
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿ, 2022ರಲ್ಲಿ ತಮ್ಮ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು ಇಂದಿಗೂ ಕ್ರಿಕೆಟ್ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ 1983ರ ವಿಶ್ವಕಪ್ ವಿಜೇತ ತಂಡದ ಮಾಜಿ ಆಟಗಾರ ಮದನ್ ಲಾಲ್ ಈ ಕುರಿತು ಸ್ಪೋಟಕ ಹೇಳಿಕೆ ನೀಡಿದ್ದು, ಕೊಹ್ಲಿ ನಾಯಕತ್ವ ಬಿಡುವಂತೆ ಮಾಡಿದ್ದು ಬಿಸಿಸಿಐ ಮತ್ತು ಅಂದಿನ ಆಯ್ಕೆ ಸಮಿತಿ ಮಾಡಿದ ಅತ್ಯಂತ ದೊಡ್ಡ ತಪ್ಪು ಎಂದು ಕಿಡಿಕಾರಿದ್ದಾರೆ.
ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮದನ್ ಲಾಲ್, ಅಂದಿನ ಕ್ರಿಕೆಟ್ ಮಂಡಳಿಯ ನಿರ್ಧಾರಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಂದು ಆಯ್ಕೆಗಾರರು ಮತ್ತು ಕೊಹ್ಲಿ ನಡುವೆ ಸರಿಯಾದ ಸಂವಹನ ಇರಲಿಲ್ಲ. ಇದು ತಂಡದಲ್ಲಿ ಗೊಂದಲ ಸೃಷ್ಟಿಸಿತು.
ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸಮರ್ಥರಾಗಿದ್ದರು. ಅವರನ್ನು ನಾಯಕತ್ವದಲ್ಲೇ ಮುಂದುವರಿಯುವಂತೆ ಮಂಡಳಿ ಒಪ್ಪಿಸಬೇಕಿತ್ತು ಎಂದಿದ್ದಾರೆ.
ವಿರಾಟ್ ಕೊಹ್ಲಿ ಅವರಂತಹ ಅಗ್ರ ಕ್ರಮಾಂಕದ ಆಟಗಾರ ಇಷ್ಟು ಬೇಗ ನಾಯಕತ್ವದಿಂದ ಕೆಳಗಿಳಿದಿದ್ದು ಭಾರತೀಯ ಟೆಸ್ಟ್ ಕ್ರಿಕೆಟ್ಗೆ ತುಂಬಲಾರದ ನಷ್ಟ ಎಂದು ಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದ ಶೈಲಿಯನ್ನು ಶ್ಲಾಘಿಸಿದ ಮದನ್ ಲಾಲ್, ಭಾರತೀಯ ಟೆಸ್ಟ್ ಕ್ರಿಕೆಟ್ಗೆ ಆಕ್ರಮಣಕಾರಿ ಗುಣವನ್ನು ತಂದಿದ್ದೇ ಕೊಹ್ಲಿ ಎಂದು ನೆನಪಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾದಂತಹ ಕಠಿಣ ವಿದೇಶಿ ಪಿಚ್ಗಳ ಮೇಲೆ ಎದುರಾಳಿಗಳ ಕಣ್ಣಲ್ಲಿ ಕಣ್ಣಿಟ್ಟು ಹೋರಾಡುವ ಮತ್ತು ಪಂದ್ಯಗಳನ್ನು ಗೆಲ್ಲುವ ಹೊಸ ಆಟದ ಸಂಸ್ಕೃತಿಯನ್ನು ಅವರು ತಂಡದಲ್ಲಿ ಬಿತ್ತಿದ್ದರು ಎಂದು ಕೊಂಡಾಡಿದ್ದಾರೆ.
ಇದಾಗ್ಯೂ ಆಯ್ಕೆ ಸಮಿತಿ ಅವರನ್ನು ಬೇಗನೆ ನಾಯಕತ್ವದಿಂದ ಕೆಳಗಿಳಿಸಿದ್ದು ಅಪಕ್ವದ ನಿರ್ಧಾರ. ಕೊಹ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಸಮರ್ಥರಾಗಿದ್ದರು. ಹೀಗಾಗಿ ಅವರನ್ನೇ ನಾಯಕತ್ವದಲ್ಲೇ ಮುಂದುವರಿಯುವಂತೆ ಬಿಸಿಸಿಐ ಮನವೊಲಿಸಬೇಕಿತ್ತು. ಆದರೆ ಬಿಸಿಸಿಐ ಆಗಲಿ, ಆಯ್ಕೆ ಸಮಿತಿ ಆಗಲಿ ಅಂತಹ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಮದನ್ ಲಾಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಜನವರಿ 2022ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ನಾಯಕತ್ವ ತ್ಯಜಿಸಿದ್ದರು. ಇದಕ್ಕೆ ಮುಖ್ಯ ಕಾರಣ ಬಿಸಿಸಿಐ ಪದಾಧಿಕಾರಿಗಳ ಜೊತೆಗಿನ ಶೀತಲ ಸಮರ.
ಇದನ್ನೂ ಓದಿ: ಕಾಮನ್ವೆಲ್ತ್ ಗೇಮ್ಸ್ 2026: ಕಣದಲ್ಲಿರುವ 126 ಭಾರತೀಯರ ಪಟ್ಟಿ ಇಲ್ಲಿದೆ
ಕೊಹ್ಲಿ ಟಿ20 ನಾಯಕತ್ವದಿಂದ ಸ್ವಯಂಪ್ರೇರಿತರಾಗಿ ಕೆಳಗಿಳಿದ ಬೆನ್ನಲ್ಲೇ, ಅವರನ್ನು ಏಕದಿನ ತಂಡದ ನಾಯಕತ್ವದಿಂದಲೂ ಬಿಸಿಸಿಐ ಬಲವಂತವಾಗಿ ಕೆಳಗಿಳಿಸಿತ್ತು. ಇದರಿಂದ ಮನನೊಂದು ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಆದರೆ ಅಂದು ಕೊಹ್ಲಿಯನ್ನು ಮನವೊಲಿಸಿ ನಾಯಕತ್ವದಲ್ಲೇ ಮುಂದುವರೆಸಬೇಕಿತ್ತು ಎಂದು ಮದನ್ ಲಾಲ್ ಬಲವಾಗಿ ಪ್ರತಿಪಾದಿಸಿದ್ದಾರೆ.