Ranji Trophy: ಕರ್ನಾಟಕಕ್ಕೆ ಉತ್ತರಾಖಂಡ ಸೆಮೀಸ್ ಎದುರಾಳಿ; 9ನೇ ಟ್ರೋಫಿಯತ್ತ ಪಡಿಕ್ಕಲ್ ಪಡೆಯ ಚಿತ್ತ

Ranji Trophy 2025-26 Semifinals: 2025-26 ರ ರಣಜಿ ಟ್ರೋಫಿ ಸೆಮಿಫೈನಲ್‌ಗೆ ಕರ್ನಾಟಕ ಹಾಗೂ ಉತ್ತರಾಖಂಡ ತಂಡಗಳು ಸಜ್ಜಾಗಿವೆ. 9ನೇ ಪ್ರಶಸ್ತಿಯತ್ತ ಕರ್ನಾಟಕದ ಚಿತ್ತವಿದ್ದರೆ, ಉತ್ತರಾಖಂಡ ಚೊಚ್ಚಲ ಟ್ರೋಫಿ ಕನಸನ್ನು ಕಾಣುತ್ತಿದೆ. ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್ ಸೇರಿದಂತೆ ಯುವ ಮತ್ತು ಅನುಭವಿ ಆಟಗಾರರ ಬಲದೊಂದಿಗೆ ಕರ್ನಾಟಕ ಬಲಿಷ್ಠವಾಗಿದೆ. ಈ ಹೈವೋಲ್ಟೇಜ್ ಪಂದ್ಯದ ನೇರಪ್ರಸಾರ, ತಂಡಗಳ ವಿವರ ಮತ್ತು ಸೆಮಿಫೈನಲ್‌ನ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ.

Ranji Trophy: ಕರ್ನಾಟಕಕ್ಕೆ ಉತ್ತರಾಖಂಡ ಸೆಮೀಸ್ ಎದುರಾಳಿ; 9ನೇ ಟ್ರೋಫಿಯತ್ತ ಪಡಿಕ್ಕಲ್ ಪಡೆಯ ಚಿತ್ತ
Karnataka Vs Uttarakhand

Updated on: Feb 14, 2026 | 7:48 PM

2025-26 ರ ಆವೃತ್ತಿಯ ರಣಜಿ ಟ್ರೋಫಿ ಸೆಮಿಫೈನಲ್‌ಗೆ (Ranji Trophy Semifinals 2025-26) ವೇದಿಕೆ ಸಜ್ಜಾಗಿದ್ದು, 4 ತಂಡಗಳು ಫೈನಲ್​ಗೆ ಟಿಕೆಟ್ ಪಡೆಯಲು ಸೆಣಸಾಡಲಿವೆ. ಅದರಲ್ಲಿ ಕರ್ನಾಟಕ ತಂಡವು ಉತ್ತರಾಖಂಡ್ (Karnataka vs Uttarakhand) ವಿರುದ್ಧ ಸೆಣಸಲಿದ್ದು, ಇನ್ನೊಂದು ಪಂದ್ಯದಲ್ಲಿ ಬಂಗಾಳ ತಂಡವು ಜಮ್ಮು ಮತ್ತು ಕಾಶ್ಮೀರ ತಂಡವನ್ನು ಎದುರಿಸಲಿದೆ. ಈ ನಾಲ್ಕು ತಂಡಗಳು ಟೂರ್ನಿಯ ಪ್ರಸ್ತುತ ಆವೃತ್ತಿಯಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಅದರಲ್ಲೂ ಕರ್ನಾಟಕ ಹಾಗೂ ಉತ್ತರಾಖಂಡ್ ನಡುವಿನ ಕಾಳಗಕ್ಕೆ ಎಲ್ಲರೂ ಕಾದುಕುಳಿತಿದ್ದಾರೆ. ಒಂದೆಡೆ ಕರ್ನಾಟಕ ತನ್ನ 9ನೇ ಪ್ರಶಸ್ತಿ ಕಡೆಗೆ ನೋಡುತ್ತಿದ್ದರೆ, ಇನ್ನೊಂದೆಡೆ ಉತ್ತರಾಖಂಡ್ ತನ್ನ ಚೊಚ್ಚಲ ರಣಜಿ ಟ್ರೋಫಿಗಾಗಿ ಎದುರು ನೋಡುತ್ತಿದೆ. ಹೀಗಾಗಿ ಯಾವ ತಂಡಕ್ಕೆ ಫೈನಲ್​ ಟಿಕೆಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

