VHT 2026: ಮತ್ತೆ ಅಬ್ಬರಿಸಿದ ಪಡಿಕ್ಕಲ್; ಮುಂಬೈ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ

Vijay Hazare Trophy Quarter Final: ಮುಂಬೈ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮಳೆ ಅಡ್ಡಿಯಾದ ಕಾರಣ ಕರ್ನಾಟಕ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಮುಂಬೈ 254/8 ರನ್ ಗಳಿಸಿದ್ದರೆ, ಕರ್ನಾಟಕ 1 ವಿಕೆಟ್‌ಗೆ 187 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು.

VHT 2026: ಮತ್ತೆ ಅಬ್ಬರಿಸಿದ ಪಡಿಕ್ಕಲ್; ಮುಂಬೈ ಮಣಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟ ಕರ್ನಾಟಕ
Karnataka

Updated on: Jan 12, 2026 | 6:22 PM

ಬೆಂಗಳೂರಿನಲ್ಲಿರುವ ಬಿಸಿಸಿಐ (BCCI) ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಕರ್ನಾಟಕ (Karnataka vs Mumbai) ನಡುವಿನ ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ವಿಜೆಡಿ ನಿಯಮದಡಿಯಲ್ಲಿ 55 ರನ್​ಗಳಿಂದ ಗೆದ್ದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತ್ತು. ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.

ಮುಂಬೈನ ಕಾಡಿದ ಸರ್ಫರಾಜ್, ಶ್ರೇಯಸ್ ಅಲಭ್ಯತೆ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ ಆರಂಭಿಕರಾದ ಅಂಗ್‌ಕ್ರಿಶ್ ರಘುವಂಶಿ ಮತ್ತು ಇಶಾನ್ 36 ರನ್​ಗಳ ಜೊತೆಯಾಟ ನೀಡಿದರು. ಇಶಾನ್ ವಿಕೆಟ್ ಪತನದೊಂದಿಗೆ ಈ ಜೊತೆಯಾಟ ಮುರಿದುಬಿತ್ತು. ಆ ನಂತರ ಬಂದ ಮುಶೀರ್ ಖಾನ್ ಕೂಡ 9 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಾಯಕ ಸಿದ್ದೇಶ್ 38 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಕ್ವಾರ್ಟರ್ ಫೈನಲ್​ಗೂ ಮುನ್ನ ಅದ್ಭುತ ಫಾರ್ಮ್​ನಲ್ಲಿದ್ದ ಸರ್ಫರಾಜ್ ಖಾನ್ ಇಂಜುರಿಗೊಳಗಾಗಿದ್ದು ತಂಡಕ್ಕೆ ದೊಡ್ಡ ಹೊಡೆತು ನೀಡಿತು. ಇದರ ಜೊತೆಗೆ ನಾಯಕ ಶ್ರೇಯಸ್ ಇಲ್ಲದಿರುವುದು ಕೂಡ ಮುಂಬೈ ತಂಡವನ್ನು ಹಿನ್ನಡೆಗೆ ತಳ್ಳಿತು.

ಕೊನೆಯಲ್ಲಿ ತಂಡದ ಪರ ಏಕಾಂಗಿ ಹೋರಾಟ ನೀಡಿದ ಶಮ್ಸ್ ಮುಲಾನಿ ಅತ್ಯಧಿಕ 86 ರನ್​ಗಳ ಇನ್ನಿಂಗ್ಸ್ ಆಡಿದರೆ, ಸಾಯಿರಾಜ್ ಪಾಟೀಲ್ ಕೂಡ 33 ರನ್​ಗಳ ಕಾಣಿಕೆ ನೀಡಿದರು. ಇತ್ತ ಕರ್ನಾಟಕ ಪರ ಬೌಲಿಂಗ್​ನಲ್ಲಿ ಮಿಂಚಿದ ವಿದ್ಯಾದರ್ ಪಾಟೀಲ್ 3 ವಿಕೆಟ್ ಪಡೆದರೆ, ವಿದ್ವತ್ ಹಾಗೂ ಅಭಿಲಾಶ್ ತಲಾ 2 ವಿಕೆಟ್ ಪಡೆದರು.

ಕರ್ನಾಟಕಕ್ಕೆ ಪಡಿಕ್ಕಲ್, ಕರುಣ್ ಆಸರೆ

ಈ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೂ ಸಾಧಾರಣ ಆರಂಭ ಸಿಕ್ಕಿತು. ನಾಯಕ ಮಯಾಂಕ್ ಅಗರ್ವಾಲ್ 12 ರನ್ ಗಳಿಸಿ ಔಟಾಗುವುದರೊಂದಿಗೆ ಮೊದಲ ವಿಕೆಟ್ ಪತನವಾಯಿತು. ಇದಾದ ಬಳಿಕ ಜೊತೆಯಾದ ದೇವದತ್ ಪಡಿಕ್ಕಲ್ ಹಾಗೂ ಕರುಣ್ ನಾಯರ್ ಅಜೇಯ ಶತಕದ ಜೊತೆಯಾಟವನ್ನಾಡಿದರು. ಈ ಟೂರ್ನಿಯಲ್ಲಿ ಇದುವರೆಗೆ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಅನುಭವಿ ಕರುಣ್ ಅವಶ್ಯಕ ಸಮಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದರು. ಉಳಿದಂತೆ ದೇವದತ್ ತನ್ನ ಉತ್ತಮ ಫಾರ್ಮ್​ ಮುಂದುವರೆಸಿ ಈ ಆವೃತ್ತಿಯಲ್ಲಿ 6ನೇ 50 ಪ್ಲಸ್ ಸ್ಕೋರ್ ಕಲೆಹಾಕಿದರು.

ಅನುಭವಿ ಕರುಣ್ ನಾಯರ್ ಕೂಡ ಪಡಿಕ್ಕಲ್ ಜೊತೆಗೆ ಅವಶ್ಯಕ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ತಲಾ ಅರ್ಧಶತಕ ಬಾರಿಸಿದರು. ಮಳೆ ಬಂದು ಪಂದ್ಯ ನಿಲ್ಲುವುದಕ್ಕೂ ಮುನ್ನ ದೇವದತ್ ಪಡಿಕ್ಕಲ್ 95 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 81 ರನ್ ಬಾರಿಸಿದರೆ, ಇತ್ತ ಕರುಣ್ ನಾಯರ್ 80 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 75 ರನ್ ಬಾರಿಸಿದ್ದರು. ಇವರಿಬ್ಬರ ಜೊತೆಯಾಟದಿಂದಾಗಿ 254 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 33 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತ್ತು. ಆದರೆ ಈ ಹಂತದಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಆ ಬಳಿಕ ವಿಜೆಡಿ ನಿಯಮದಡಿಯಲ್ಲಿ ಕರ್ನಾಟಕ ತಂಡವನ್ನು 55 ರನ್​ಗಳಿಂದ ವಿಜಯಿ ಎಂದು ಘೋಷಿಸಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:48 pm, Mon, 12 January 26