AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy 2024: ಕರ್ನಾಟಕ ತಂಡದ ಗೆಲುವು ಕಸಿದುಕೊಂಡ ಸುಯಶ್ ಪ್ರಭುದೇಸಾಯಿ

Karnataka vs Goa: ಈ ಬಾರಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಇದುವರೆಗೆ 3 ಪಂದ್ಯಗಳನ್ನಾಡಿದೆ. ಈ ವೇಳೆ ಒಂದು ಮ್ಯಾಚ್​ನಲ್ಲಿ ಜಯ ಸಾಧಿಸಿದರೆ, ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. ಇದೀಗ ಗೋವಾ ವಿರುದ್ಧ ಡ್ರಾ ಮಾಡಿಕೊಳ್ಳುವ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿ 3ನೇ ಸ್ಥಾನ ಅಲಂಕರಿಸಿದೆ.

Ranji Trophy 2024: ಕರ್ನಾಟಕ ತಂಡದ ಗೆಲುವು ಕಸಿದುಕೊಂಡ ಸುಯಶ್ ಪ್ರಭುದೇಸಾಯಿ
Suyash Prabhudessai
TV9 Web
| Edited By: |

Updated on: Jan 23, 2024 | 8:10 AM

Share

Ranji Trophy 2024: ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ನಡುವಣ ಪಂದ್ಯವು ಡ್ರಾನಲ್ಲಿ ಅಂತ್ಯಕಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ತಂಡದ ನಾಯಕ ದರ್ಶನ್ ಮಿಸಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಗೋವಾ ತಂಡವನ್ನು 321 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕ ಬೌಲರ್​ಗಳು ಯಶಸ್ವಿಯಾಗಿದ್ದರು. ರಾಜ್ಯ ತಂಡದ ಪರ ವಿಜಯಕುಮಾರ್ ವೈಶಾಕ್ (Vijaykumar Vyshak), ಎಂ ವೆಂಕಟೇಶ್ ಹಾಗೂ ರೋಹಿತ್ ಕುಮಾರ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರೆ, ವಾಸುಕಿ ಕೌಶಿಕ್ ಒಂದು ವಿಕೆಟ್ ಪಡೆದರು.

ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದರು. ಆರಂಭಿಕ ಆಟಗಾರ ಡಿ ನಿಶ್ಚಲ್ (16) ಬೇಗನೆ ಔಟಾದರೂ ಒಂದೆಡೆ ಕ್ರೀಸ್​ ಕಚ್ಚಿ ನಿಂತ ಮಯಾಂಕ್ 179 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ 114 ರನ್​ ಸಿಡಿಸಿದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಸ್ಪೋಟಕ ಇನಿಂಗ್ಸ್ ಆಡಿದರು. ಒಟ್ಟು 143 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 13 ಫೋರ್​ಗಳೊಂದಿಗೆ 103 ರನ್ ಸಿಡಿಸಿದರು. ಹಾಗೆಯೇ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿಕಿನ್ ಜೋಸ್ 215 ಎಸೆತಗಳಲ್ಲಿ 6 ಫೋರ್​ಗಳೊಂದಿಗೆ 107 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಕರ್ನಾಟಕ ತಂಡವು 9 ವಿಕೆಟ್ ನಷ್ಟಕ್ಕೆ 498 ರನ್​ಗಳಿಸಿ ಮೊದಲ ಇನಿಂಗ್ಸ್​ ಡಿಕ್ಲೇರ್ ಘೋಷಿಸಿತು.

ಇತ್ತ 177 ರನ್​ಗಳ ಮುನ್ನಡೆ ಪಡೆದಿದ್ದ ಕರ್ನಾಟಕ ತಂಡವು ಕೊನೆಯ ದಿನದಾಟದಲ್ಲಿ ಗೋವಾ ತಂಡವನ್ನು ಆಲೌಟ್ ಮಾಡಿ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ ದ್ವಿತೀಯ ಇನಿಂಗ್ಸ್​ನಲ್ಲಿ ಗೋವಾ ಪರ ಇನಿಂಗ್ಸ್ ಆರಂಭಿಸಿದ ಸುಯಶ್ ಪ್ರಭುದೇಸಾಯಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಬಂಡೆಯಂತೆ ಕ್ರೀಸ್ ಕಚ್ಚಿ ನಿಂತ ಸುಯಶ್ ಪ್ರಭುದೇಸಾಯಿ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಅಲ್ಲದೆ ಭರ್ಜರಿ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸೆಯಾಗಿ ನಿಂತರು.

ಇತ್ತ 6 ವಿಕೆಟ್ ಪಡೆದರೂ ಸುಯಶ್​​ನಿಂದಾಗಿ ಪಂದ್ಯವು ಗೋವಾ ಪರ ವಾಲಿತು. ಅಲ್ಲದೆ ಅಂತಿಮವಾಗಿ 289 ಎಸೆತಗಳನ್ನು ಎದುರಿಸುವ ಮೂಲಕ ಸುಯಶ್ ಪ್ರಭುದೇಸಾಯಿ 11 ಫೋರ್​ಗಳೊಂದಿಗೆ ಅಜೇಯ 143 ರನ್​ ಬಾರಿಸಿದರು. ಈ ಮೂಲಕ 6 ವಿಕೆಟ್ ಕಳೆದುಕೊಂಡು 282 ರನ್ ಪೇರಿಸಿ ಗೋವಾ ತಂಡವು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ ಪಡಿಕ್ಕಲ್ , ನಿಕಿನ್ ಜೋಸ್ , ಮನೀಶ್ ಪಾಂಡೆ , ಶುಭಾಂಗ್ ಹೆಗ್ಡೆ , ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್) , ಡಿ. ನಿಶ್ಚಲ್ , ರೋಹಿತ್ ಕುಮಾರ್ , ವಾಸುಕಿ ಕೌಶಿಕ್ , ವಿಜಯ್ ಕುಮಾರ್ ವೈಶಾಕ್ , ಮುರಳೀಧರ ವೆಂಕಟೇಶ್.

ಇದನ್ನೂ ಓದಿ: ಅಫ್ಘಾನಿಸ್ತಾನ್ ವಿರುದ್ಧ ಗೆದ್ದು ಪಾಕಿಸ್ತಾನ್ ತಂಡದ ವಿಶ್ವ ದಾಖಲೆ ಮುರಿದ ಟೀಮ್ ಇಂಡಿಯಾ

ಗೋವಾ ಪ್ಲೇಯಿಂಗ್ 11: ಇಶಾನ್ ಗಡೇಕರ್ , ಸುಯಶ್ ಪ್ರಭುದೇಸಾಯಿ , ಕೃಷ್ಣಮೂರ್ತಿ ಸಿದ್ಧಾರ್ಥ್ (ವಿಕೆಟ್ ಕೀಪರ್) , ಸ್ನೇಹಲ್ ಕೌಥಂಕರ್ , ದರ್ಶನ್ ಮಿಸಾಲ್ (ನಾಯಕ) , ದೀಪರಾಜ್ ಗಾಂವ್ಕರ್ , ಅರ್ಜುನ್ ತೆಂಡೂಲ್ಕರ್ , ಮೋಹಿತ್ ರೆಡ್ಕರ್ , ಹೆರಾಂಬ್ ಪರಬ್ , ಸಮರ್ ಶ್ರವಣ್ ದುಭಾಷಿ , ಫೆಲಿಕ್ಸ್ ಅಲೆಮಾವೋ.