ಉತ್ತರ ಪ್ರದೇಶ; ಪೆಟ್ರೋಲ್​ನಿಂದ ತನ್ನ ಬೈಕ್​​ ತೊಳೆದುಕೊಂಡ ಭೂಪನೀಗ ಜೈಲಿನಲ್ಲಿ

Amroha : ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವಂಥಾಗಿದೆ ಈ ರೀಲಿಗನ ಪರಿಸ್ಥಿತಿ. ಇವನ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಈತನನ್ನು ಮತ್ತು ಈತನ ಸಹಚರರನ್ನು ಬಂಧಿಸಿದ್ದಾರೆ. ಇನ್ನಾದರೂ ರೀಲಿಗರು ಎಚ್ಚೆತ್ತುಕೊಳ್ಳುತ್ತಾರೆಯೇ?

ಉತ್ತರ ಪ್ರದೇಶ; ಪೆಟ್ರೋಲ್​ನಿಂದ ತನ್ನ ಬೈಕ್​​ ತೊಳೆದುಕೊಂಡ ಭೂಪನೀಗ ಜೈಲಿನಲ್ಲಿ
ಪೆಟ್ರೋಲ್​ ಬಂಕ್​ನಲ್ಲಿ ತನ್ನ ಗಾಡಿಯನ್ನು ಪೆಟ್ರೋಲ್​ನಿಂದ ತೊಳೆಯುತ್ತಿರುವ ಯುವಕ
ಶ್ರೀದೇವಿ ಕಳಸದ Edited By:

Updated on: Aug 01, 2023 | 11:09 AM

Uttar Pradesh : ರೀಲಿಗರ ಹುಚ್ಚಾಟಗಳಿಗೆ ಎಣೆಯೇ ಇಲ್ಲದಂತಾಗಿದೆ. ವಿನಾಕಾರಣ ತಮ್ಮನ್ನೂ ಮತ್ತಿತರರನ್ನೂ ಅಪಾಯಕ್ಕೆ ಒಡ್ಡಿಕೊಳ್ಳುವ ಇವರ ಆಟಗಳನ್ನು ನೋಡಿ ನೋಡಿ ನೆಟ್ಟಿಗರಂತೂ ಕೆಂಡಾಮಂಡಲವಾಗುತ್ತಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೆ ಪೊಲೀಸರ ಗಮನಕ್ಕೂ ತರುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಪೆಟ್ರೋಲ್​ ಬಂಕ್​ನಲ್ಲಿ ತನ್ನ ಬೈಕ್​ಗೆ ಸ್ವತಃ ಪೆಟ್ರೋಲ್​ ತುಂಬಿಸಿಕೊಂಡದ್ದಲ್ಲದೇ ಬೈಕ್​ ಅನ್ನು ಪೆಟ್ರೋಲ್​ನಿಂದ ತೊಳೆದಿದ್ದಾನೆ. ಅವನ ಈ ಸಾಹಸಕ್ಕೆ ಅಮ್ರೋಹ್​ (Amroha) ಪೊಲೀಸರು ಕಂಬಿಯ ಹಿಂದೆ ವಿಶೇಷ ಆತಿಥ್ಯವನ್ನು ನೀಡಿ ಸನ್ಮಾನಿಸುತ್ತಿದ್ದಾರೆ.

ಈ ಯುವಕ ನೀರಿನ ಪೈಪ್​ನಂತೆ ಪೆಟ್ರೋಲ್​ ಪೈಪ್​ ಅನ್ನು ಬೈಕಿಗೆ ಹಿಡಿದು ತನ್ನ ಬೈಕನ್ನು ಸ್ಚಚ್ಛ ತೊಳೆದುಕೊಂಡಿದ್ದಾನೆ. ಈ ವಿಡಿಯೋ ಅನ್ನು ಸಚಿನ್​ ಗುಪ್ತಾ ಎನ್ನುವವರು ಜು. 27ರಂದು ಟ್ವೀಟ್​ ಮಾಡಿ ಅಮ್ರೋಹ್​ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಪರಿಣಾಮವಾಗಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಈ ಯುವಕನ ಬೈಕ್​ ಸಾಹಸದ ಇನ್ನೊಂದು ವಿಡಿಯೋ ಅನ್ನು ಸಚಿನ್​ ಟ್ವೀಟ್ ಮಾಡಿದ್ದಾರೆ.

‘ಈ  ಯುವಕನೊಂದಿಗೆ ಈ ಕೃತ್ಯವನ್ನು ವಿರೋಧಿಸದ ಪೆಟ್ರೋಲ್​ ಬಂಕ್​ ಸಿಬ್ಬಂದಿಯನ್ನೂ ಮತ್ತು ಇನ್ನೊಂದು ವಿಡಿಯೋದಲ್ಲಿ ಈ ಯುವಕನೊಂದಿಗೆ ಮಡ್​​ಗಾರ್ಡ್​ ಮೇಲೆ ಕುಳಿತ ಸಹಚರನನ್ನು ಕೂಡ ಬಂಧಿಸಲಾಗಿದೆ. ಅಲ್ಲದೇ ಈತನ ಬೈಕ್ ಅನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ’ ಎಂದು ಅಮ್ರೋಹ್​ ಪೊಲೀಸರು ಇದೇ ಟ್ವೀಟಿನಡಿ ಸಾಕ್ಷಿ ಸಮೇತ ಟ್ವೀಟ್ ಮಾಡಿದ್ದಾರೆ.

ಪೆಟ್ರೋಲ್ ಮಾಲೀಕರು ಹೇಗೆ ಇವನಿಗೆ ಹೀಗೆಲ್ಲ ಮಾಡಲು ಅನುಮತಿ ಕೊಟ್ಟಿದ್ದಾರೆ? ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಗಮನ ಸೆಳೆಯಲು ಇಂಥವರು ಏನನ್ನೂ ಮಾಡಲು ತಯಾರು. ಜೈಲಿಗೆ ಹೋಗಿ ಬಂದರೂ ಇವರಿಗೆ ಅವಮಾನ ಎನ್ನುವುದೇ ಇರುವುದಿಲ್ಲ ಅಂತೆಲ್ಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:43 am, Tue, 1 August 23

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us