MS Dhoni: ನನ್ನ ಕೊನೆಯ ಪಂದ್ಯ ಚೆನ್ನೈನಲ್ಲಿ…ನಿವೃತ್ತಿಯ ಸುಳಿವು ನೀಡಿದ್ರಾ ಧೋನಿ..!
IPL 2022: ಚೆಪಾಕ್ ಸ್ಟೇಡಿಯಂನಲ್ಲಿ ಆಡಿದ ಪಂದ್ಯಗಳನ್ನು ನೆನಪಿಸಿಕೊಂಡ ಧೋನಿ, ಅಲ್ಲಿನ ಅಭಿಮಾನಿಗಳ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲಿನ ಅಭಿಮಾನಿಗಳು ಪ್ರತಿಯೊಬ್ಬರನ್ನೂ ಗೌರವಿಸುತ್ತಾರೆ. ಎದುರಾಳಿ ತಂಡಗಳ ಆಟಗಾರರನ್ನು ಕೂಡ ಬೆಂಬಲಿಸುತ್ತಾರೆ.

ಟಿ20 ಕ್ರಿಕೆಟ್ನ ಸ್ಪೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಅವರ ನಿವೃತ್ತಿ ಬೆನ್ನಲ್ಲೇ ಇದೀಗ ಮಹೇಂದ್ರ ಸಿಂಗ್ ಧೋನಿಯ ಅವರ ಮುಂದಿನ ನಡೆಯೇನು? ಎಂಬ ಚರ್ಚೆಗಳು ಶುರುವಾಗಿದೆ. ಏಕೆಂದರೆ ಧೋನಿ ಮುಂದಿನ ಸೀಸನ್ ಐಪಿಎಲ್ ಮೂಲಕ ಕ್ರಿಕೆಟ್ ಅಂಗಳಕ್ಕೆ ವಿದಾಯ ಹೇಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ಧೋನಿ ನೀಡಿರುವ ಹೇಳಿಕೆಯೊಂದು ಮಹತ್ವ ಪಡೆದುಕೊಂಡಿದೆ. ಚೆನ್ನೈನಲ್ಲಿ ನಡೆದ ‘ದಿ ಚಾಂಪಿಯನ್ಸ್ ಕಾಲ್’ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ, ನಾನು ಭಾರತದಲ್ಲಿ ನನ್ನ ಕೊನೆಯ ಏಕದಿನ ಪಂದ್ಯವನ್ನು ತವರಿನ ಪಿಚ್ ರಾಂಚಿ ಸ್ಟೇಡಿಯಂನಲ್ಲಿ ಆಡಿದ್ದೆ. ಹೀಗಾಗಿ ಟಿ20 ಕ್ರಿಕೆಟ್ನ ನನ್ನ ಕೊನೆಯ ಪಂದ್ಯವನ್ನು ಚೆನ್ನೈನಲ್ಲಿ ಆಡಲಿದ್ದೇನೆ ಎಂದು ತಿಳಿಸಿದ್ದಾರೆ.
“ನಾನು ಯಾವಾಗಲೂ ನನ್ನ ಕ್ರಿಕೆಟ್ ಜೀವನದ ಬಗ್ಗೆ ಪ್ಲ್ಯಾನ್ ಮಾಡಿಕೊಂಡಿದ್ದೇನೆ. ನನ್ನ ಕೊನೆಯ ತವರು ಏಕದಿನ ಪಂದ್ಯ ರಾಂಚಿಯಲ್ಲಿ ನಡೆದಿತ್ತು. ಇದೀಗ ನನ್ನ ಕೊನೆಯ T20 ಪಂದ್ಯವು ಚೆನ್ನೈನಲ್ಲಿ ಆಡುವ ವಿಶ್ವಾಸವಿದೆ. ಆದರೆ ಅದು ಮುಂದಿನ ವರ್ಷವೋ ಅಥವಾ ಮುಂದಿನ ಐದು ವರ್ಷಗಳ ಬಳಿಕವೋ ಎಂಬುದು ನಿಜವಾಗಿಯೂ ತಿಳಿದಿಲ್ಲ” ಎಂದು ಧೋನಿ ಹೇಳಿದ್ದಾರೆ. ಈ ಮೂಲಕ ತಮ್ಮ ನಿವೃತ್ತಿ ಯಾವಾಗ ಎಂಬುದನ್ನು ಕೂಡ ಧೋನಿ ಮರೆಮಾಚುವ ಪ್ರಯತ್ನ ಮಾಡಿದ್ದಾರೆ.
