
ಪಹಲ್ಗಾಮ್ ದಾಳಿಯ (Pahalgam Attack) ನಡುವೆ ಪಾಕಿಸ್ತಾನಿ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ಅವರಿಗೆ ಭಾರತಕ್ಕೆ ಆಹ್ವಾನ ನೀಡಿದರ ಬಗ್ಗೆ ಭಾರತದ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ (Neeraj Chopra) ಮೌನ ಮುರಿದಿದ್ದಾರೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ನೀರಜ್, ‘ನನ್ನ ದೇಶಭಕ್ತಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಅರ್ಷದ್ ನದೀಮ್ (Arshad Nadeem) ಅವರನ್ನು ಆಹ್ವಾನಿಸಿದಕ್ಕಾಗಿ ನನ್ನ ಕುಟುಂಬವನ್ನು ಗುರಿಯಾಗಿಸಲಾಗುತ್ತಿದೆ. ನನ್ನ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ನನ್ನ ವಿರುದ್ಧ ದ್ವೇಷ ಹರಡಲಾಗುತ್ತಿದೆ. ಇದನ್ನು ನಾನು ಎಂದಿಗೂ ಸಹಿಸುವುದಿಲ್ಲ. ಪಹಲ್ಗಾಮ್ ದಾಳಿಗೂ ಮುನ್ನ ನಾನು ಅರ್ಷದ್ಗೆ ಆಹ್ವಾನ ಕಳುಹಿಸಿದ್ದೆ. ಆದರೆ ನನಗೀಗ ದೇಶ ಮತ್ತು ಅದರ ಹಿತಾಸಕ್ತಿಗಳು ಮೊದಲು ಎಂದು ನೀರಜ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ನೀರಜ್ ಚೋಪ್ರಾ, ‘ನಾನು ಸಾಮಾನ್ಯವಾಗಿ ಕಡಿಮೆ ಮಾತನಾಡುವ ವ್ಯಕ್ತಿ, ಆದರೆ ಅದರರ್ಥ ದೇಶದ ಮೇಲಿನ ನನ್ನ ಪ್ರೀತಿ ಮತ್ತು ನನ್ನ ಕುಟುಂಬದ ಗೌರವವನ್ನು ಪ್ರಶ್ನಿಸಿದಾಗಲೂ ನಾನು ಮಾತನಾಡುವುದಿಲ್ಲ ಎಂದಲ್ಲ. ಕ್ಲಾಸಿಕ್ನಲ್ಲಿ ಭಾಗವಹಿಸಲು ಅರ್ಷದ್ ನದೀಮ್ ಅವರನ್ನು ಆಹ್ವಾನಿಸುವ ನನ್ನ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ನನ್ನನ್ನು ನಿಂದಿಸಲಾಗುತ್ತಿದೆ. ನನ್ನ ಕುಟುಂಬವನ್ನೂ ಸಹ ಬಿಟ್ಟಿಲ್ಲ. ನಾನು ಅರ್ಷದ್ಗೆ ನೀಡಿದ ಆಹ್ವಾನವು ಒಬ್ಬ ಕ್ರೀಡಾಪಟುವಿನಿಂದ ಇನ್ನೊಬ್ಬ ಕ್ರೀಡಾಪಟುವಿಗೆ ನೀಡಿದ ಆಹ್ವಾನವಷ್ಟೇ. NC ಕ್ಲಾಸಿಕ್ನ ಉದ್ದೇಶವು ಭಾರತಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಕರೆತರುವುದು ಮತ್ತು ನಮ್ಮ ದೇಶವನ್ನು ವಿಶ್ವ ದರ್ಜೆಯ ಕ್ರೀಡಾಕೂಟದ ನೆಲೆಯನ್ನಾಗಿ ಮಾಡುವುದು. ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಎರಡು ದಿನಗಳ ಮೊದಲು ಈ ಆಹ್ವಾನವನ್ನು ಕಳುಹಿಸಲಾಗಿದೆ. ಆದರೀಗ NC ಕ್ಲಾಸಿಕ್ನಲ್ಲಿ ಅರ್ಷದ್ ಇರುವಿಕೆಯ ಪ್ರಶ್ನೆಯೇ ಇಲ್ಲ. ನನಗೆ ನನ್ನ ದೇಶ ಮತ್ತು ಅದರ ಹಿತಾಸಕ್ತಿಗಳೆ ಮುಖ್ಯ.
