
ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಇಂದು ಬ್ರಿಸ್ಬೇನ್ನಲ್ಲಿ ಆರಂಭವಾದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ನಲ್ಲಿ ಭಾರತದ ಅನನುಭವಿ ಬೌಲಿಂಗ್ ಪಡೆ ಅತಿಥೇಯರ 5 ವಿಕೆಟ್ ಉರುಳಿಸಿರುವುದನ್ನು ಶ್ಲಾಘಿಸಿರುವ ಭಾರತದ ಮಾಜಿ ಆರಂಭ ಆಟಗಾರ ಸುನಿಲ್ ಗಾವಸ್ಕರ್, ಪರಿಸ್ಥಿಯ ಸಂಪೂರ್ಣ ಲಾಭ ಪಡೆಯಲು ಅವರು ವಿಫಲರಾಗಿದ್ದಕ್ಕೆ ನಿರಾಸೆ ವ್ಯಕ್ತಪಡಿಸಿದರು.
‘ದಶಕಗಳಿಂದ ಅಂದರೆ 1932ರಿಂದ ಇದು ಪುರಾವರ್ತನೆಯಾಗುತ್ತಿದೆ. ಭಾರತದ ಬೌಲರ್ಗಳು ಮೊದಲ 5 ವಿಕೆಟ್ಗಳನ್ನು ಬೇಗ ಪಡೆಯುತ್ತಾರೆ. ಅದರೆ, ಉಳಿದರ್ಧ ಟೀಮನ್ನು ಔಟ್ ಮಾಡಲು ಹೆಣಗುತ್ತಾರೆ’ ಎಂದು ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ನಡೆಸುವ ಎಕ್ಸ್ಟ್ರಾ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಮೊದಲ ದಿನದಾಟದ ನಂತರ ಭಾಗವಹಿಸಿದ ಲೆಜೆಂಡರಿ ಓಪನರ್ ಹೇಳಿದರು.
ಟೆಸ್ಟ್ ಕ್ರಿಕೆಟ್ಗೆ ಇಂದು ಪಾದಾರ್ಪಣೆ ಮಾಡಿದ ವೇಗದ ಬೌಲರ್ ಟಿ.ನಟರಾಜನ್ ದಿನದಾಟದ ಕೊನೆಯ ಸೆಷನ್ನಲ್ಲಿ ಶತಕ ಬಾರಿಸಿದ ಮಾರ್ನಸ್ ಲಬುಶೇನ್ ಮತ್ತು ಮ್ಯಾಥ್ಯೂ ವೇಡ್ ಅವರನ್ನು ಔಟ್ ಮಾಡಿ ಭಾರತಕ್ಕೆ ಮೇಲುಗೈ ಒದಗಿಸಿದರು. ಆಗ ಅತಿಥೇಯರ ಸ್ಕೋರ್ 213/5 ಆಗಿತ್ತು. ಕ್ರೀಸಿಗೆ ಆಗಷ್ಟೇ ಬಂದಿದ್ದ ಕೆಮೆರಾನ್ ಗ್ರೀನ್ ಮತ್ತು ನಾಯಕ ಟಿಮ್ ಪೈನ್ ಅವರನ್ನು ಬೇಗ ಪೆವಿಲಿಯನ್ಗೆ ಕಳಿಸಲು ಭಾರತೀಯ ಬೌಲರ್ಗಳು ಮತ್ತಷ್ಟು ಶ್ರಮಿಸಬೇಕಿತ್ತೆಂದು ಗಾವಸ್ಕರ್ ಹೇಳಿದರು.
ಸುನಿಲ್ ಗಾವಸ್ಕರ್
‘ಟೀ ವಿರಾಮದ ನಂತರ ಎರಡು ವಿಕೆಟ್ ಪಡೆದ ಭಾರತ, ಗ್ರೀನ್ ಮತ್ತು ಪೈನ್ ಅವರ ಮೇಲೆ ಒತ್ತಡ ಹೇರಿ ಔಟ್ ಮಾಡಿದ್ದರೆ ಮೊದಲ ದಿನದಾಟದ ಖಂಡಿತವಾಗಿಯೂ ಭಾರತಕ್ಕೆ ದಕ್ಕುತ್ತಿತ್ತು. ಇಂದೇ ಮತ್ತೆರಡು ವಿಕೆಟ್ಗಳನ್ನು ಭಾರತ ಉರುಳಿಸಿದ್ದರೆ, ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಬಹುದಿತ್ತು, ಅದರೆ ಬೌಲರ್ಗಳು ಅವರಿಬ್ಬರ ಜೊತೆಯಾಟವನ್ನು ಬೆಳೆಯಲು ಬಿಟ್ಟರು’ ಎಂದು ಗಾವಸ್ಕರ್ ಹೇಳಿದರು.
ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಮೊಹಮ್ಮದ್ ಸೈನಿ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಮತ್ತು ರವೀಂದ್ರ ಜಡೇಜಾ ಮೊದಲಾದ ಪ್ರಮುಖ ಬೌಲರ್ಗಳ ಅನುಪಸ್ಥಿಯಲ್ಲಿ ಹೊಸ ಬೌಲರ್ಗಳು ನಡೆಸಿದ ದಾಳಿಯನ್ನು ಗಾವಸ್ಕರ್ ಕೊಂಡಾಡಿದರು.
ಶಾರ್ದುಲ್ ಠಾಕೂರ್ಗೆ ಟೆಸ್ಟ್ಗಳಲ್ಲಿ ಮೊದಲ ವಿಕೆಟ್
‘ನಿಸ್ಸಂದೇಹವಾಗಿ ಭಾರತದ ಬೌಲರ್ಗಳು ಅತ್ಯುತ್ತಮ ದಾಳಿ ನಡೆಸಿದರು. ಅವರೆಲ್ಲ ಟೆಸ್ಟ್ ಕ್ರಿಕೆಟ್ಗೆ ತೀರ ಹೊಸಬರು. ಶಾರ್ದುಲ್ ಠಾಕೂರ್ ತಾನು ಪಾದಾರ್ಪಣೆ ಮಾಡಿದ ಟೆಸ್ಟ್ನಲ್ಲಿ ಒಂದು ಡಜನ್ ಎಸೆತಗಳನ್ನು ಸಹ ಬೌಲ್ ಮಾಡಿರಲಿಲ್ಲ. ನವದೀಪ್ ಸೈನಿಗೆ ಇದು ಎರಡನೇ ಪಂದ್ಯವಾದರೆ, ಸಿರಾಜ್ಗೆ ಮೂರನೆಯದ್ದು. ವಾಷಿಂಗ್ಟನ್ ಸುಂದರ್ ಮತ್ತು ನಟರಾಜನ್ಗೆ ಇದು ಮೊಟ್ಟಮೊದಲ ಟೆಸ್ಟ್. ಇವರಲ್ಲ ಹೊಸಬರಾದರೂ ಬ್ರಿಸ್ಬೇನ್ನಲ್ಲಿ ಪ್ರದರ್ಶಿಸಿದ ಸಂಕಲ್ಪ ಮತ್ತು ಬದ್ಧತೆ ಮೆಚ್ಚುವಂಥದ್ದು’ ಎಂದು ಗಾವಸ್ಕರ್ ಹೇಳಿದರು.
‘1932ರ ಸರಣಿಯಲ್ಲಿ ಭಾರತದ ಬೌಲರ್ಗಳು 80ರನ್ಗಳಾಗುವಷ್ಟರಲ್ಲಿ ಇಂಗ್ಲೆಂಡಿನ 5 ವಿಕೆಟ್ ಕಿತ್ತಿದ್ದರು, ಅದರೆ ಉಳಿದ ಐವರು 180ರನ್ಗಳನ್ನು ಕಲೆಹಾಕಿ ಪಂದ್ಯವನ್ನು ತಮ್ಮೆಡೆ ಸೆಳೆದುಕೊಂಡರು. ಆ ಪರಂಪರೆ ಹಾಗೆಯೇ ಉಳಿದುಕೊಂಡಿದೆ. 1932ರ ಸ್ಥಿತಿ ಇಲ್ಲೂ ಮರುಕಳಿಸದೆ ಭಾರತೀಯರು ಅತಿಥೇಯರನ್ನು 350 ರನ್ಗಳಿಗೆ ಸೀಮಿತಗೊಳಿಸುವರೆಂಬ ನಿರೀಕ್ಷೆ ಇಟ್ಟುಕೊಂಡಿದ್ದೇನೆ’ ಎಂದು ಗಾವಸ್ಕರ್ ಹೇಳಿದರು.
Published On - 9:08 pm, Fri, 15 January 21