ಏಕೆಂದರೆ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಲೀಕರಾದ ಶ್ರೀನಿವಾಸನ್ ಅವರು ಧೋನಿ ಈ ಬಾರಿ ರಿಟೈನ್ ಆಗಲು ಇಚ್ಛಿಸುತ್ತಿಲ್ಲ. ಬದಲಾಗಿ ಹರಾಜಿನಲ್ಲಿ ಹೆಸರು ನೋಂದಾಯಿಸಿ ತಂಡಕ್ಕೆ ಮರಳಲು ಬಯಸಿದ್ದಾರೆ. ಅವರ ಮೇಲೆ ಹೆಚ್ಚಿನ ಮೊತ್ತ ಹೂಡಿಕೆ ಮಾಡುವುದು ಬೇಡ ಎಂದಿದ್ದರು ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಧೋನಿ ಮುಂದಿನ ಸೀಸನ್ನಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗಿತ್ತು. ಇದೀಗ ಚೆಪಾಕ್ ಮೈದಾನದಲ್ಲಿ ಕೊನೆಯ ಟಿ20 ಪಂದ್ಯವಾಡುವುದಾಗಿ ಧೋನಿ ತಿಳಿಸಿದ್ದಾರೆ. ಹೀಗಾಗಿ ಸಿಎಸ್ಕೆ ಜೆರ್ಸಿಯಲ್ಲಿ ಧೋನಿ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಲು ಬಯಸಿದ್ದಾರೆ ಎಂಬುದು ಬಹಿರಂಗವಾಗಿದೆ. ಇದಾಗ್ಯೂ ಅವರು ಯಾವಾಗ ನಿವೃತ್ತಿ ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ಇತ್ತ ಚೆಪಾಕ್ ಸ್ಟೇಡಿಯಂನಲ್ಲಿ ಆಡಿದ ಪಂದ್ಯಗಳನ್ನು ನೆನಪಿಸಿಕೊಂಡ ಧೋನಿ, ಅಲ್ಲಿನ ಅಭಿಮಾನಿಗಳ ನೀಡಿದ ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ. ಅಲ್ಲಿನ ಅಭಿಮಾನಿಗಳು ಪ್ರತಿಯೊಬ್ಬರನ್ನೂ ಗೌರವಿಸುತ್ತಾರೆ. ಎದುರಾಳಿ ತಂಡಗಳ ಆಟಗಾರರನ್ನು ಕೂಡ ಬೆಂಬಲಿಸುತ್ತಾರೆ. ಸಚಿನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಪರ ಆಡುವಾಗ, ಅವರು ನಮ್ಮ ಎದುರಾಳಿಯಾಗಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಅವರಿಗೆ ಅತ್ಯುತ್ತಮವಾದ ಗೌರವವನ್ನು ನೀಡುತ್ತಿದ್ದರು ಎಂದು ಧೋನಿ ತಿಳಿಸಿದರು.
ಇದೇ ವೇಳೆ ನಿವೃತ್ತಿ ಯಾವಾಗ ಎಂಬ ಪ್ರಶ್ನೆಗೆ ಮತ್ತೊಮ್ಮೆ ಉತ್ತರಿಸಿದ ಧೋನಿ, ನಾನು ಅದರ ಬಗ್ಗೆ ಯೋಚಿಸುತ್ತೇನೆ. ಇನ್ನೂ ಸಾಕಷ್ಟು ಸಮಯವಿದೆ. ಇದೀಗ ನಾವು ನವೆಂಬರ್ನಲ್ಲಿದ್ದೇವೆ. ಐಪಿಎಲ್ 2022 ಅನ್ನು ಏಪ್ರಿಲ್ನಲ್ಲಿ ಆಡಲಾಗುತ್ತದೆ. ಹೀಗಾಗಿ ಇನ್ನೂ ಸಮಯವಿದೆ ಎಂದು ಧೋನಿ ಹೇಳಿದರು. ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಯ ಕೊನೆಯ ಟಿ20 ಪಂದ್ಯ ನಡೆಯುವುದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಎಂಬುದು ಖಚಿತವಾಗಿದೆ. ಅದು ಯಾವಾಗ? ಎಂಬ ಪ್ರಶ್ನೆಗೆ ಮುಂದಿನ ಸೀಸನ್ ಐಪಿಎಲ್ ಆರಂಭದಲ್ಲೇ ಉತ್ತರ ಸಿಗಲಿದೆ.
ಇದನ್ನೂ ಓದಿ: Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್ಮ್ಯಾನ್ ರೋಹಿತ್ ಶರ್ಮಾ
ಇದನ್ನೂ ಓದಿ: Martin Guptill: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಮಾರ್ಟಿನ್ ಗಪ್ಟಿಲ್