
ಪಾಕಿಸ್ತಾನ್ ಕ್ರಿಕೆಟ್ ತಂಡದ ನಿರಂತರ ಕಳಪೆ ಪ್ರದರ್ಶನದ ವಿರುದ್ಧ ಆ ದೇಶದ ಮಾಜಿ ಕ್ರಿಕೆಟಿಗ ಹಾಗೂ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇಂಗ್ಲೆಂಡ್ ವಿರುದ್ಧದ ಹೆಡಿಂಗ್ಲಿ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಇನ್ನಿಂಗ್ಸ್ ಮತ್ತು 103 ರನ್ಗಳ ಹೀನಾಯ ಸೋಲು ಕಂಡ ಬೆನ್ನಲ್ಲೇ ರಮೀಝ್ ರಾಜಾ ತಂಡಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಕ್ರಿಕೆಟ್ ಪಾಡ್ಕಾಸ್ಟ್ ಒಂದರಲ್ಲಿ ಇಂಗ್ಲೆಂಡ್ನ ಮಾಜಿ ನಾಯಕರಾದ ಅಲಸ್ಟೇರ್ ಕುಕ್ ಮತ್ತು ಮೈಕಲ್ ವಾನ್ ಅವರೊಂದಿಗೆ ಮಾತನಾಡಿದ ರಮೀಝ್ ರಾಜಾ, ಪಾಕಿಸ್ತಾನ್ ಕ್ರಿಕೆಟ್ನ ಸದ್ಯದ ದುಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
“ಪಾಕಿಸ್ತಾನ ತಂಡವು ಈಗಾಗಲೇ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಕಳೆದುಕೊಂಡಿದೆ. ಪಂದ್ಯಗಳನ್ನು ಸೋಲುವುದು ಈಗ ತಂಡಕ್ಕೆ ಅಭ್ಯಾಸವಾಗಿಬಿಟ್ಟಿದೆ. ಇದರಿಂದ ಬೇಸತ್ತಿರುವ ಅಭಿಮಾನಿಗಳು ತಂಡದಿಂದ ದೂರ ಸರಿಯುತ್ತಿದ್ದಾರೆ” ಎಂದು ರಮೀಝ್ ರಾಜಾ ಕಳವಳ ವ್ಯಕ್ತಪಡಿಸಿದ್ದಾರೆ.
“ಪಾಕಿಸ್ತಾನದ ಅಭಿಮಾನಿಗಳು ತಂಡ ಪ್ರತಿ ಪಂದ್ಯದಲ್ಲೂ ಗೆಲ್ಲಬೇಕೆಂದು ಬಯಸುವುದಿಲ್ಲ. ಆದರೆ, ಮೈದಾನದಲ್ಲಿ ಆಟಗಾರರು ಕನಿಷ್ಠ ಹೋರಾಟದ ಮನೋಭಾವ ಮತ್ತು ಗೆಲ್ಲಬೇಕೆಂಬ ಹಠವನ್ನು ಪ್ರದರ್ಶಿಸಬೇಕು. ಪ್ರಸ್ತುತ ತಂಡದಲ್ಲಿ ಅದು ಸಂಪೂರ್ಣವಾಗಿ ಕಾಣೆಯಾಗಿದೆ. ಪಾಕ್ ತಂಡ ಈಗ ಆಡುತ್ತಿರುವುದು ಗೆಲ್ಲುದಕ್ಕಲ್ಲ, ಅಭಿಮಾನಿಗಳನ್ನು ಕಳೆದುಕೊಳ್ಳುವುದಕ್ಕೆ ಎಂಬಂತಾಗಿದೆ” ಎಂದು ರಮೀಝ್ ರಾಜಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿ ಸೋಲಿನ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತೀವ್ರ ನಿರಾಶೆ ಮತ್ತು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಕ್ರಿಕೆಟ್ ಮಂಡಳಿಗೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ ಎಂದು ಮಾಜಿ ಪಿಸಿಜಿ ಅಧ್ಯಕ್ಷ ನೆನಪಿಸಿದ್ದಾರೆ.
ಒಂದು ಕಾಲದಲ್ಲಿ ವಿಶ್ವದ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಗೆ ಹೆಸರಾಗಿದ್ದ ಪಾಕಿಸ್ತಾನ್, ಈಗ ಕೇವಲ ಟಿ20 ಕ್ರಿಕೆಟ್ಗೆ ಅತಿಯಾಗಿ ಒಗ್ಗಿಕೊಂಡಿರುವುದರಿಂದ ಟೆಸ್ಟ್ ಕ್ರಿಕೆಟ್ನಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತಿದೆ ಎಂದು ರಮೀಝ್ ರಾಜಾ ದೂರಿದ್ದಾರೆ.
ಕಳೆದ 20 ಟೆಸ್ಟ್ ಪಂದ್ಯಗಳ ಪೈಕಿ ಬರೋಬ್ಬರಿ 17 ಪಂದ್ಯಗಳಲ್ಲಿ ಪಾಕಿಸ್ತಾನ ಸೋಲೊಪ್ಪಿಕೊಂಡಿದೆ. ಇಲ್ಲಿ ಸೋಲುವುದನ್ನು ಯಾರೂ ಸಹ ದೂಷಿಸುತ್ತಿಲ್ಲ. ಕನಿಷ್ಠ ಪಕ್ಷ ಹೋರಾಡಿ ಸೋಲಬೇಕಲ್ಲವೇ. ಪಾಕಿಸ್ತಾನ್ ತಂಡದಿಂದ ಅಂತಹ ಹೋರಾಟದ ಮನೋಭಾವವೇ ಕಂಡು ಬರುತ್ತಿಲ್ಲ ಎಂದು ರಮೀಝ್ ರಾಜಾ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 3,300 ಕೋಟಿ ರೂ.ಗೆ CSK ತಂಡದಲ್ಲಿ ಪಾಲು ಕೇಳಿದರೇ ಎಂಎಸ್ ಧೋನಿ?
ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನ್ ಕ್ರಿಕೆಟ್ ಸದ್ಯ ತನ್ನ ಇತಿಹಾಸದಲ್ಲೇ ಅತ್ಯಂತ ಕಠಿಣ ಹಂತವನ್ನು ಎದುರಿಸುತ್ತಿದೆ. ಮಾಜಿ ಅಧ್ಯಕ್ಷ ರಮೀಝ್ ರಾಜಾ ಅವರ ಈ ಮಾತುಗಳು ಕೇವಲ ಟೀಕೆಯಲ್ಲ, ಬದಲಿಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮತ್ತು ಆಟಗಾರರಿಗೆ ಎಚ್ಚರಿಕೆಯ ಕರೆ. ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಮುಂದಿನ ಪಂದ್ಯದಲ್ಲಾದರೂ ತಂಡವು ತನ್ನ ಹಳೆಯ ಆಕ್ರಮಣಕಾರಿ ಆಟಕ್ಕೆ ಮರಳಿ, ಕಳೆದುಹೋಗುತ್ತಿರುವ ಅಭಿಮಾನಿಗಳ ನಂಬಿಕೆಯನ್ನು ಮತ್ತೆ ಗಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.