— Neeraj Chopra (@Neeraj_chopra1) April 25, 2025
‘ನಾನು ಇಷ್ಟು ವರ್ಷಗಳಿಂದ ನನ್ನ ದೇಶಕ್ಕೆ ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದೇನೆ. ಇಂದು ನನ್ನ ಸಮಗ್ರತೆಯನ್ನು ಪ್ರಶ್ನಿಸಲಾಗುತ್ತಿದೆ, ಇದನ್ನು ನೋಡಲು ತುಂಬಾ ದುಃಖವಾಗುತ್ತದೆ. ನನ್ನ ಕುಟುಂಬವನ್ನು ಗುರಿಯಾಗಿಸಿಕೊಂಡವರಿಗೆ ನಾನು ವಿವರಿಸಬೇಕಾಗಿರುವುದು ನನಗೆ ಬೇಸರ ತಂದಿದೆ. ಕೆಲವು ಮಾಧ್ಯಮಗಳು ನನ್ನ ಸುತ್ತ ಅನೇಕ ಸುಳ್ಳು ಕಥೆಗಳನ್ನು ಹೆಣೆದಿವೆ. ಆದರೆ ನಾನು ಅದರ ವಿರುದ್ಧ ಮಾತನಾಡದಿದ್ದರೆ, ಅದು ನಿಜವಾಗುತ್ತದೆ ಎಂದು ಅರ್ಥವಲ್ಲ’.
Pahalgam Terror Attack: ಪಹಲ್ಗಾಮ್ ಭಯೋತ್ಪಾದಕ ದಾಳಿ; ಕಾಶ್ಮೀರದ 1,500 ಜನರು ವಶಕ್ಕೆ
‘ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ಅರ್ಷದ್ ತನ್ನ ಮಗನಂತೆ ಎಂದು ನನ್ನ ತಾಯಿ ಬಣ್ಣಿಸಿದ್ದರು. ಜನರು ತಮ್ಮ ಅಭಿಪ್ರಾಯವನ್ನು ಹೇಗೆ ಬದಲಾಯಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನನಗೆ ಕಷ್ಟ. ನನ್ನ ತಾಯಿ ಒಂದು ವರ್ಷದ ಹಿಂದೆ ಒಂದು ಹೇಳಿಕೆ ನೀಡಿದ್ದರು, ಆಗ ಅವರ ಅಭಿಪ್ರಾಯಗಳನ್ನು ಬಹಳಷ್ಟು ಪ್ರಶಂಸಿಸಲಾಯಿತು. ಇಂದು, ಅದೇ ಜನರು ಅದೇ ಹೇಳಿಕೆಗಾಗಿ ಅವರನ್ನು ಗುರಿಯಾಗಿಸಲು ಹಿಂಜರಿಯುತ್ತಿಲ್ಲ. ಆದರೆ ಜಗತ್ತು ಭಾರತವನ್ನು ಸರಿಯಾದ ವಿಷಯಗಳಿಗಾಗಿ ನೆನಪಿಸಿಕೊಳ್ಳುವಂತೆ ಮತ್ತು ಅದನ್ನು ಗೌರವದಿಂದ ನೋಡುವಂತೆ ಮಾಡಲು ನಾನು ಇನ್ನೂ ಶ್ರಮಿಸುತ್ತೇನೆ ಎಂದು ನೀರಜ್ ಸ್ಪಷ್ಟನೆ ನೀಡಿದ್ದಾರೆ.
ನೀರಜ್ ಚೋಪ್ರಾ ನೇತೃತ್ವದಲ್ಲಿ ಮೇ 24 ರಿಂದ ಭಾರತದಲ್ಲಿ NC ಕ್ಲಾಸಿಕ್ ಜಾವೆಲಿನ್ ಟೂರ್ನಮೆಂಟ್ ಪ್ರಾರಂಭವಾಗಲಿದೆ. ನೀರಜ್ ಚೋಪ್ರಾ ಸೇರಿದಂತೆ ವಿಶ್ವದ ಅನೇಕ ಸ್ಟಾರ್ ಆಟಗಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಗೆ ಪಾಕಿಸ್ತಾನದ ಜಾವೆಲಿನ್ ಸ್ಟಾರ್ ಅರ್ಷದ್ ನದೀಮ್ ಅವರನ್ನು ಕೂಡ ಆಹ್ವಾನಿಸಲಾಗಿತ್ತು. ಆದರೆ ಅರ್ಷದ್ ನೀರಜ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಭಾರತಕ್ಕೆ ಬರಲು ನಿರಾಕರಿಸಿದ್ದಾರೆ. ಪ್ರಸ್ತುತ ನಾನು ಇತರ ಪಂದ್ಯಾವಳಿಗಳಲ್ಲಿ ನಿರತರಾಗಿರುವುದ್ದರಿಂದ ನಾನು ಈ ಟೂರ್ನಮೆಂಟ್ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಷದ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:57 am, Fri, 25 April 25