9ನೇ ಟ್ರೋಫಿಯತ್ತ ಕರ್ನಾಟಕದ ಕಣ್ಣು

ಕ್ವಾರ್ಟರ್ ಫೈನಲ್‌ನಲ್ಲಿ 42 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಸೋಲಿಸಿದ ಕರ್ನಾಟಕ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ತಂಡವು ಯುವ ಮತ್ತು ಅನುಭವಿ ಆಟಗಾರರ ಸಮಮಿಶ್ರಣದಿಂದ ಕೂಡಿರುವುದು ತಂಡದ ಯಶಸ್ಸಿಗೆ ಕಾರಣವಾಗುತ್ತಿದೆ. ಅದರಲ್ಲೂ ಬ್ಯಾಟಿಂಗ್‌ ವಿಭಾಗದಲ್ಲಿ ಅನುಭವಿಗಳಾದ ಕೆಎಲ್ ರಾಹುಲ್, ಮಾಯಾಂಕ್ ಅಗರ್ವಾಲ್, ಕರುಣ್ ನಾಯರ್ ಜೊತೆಗೆ ದೇವದತ್ ಪಡಿಕ್ಕಲ್ ಮತ್ತು ಸ್ಮರಣ್​ರಂತಹ ಯುವ ಆಟಗಾರರು ಸೇರಿದ್ದಾರೆ. ಇತ್ತ ಬೌಲಿಂಗ್​ನಲ್ಲಿ ಪ್ರಸಿದ್ಧ್ ಕೃಷ್ಣ, ವಿಧ್ವತ್ ಕಾವೇರಪ್ಪ ಮತ್ತು ಶ್ರೇಯಸ್ ಗೋಪಾಲ್​ ತಂಡದ ಬಲ ಹೆಚ್ಚಿಸಿದ್ದಾರೆ. ಕರ್ನಾಟಕ ಇದುವರೆಗೆ 8 ರಣಜಿ ಟ್ರೋಫಿ ಪ್ರಶಸ್ತಿಗಳನ್ನು ಗೆದ್ದಿದ್ದು, 6 ಬಾರಿ ರನ್ನರ್ ಅಪ್ ಸ್ಥಾನವನ್ನು ಪಡೆದುಕೊಂಡಿದೆ. ಇದೀಗ ಸೆಮಿಫೈನಲ್‌ನಲ್ಲಿ ಗೆಲುವಿನೊಂದಿಗೆ 9 ನೇ ಬಾರಿಗೆ ಟ್ರೋಫು ಎತ್ತಿಹಿಡಿಯುವ ಇರಾದೆಯಲ್ಲಿದೆ.

ಚೊಚ್ಚಲ ಟ್ರೋಫಿಯತ್ತ ಉತ್ತರಾಖಂಡ್

ಮತ್ತೊಂದೆಡೆ, ಮೇಲೆ ಹೇಳಿದಂತೆ ಉತ್ತರಾಖಂಡ್ ಇದುವರೆಗೂ ರಣಜಿ ಟ್ರೋಫಿಯನ್ನು ಗೆದ್ದಿಲ್ಲ. ಲೀಗ್ ಹಂತದಲ್ಲಿ 7 ಪಂದ್ಯಗಳನ್ನಾಡಿರುವ ಉತ್ತರಾಖಂಡ 4 ರಲ್ಲಿ ಗೆದ್ದು, 2 ಪಂದ್ಯಗಳನ್ನು ಸೋತಿದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು ಇನ್ನಿಂಗ್ಸ್ ಮತ್ತು 6 ರನ್‌ಗಳ ಅಂತರದಿಂದ ಸೋಲಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ.

ಸೆಮಿಫೈನಲ್‌ ನೇರ ಪ್ರಸಾರದ ವಿವರ

ಕರ್ನಾಟಕ vs ಉತ್ತರಾಖಂಡ ಮತ್ತು ಬಂಗಾಳ vs ಜಮ್ಮು ಮತ್ತು ಕಾಶ್ಮೀರ ಪಂದ್ಯಗಳನ್ನು ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಪಂದ್ಯವನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಈ ಎರಡೂ ಪಂದ್ಯಗಳು ಫೆಬ್ರವರಿ 15 ರಂದು ಬೆಳಿಗ್ಗೆ 9 ಗಂಟೆಗೆಯಿಂದ ಪ್ರಾರಂಭವಾಗಲಿವೆ.

ಕೆಎಲ್ ರಾಹುಲ್ 25ನೇ ಶತಕದ ಇನ್ನಿಂಗ್ಸ್​ನ ಝಲಕ್ ಇಲ್ಲಿದೆ

ಉಭಯ ತಂಡಗಳು

ಕರ್ನಾಟಕ ತಂಡ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್(ನಾಯಕ), ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ(ವಿಕೆಟ್ ಕೀಪರ್), ವಿದ್ಯಾಧರ್ ಪಾಟೀಲ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ, ವಿಧ್ವತ್ ಕಾವೇರಪ್ಪ, ಅನೀಶ್ ಕೆವಿ, ಮೊಹ್ಸಿನ್ ಖಾನ್, ಮುರಳೀಧರ ವೆಂಕಟೇಶ್, ಕೃಷ್ಣನ್ ಶ್ರೀಜಿತ್, ಧ್ರುವ ಪ್ರಭಾಕರ್

ಉತ್ತರಾಖಂಡ ತಂಡ: ಅವನೀಶ್ ಸುಧಾ, ಭೂಪೇನ್ ಲಾಲ್ವಾನಿ, ಕುನಾಲ್ ಚಂಡೇಲಾ(ನಾಯಕ), ಲಕ್ಷ್ಯ ರಾಜೇಶ್ ರಾಯಚಂದಾನಿ, ಜಗದೀಶ ಸುಚಿತ್, ಸೌರಭ್ ರಾವತ್(ವಿಕೆಟ್ ಕೀಪರ್), ಶಾಶ್ವತ್ ದಂಗ್ವಾಲ್, ಅಭಯ್ ನೇಗಿ, ಮಯಾಂಕ್ ಮಿಶ್ರಾ, ಆದಿತ್ಯ ರಾವತ್, ಜನಮೇಜಯ್ ಜೋಶಿ, ಪ್ರಶಾಂತ್ ಚೋಪ್ರಾ, ದೇವೇಂದ್ರ ಸಿಂಗ್ ಬೋರಾ, ಆರವ್ ಮಹಾಜನ್, ಹರ್ಷ ಪಟ್ವಾಲ್, ಆಂಜನೇಯ ಸೂರ್ಯವಂಶಿ, ರಾಜನ್ ಕುಮಾರ್, ಸಾಗರ್ ರಾವತ್, ಜಗಮೋಹನ್ ನಾಗರಕೋಟಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