T20 World Cup 2024: ವಿಶ್ವ ಕ್ರಿಕೆಟ್ನ ಬಿಗ್ ಬಾಸ್ ಜಯ್ ಶಾಗೆ ಹೊಸ ಹೆಸರಿಟ್ಟ ರವಿಶಾಸ್ತ್ರಿ
T20 World Cup 2024: ಟೀಂ ಇಂಡಿಯಾಗೆ ಶುಭ ಹಾರೈಸಿರುವ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ತಮ್ಮ ಎಕ್ಸ್ ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು ಅದರಲ್ಲಿ ಅವರು, ‘ಜಯ್ ಶಾ, 4 ತಿಂಗಳ ಹಿಂದೆ ನೀವು ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಿದ್ದೀರಿ. ಇದರ ಜೊತೆಗೆ ಭಾರತ ಈ ಬಾರಿ ಕಪ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದೀರಿ. ಹೀಗಾಗಿ ನಿಮ್ಮ ಹೊಸ ಹೆಸರು ‘ಜೈ ನಾಸ್ಟ್ರಾಡಾಮಸ್ ಶಾ’ ಎಂದು ರವಿಶಾಸ್ತ್ರಿ ಬರೆದುಕೊಂಡಿದ್ದಾರೆ.
![T20 World Cup 2024: ವಿಶ್ವ ಕ್ರಿಕೆಟ್ನ ಬಿಗ್ ಬಾಸ್ ಜಯ್ ಶಾಗೆ ಹೊಸ ಹೆಸರಿಟ್ಟ ರವಿಶಾಸ್ತ್ರಿ](https://images.tv9kannada.com/wp-content/uploads/2024/06/jay-shah-1.jpg?w=1280)
ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿರುವ ಟೀಂ ಇಂಡಿಯಾ ಈ ಚುಟುಕು ಮಾದರಿಯಲ್ಲಿ ಅಧಿಕ ಬಾರಿ ಟ್ರೋಫಿ ಎತ್ತಿಹಿಡಿದ ತಂಡಗಳ ಪೈಕಿ ಇದೀಗ ಜಂಟಿ ಅಗ್ರಸ್ಥಾನಕ್ಕೇರಿದೆ. ಭಾರತವನ್ನು ಬಿಟ್ಟರೆ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಾತ್ರ ತಲಾ 2 ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿದಿವೆ. ಇದೀಗ ಚುಟುಕು ಮಾದರಿಯಲ್ಲಿ ವಿಶ್ವ ಸಾಮ್ರಾಟನೆನಿಸಿಕೊಂಡಿರುವ ರೋಹಿತ್ ಪಡೆಗೆ ಇಡೀ ವಿಶ್ವವೇ ಶುಭಾಶಯಗಳ ಮಹಾಪೂರವನ್ನು ಹರಿಸುತ್ತಿವೆ. ಇದು ಸಾಲದೆಂಬಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇದೀಗ ತಂಡಕ್ಕೆ ಬರೋಬ್ಬರಿ 125 ಕೋಟಿ ರೂಗಳನ್ನು ಬಹುಮಾನವನ್ನಾಗಿ ಘೋಷಿಸಿದ್ದಾರೆ. ಭಾರಿ ಗಾತ್ರದ ಬಹುಮಾನವನ್ನು ಘೋಷಿಸುವ ಮೂಲಕ ವಿಶ್ವ ಕ್ರಿಕೆಟ್ಗೆ ಬಿಸಿಸಿಐನ ಶ್ರೀಮಂತಿಕೆ ಬಲ ಪ್ರದರ್ಶಿಸಿರುವ ಜಯ್ ಶಾಗೆ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಹೊಸ ಹೆಸರಿಟ್ಟಿದ್ದಾರೆ.
ಭವಿಷ್ಯ ನುಡಿದಿದ್ದ ಜಯ್ ಶಾ
ವಾಸ್ತವವಾಗಿ ಇದು ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾದ ಮೊದಲ ವಿಶ್ವಕಪ್ ಟ್ರೋಫಿ ಇದಾಗಿದೆ. ಆದರೆ ಈ ಬಾರಿಯ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡದ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಅದರಲ್ಲೂ ಈ ಚುಟುಕು ವಿಶ್ವಕಪ್ಗೆ ಯುವಪಡೆಯನ್ನು ಕಣಕ್ಕಿಳಿಸಬೇಕು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಅದರಲ್ಲೂ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನು ತಂಡದಿಂದ ಹೊರಗಿಡಬೇಕು. ಇದರ ಜೊತೆಗೆ ಹಾರ್ದಿಕ್ಗೆ ನಾಯಕತ್ವ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು.
T20 World Cup 2024: ಭಾರತಕ್ಕೆ ವಿಶ್ವ ಕಿರೀಟ: ಕಣ್ಣೀರಿಟ್ಟ ಪಠಾಣ್, ಉತ್ತಪ್ಪ, ಅಶ್ವಿನ್; ವಿಡಿಯೋ ನೋಡಿ
ಆದರೆ ಧೃಡಸಂಕಲ್ಪ ಮಾಡಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟಿ20 ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾವನ್ನು ಮುನ್ನಡೆಸುತ್ತಾರೆ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟು ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಇದರ ಜೊತೆಗೆ ಜೂನ್ 29 ರಂದು ನಡೆಯಲ್ಲಿರುವ ಫೈನಲ್ ಪಂದ್ಯವನ್ನು ಗೆದ್ದು ಟೀಂ ಇಂಡಿಯಾ ಚಾಂಪಿಯನ್ ಆಗಲಿದೆ ಎಂದು ಜೈ ಶಾ ಹೇಳಿದ್ದರು. ಇದೀಗ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದು ಕೂಡ ವೈರಲ್ ಆಗುತ್ತಿದೆ.
ರವಿಶಾಸ್ತ್ರಿ ಅವರ ವಿಶೇಷ ಪೋಸ್ಟ್
ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾಗೆ ಶುಭ ಹಾರೈಸಿರುವ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ, ತಮ್ಮ ಎಕ್ಸ್ ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದು ಅದರಲ್ಲಿ ಅವರು, ‘ಜಯ್ ಶಾ, 4 ತಿಂಗಳ ಹಿಂದೆ ನೀವು ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಿದ್ದೀರಿ. ಇದರ ಜೊತೆಗೆ ಭಾರತ ಈ ಬಾರಿ ಕಪ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದೀರಿ. ಹೀಗಾಗಿ ನಿಮ್ಮ ಹೊಸ ಹೆಸರು ‘ಜೈ ನಾಸ್ಟ್ರಾಡಾಮಸ್ ಶಾ’ ಎಂದು ರವಿಶಾಸ್ತ್ರಿ ಬರೆದುಕೊಂಡಿದ್ದಾರೆ.
Well done, @JayShah. Your new name is Jay Nostradamus Shah. You appointed @ImRo45 captain 4 months ago and predicted India will lift the cup today. pic.twitter.com/IJqyCxGpUl
— Ravi Shastri (@RaviShastriOfc) June 30, 2024
7 ರನ್ಗಳ ಜಯ
ಫೈನಲ್ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 176 ರನ್ ಗಳಿಸಿತ್ತು. ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ 76 ರನ್ಗಳ ಇನಿಂಗ್ಸ್ ಆಡಿದ್ದರು. ಇದಾದ ಬಳಿಕ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 169 ರನ್ ಗಳಿಸಲಷ್ಟೇ ಶಕ್ತವಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 pm, Sun, 30 June 24