
ಇತ್ತೀಚಿನ ದಿನಗಳಲ್ಲಿ ಟೀಂ ಇಂಡಿಯಾದ ಹಲವು ಯುವ ಕ್ರಿಕೆಟಿಗರು ಜಿಂಬಾಬ್ವೆಯಲ್ಲಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇನ್ನೂ ಕೆಲವರು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಇನ್ನೊಂದೆಡೆ ಇಡೀ ತಂಡ ಏಷ್ಯಾಕಪ್ಗೆ (Asia Cup) ಸಿದ್ಧತೆಯಲ್ಲಿ ತೊಡಗಿದೆ. ಅದೇ ಸಮಯದಲ್ಲಿ, ಇತ್ತೀಚಿನ ತಿಂಗಳುಗಳಲ್ಲಿ ಟೀಮ್ ಇಂಡಿಯಾದಿಂದ ದೂರವಿರುವ ಕೆಲವು ಆಟಗಾರರು ದೇಶೀ ಲೀಗ್ಗಳಲ್ಲಿ ತಮ್ಮ ಆರ್ಭಟ ಶುರು ಮಾಡಿದ್ದಾರೆ. ಅವರಲ್ಲಿ ಅನುಭವಿ ಬ್ಯಾಟ್ಸ್ಮನ್ ಮನೀಶ್ ಪಾಂಡೆ (Manish Pandey) ಕೂಡ ಒಬ್ಬರು. ಪಾಂಡೆ ಕರ್ನಾಟಕದ ಮಹಾರಾಜ ಟಿ 20 ಲೀಗ್ನಲ್ಲಿ ( Maharaja T20 League) ಆಡುತ್ತಿದ್ದು, ಅಬ್ಬರದ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಈ ಟಿ20 ಪಂದ್ಯಾವಳಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆಡುತ್ತಿರುವ ಅನುಭವಿ ಬ್ಯಾಟ್ಸ್ಮನ್ ಮತ್ತು ತಂಡದ ನಾಯಕ ಮನೀಶ್ ಪಾಂಡೆ ಈಗಾಗಲೇ 3 ಅರ್ಧಶತಕಗಳನ್ನು ಗಳಿಸಿದ್ದಾರೆ. ಆಗಸ್ಟ್ 21ರ ಭಾನುವಾರ ಮತ್ತೊಮ್ಮೆ ತಮ್ಮ ಅಮೋಘ ಪ್ರದರ್ಶನ ನೀಡಿ ಬೌಲರ್ಗಳನ್ನು ಬೆಂಡೆತ್ತಿದ ಮನೀಶ್ ಮತ್ತೊಂದು ಅರ್ಧಶತಕ ಬಾರಿಸಿದರು.
ಮನೀಶ್ ಪಾಂಡೆ ಅಬ್ಬರದ ಅರ್ಧಶತಕ
ಬೆಂಗಳೂರಿನಲ್ಲಿ ಭಾನುವಾರ ನಡೆದ ಗುಲ್ಬರ್ಗ ಮತ್ತು ಮೈಸೂರು ವಾರಿಯರ್ಸ್ ನಡುವಿನ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿತು. ಆದರೆ, ತಂಡದ ಆರಂಭ ಉತ್ತಮವಾಗಿರದೇ 10ನೇ ಓವರ್ ಅಷ್ಟರಲ್ಲಿ 68 ರನ್ಗಳಿಗೆ 3 ವಿಕೆಟ್ಗಳು ಪತನಗೊಂಡಿದ್ದವು. ಹೀಗಿರುವಾಗ ನಾಯಕ ಮನೀಶ್ ಪಾಂಡೆ ಕ್ರೀಸ್ಗೆ ಕಾಲಿಟ್ಟಿದ್ದು, ಬಂದ ಕೂಡಲೇ ಮೈಸೂರು ಬೌಲರ್ಗಳನ್ನು ದಂಡಿಸಲಾರಂಭಿಸಿದರು.
ಈ ವೇಳೆ ಮನೀಶ್ ಪಾಂಡೆ 18ನೇ ಓವರ್ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದರು. ಅವರು ಕೇವಲ 26 ಎಸೆತಗಳಲ್ಲಿ ಈ ಅರ್ಧಶತಕವನ್ನು ಪೂರ್ಣಗೊಳಿಸಿ ನಂತರದ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಮಳೆಯಿಂದಾಗಿ ರನ್ಗಳ ಬಿರುಗಾಳಿ ನಿಂತಿತು
ತಂಡವನ್ನು ಉತ್ತಮ ಸ್ಥಿತಿಗೆ ತಂದ ಮನೀಶ್ ಪಾಂಡೆ 18 ನೇ ಓವರ್ ಅಷ್ಟರಲ್ಲಿ ತಂಡದ ಸ್ಕೋರ್ 148 ರನ್ ತಲುಪುವುದಕ್ಕೆ ಕಾರಣರಾದರು. ಪಾಂಡೆ ಅವರ ಬ್ಯಾಟ್ನಿಂದ ರನ್ಗಳ ಸುರಿಮಳೆಯಾಗುತ್ತಿತ್ತು. ಹೀಗಾಗಿ ಮನೀಶ್ ಅಬ್ಬರ ತಡೆಯಲು ಮೈಸೂರು ತಂಡಕ್ಕೆ ಕಷ್ಟಕರವಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಪಂದ್ಯ ನಿಲ್ಲುವವರೆಗೂ ಮನೀಶ್ ಪಾಂಡೆ 27 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 57 ರನ್ ಗಳಿಸಿದ್ದರು. ಇದಕ್ಕೂ ಮೊದಲು ಅವರು ಕೃಷ್ಣನ್ ಶ್ರೀಜಿತ್ ಅವರೊಂದಿಗೆ 39 ಎಸೆತಗಳಲ್ಲಿ 57 ರನ್ಗಳ ಜೊತೆಯಾಟವನ್ನು ಹಂಚಿಕೊಂಡರು
Published On - 7:50 pm, Sun, 21 August 22