Viral: ಜಪಾನಿಗೆ ಮೊದಲ ಬಾರಿಗೆ ಆನೆ ಕಳಿಸಿದ್ದು ನಮ್ಮ ಮೈಸೂರಿನಿಂದ

ಬಹುತೇಕ ಹೆಚ್ಚಿನವರಿಗೆ ನಮ್ಮ ಮೈಸೂರಿನಿಂದ ಜಪಾನ್‌ ದೇಶಕ್ಕೆ ಅಲ್ಲಿನ ಮಕ್ಕಳಿಗಾಗಿ ಕಳುಹಿಸಿಕೊಡಲಾಗಿದ್ದ ಆನೆಯ ಕಥೆಯ ಬಗ್ಗೆ ಗೊತ್ತಿರಲಿಕ್ಕಿಲ್ಲ. ಕನ್ನಡ ರಾಜ್ಯೋತ್ಸವದ ಈ ಶುಭ ದಿನದಂದು ಜಪಾನಿನ ಕನ್ನಡತಿ ಶ್ವೇತಾ ಆರಾಧ್ಯ ಅವರು ಈ ಕುರಿತ ಒಂದೊಳ್ಳೆ ಮಾಹಿತಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಜಪಾನಿನ ಸಂಸ್ಕೃತಿ, ಅಲ್ಲಿನ ಜನ, ಸ್ಥಳ, ಅಲ್ಲಿನ ಆಚಾರ-ವಿಚಾರ ಈ ಎಲ್ಲದರ ಬಗ್ಗೆ ಅದ್ಭುತವಾಗಿ ಹಾಗೂ ಸ್ಪಷ್ಟ ಕನ್ನಡದಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವ ಜಪಾನಿನ ಕನ್ನಡತಿ ಶ್ವೇತಾ ಆರಾಧ್ಯ ಅವರ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಇವರು ಪ್ರತಿನಿತ್ಯ ಜಪಾನ್‌ ದೇಶಕ್ಕೆ ಸಂಬಂಧಿಸಿದ ಒಳ್ಳೊಳ್ಳೆಯ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಕನ್ನಡ ರಾಜ್ಯೋತ್ಸವದ ಈ ಶುಭ ದಿನದಂದು ಮೊದಲ ಬಾರಿಗೆ ಮೈಸೂರಿನಿಂದ ದೂರದ ಜಪಾನ್‌ ದೇಶಕ್ಕೆ ಕಳುಹಿಸಿಕೊಡಲಾಗಿದ್ದ ಆನೆಯ ಬಗೆಗಿನ ಮಾಹಿತಿಯನ್ನು ಶೇರ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಎರಡನೇ ಮಹಾಯುದ್ಧದ ಜಪಾನಿನ ಮೃಗಾಲಯಗಳಲ್ಲಿ ಯಾವುದೇ ದೈತ್ಯ ಪ್ರಾಣಿಗಳು ಇರಲಿಲ್ಲ. ಈ ಕಾರಣದಿಂದಾಗಿ 1949 ರಲ್ಲಿ ಜಪಾನಿನ ಶಾಲಾ ಮಕ್ಕಳು ಭಾರತದ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರು ಅವರಿಗೆ “ನಮ್ಮ ದೇಶದಲ್ಲಿ ಯಾವುದೇ ತರಹದ ದೊಡ್ಡ ಪ್ರಾಣಿಗಳಲಿಲ್ಲ, ನಮಗೆ ಒಂದು ಆನೆಯನ್ನು ಕಳುಹಿಸಿಕೊಡಿ ನೆಹರು ಚಾಚಾ” ಎಂದು 600 ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದರು. ಮಕ್ಕಳು ಬರೆದ ಮುದ್ದಾದ ಪತ್ರಗಳನ್ನು ಓದಿ ಖುಷಿಯಾದ ನೆಹರುರವರು ನಮ್ಮ ಮೈಸೂರಿನ ಮಹಾರಾಜರೊಂದಿಗೆ ಮಾತನಾಡಿ ಜಪಾನಿಗೆ ಆನೆ ಕಳುಹಿಸಿಕೊಡಲು ನಿರ್ಧರಿಸುತ್ತಾರೆ.

ಇದನ್ನೂ ಓದಿ: ಕನ್ನಡ್‌ ಅಲ್ಲ ಅದು ಕನ್ನಡ; ವೇದಿಕೆ ಮೇಲೆ ಕಿಚ್ಚನ ʼಕನ್ನಡʼ ಪಾಠ

ನಂತರ ಆನೆಯನ್ನು ಕರೆದುಕೊಂಡು ಹೋಗಲು ಬಂದ ಜಪಾನಿಯರು ನಮ್ಮ ಕರ್ನಾಟಕದಲ್ಲಿ ಎರಡು ತಿಂಗಳುಗಳ ಕಾಲ ಇದ್ದು, ಕನ್ನಡವನ್ನು ಕಲಿತು ಆಮೇಲೆ ಆನೆಯನ್ನು ಜಪಾನ್‌ ದೇಶಕ್ಕೆ ಕರೆದುಕೊಂಡು ಹೋಗ್ತಾರೆ. ಈ ಆನೆಗೆ ಇಂದಿರಾ ಎಂಬ ಹೆಸರಿಟ್ಟು 1949 ರ ಸೆಪ್ಟೆಂಬರ್‌ 25 ರಂದು ಟೋಕಿಯೊದ ಯುನೋ ಮೃಗಾಲಯಕ್ಕೆ ಕರೆದುಕೊಂಡು ಬರ್ತಾರೆ. ಈ ಮೈಸೂರಿನ ಆನೆಯನ್ನು ನೋಡಲೆಂದೇ ಮೃಗಾಲಯಕ್ಕೆ ಸಾವಿರಾರು ಪ್ರವಾಸಿಗರು ಬಂದು ಈ ಮೃಗಾಲಯವು ತುಂಬಾನೇ ಪ್ರಸಿದ್ಧಿಯನ್ನು ಪಡೆಯಿತು. ಅಷ್ಟೇ ಅಲ್ಲದೆ 1957 ರಲ್ಲಿ ನೆಹರೂ ಮತ್ತು ಇಂದಿರಾ ಗಾಂಧಿ ಜಪಾನಿಗೆ ಹೋದ ಸಂದರ್ಭದಲ್ಲಿ ಈ ಮೃಗಾಲಯಕ್ಕೂ ಭೇಟಿ ನೀಡಿದ್ದರು. 1983 ರಲ್ಲಿ ಇಂದಿರಾ ಆನೆ ಅದೇ ಮೃಗಾಲಯದಲ್ಲಿ ಕೊನೆಯುಸಿರೆಳೆಯಿತು. ಮೈಸೂರಿನ ಈ ಆನೆಗೆ ಸಂಬಂಧಿಸಿದ ಮಾಹಿತಿಪೂರ್ಣ ವಿಡಿಯೋವನ್ನು ಶ್ವೇತಾ ಆರಾಧ್ಯ kannadati_in_japan ಎಂಬ ಹೆಸರಿನ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 48 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ವಿಷಯ ಗೊತ್ತಿರಲಿಲ್ಲ, ಕರ್ನಾಟಕದ ಬಗ್ಗೆ ಒಂದೊಳ್ಳೆ ಮಾಹಿತಿಯನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆನೆಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us