನನ್ನ ಕರ್ತವ್ಯ,” ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಯಾವುದೇ ಮಾತುಕತೆ ನಡೆದಿಲ್ಲ: ಮುಂಬೈ ಇಂಡಿಯನ್ಸ್ನಿಂದ ಸ್ಪಷ್ಟನೆ!
ಸಾಮಾಜಿಕ ಜಾಲತಾಣಗಳಲ್ಲಿ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಅವರನ್ನು ಕೊಂಡಾಡುತ್ತಿದ್ದಾರೆ. ಅಸ್ಸಾಂ ಜನರ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವ ತಮಗೆ ತೀವ್ರ ಸ್ಫೂರ್ತಿ ನೀಡಿದೆ ಎಂದು ಅನನ್ಯಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.




