AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Row: ಹಿಜಾಬ್ ತೆಗೆದು ಬನ್ನಿ; ಹಣ ಡ್ರಾ ಮಾಡಲು ಬಂದ ಮುಸ್ಲಿಂ ಮಹಿಳೆಯನ್ನು ತಡೆದ ಬ್ಯಾಂಕ್ ಸಿಬ್ಬಂದಿ

2 ನಿಮಿಷ 20 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಮುಸ್ಲಿಂ ಯುವತಿಗೆ ಹಣವನ್ನು ಡ್ರಾ ಮಾಡುವ ಮೊದಲು ಹಿಜಾಬ್ ತೆಗೆದಿಟ್ಟು ಬರಲು ಬ್ಯಾಂಕ್ ಉದ್ಯೋಗಿಗಳು ಆದೇಶಿಸುತ್ತಾರೆ. ಆದರೆ, ಆ ಆದೇಶವನ್ನು ಆ ಯುವತಿ ವಿರೋಧಿಸುವುದನ್ನು ಕೇಳಬಹುದು.

Hijab Row: ಹಿಜಾಬ್ ತೆಗೆದು ಬನ್ನಿ; ಹಣ ಡ್ರಾ ಮಾಡಲು ಬಂದ ಮುಸ್ಲಿಂ ಮಹಿಳೆಯನ್ನು ತಡೆದ ಬ್ಯಾಂಕ್ ಸಿಬ್ಬಂದಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 21, 2022 | 5:27 PM

Share

ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಂ ಯುವತಿಯರು ಧರಿಸುವ ಹಿಜಾಬ್ (ತಲೆಯ ಸ್ಕಾರ್ಫ್) ವಿವಾದ ತಾರಕಕ್ಕೇರಿರುವಾಗಲೇ, ಹಿಜಾಬ್ (Hijab) ಧರಿಸಿದ ಯುವತಿಯೊಬ್ಬರಿಗೆ ಯುಕೋ ಬ್ಯಾಂಕ್‌ನಲ್ಲಿ ವಹಿವಾಟು ನಡೆಸದಂತೆ ತಡೆದ ವಿಚಿತ್ರ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಸಂಜೆ ಮುಸ್ಲಿಂ ಯುವತಿಯೊಬ್ಬರು ರಾಷ್ಟ್ರೀಕೃತ ಬ್ಯಾಂಕ್‌ ಯುಕೋದಿಂದ ಹಣ ಡ್ರಾ ಮಾಡಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋವೊಂದು ವೈರಲ್ (Video Viral) ಆಗಿದ್ದು, ಯುವತಿ ತನ್ನ ಫೋನ್‌ನಲ್ಲಿ ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಿದ್ದಾಳೆ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್​ಲೋಡ್ ಮಾಡಿದ್ದಾಳೆ.

2 ನಿಮಿಷ 20 ಸೆಕೆಂಡುಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಹಣವನ್ನು ಡ್ರಾ ಮಾಡುವ ಮೊದಲು ಹಿಜಾಬ್ ತೆಗೆದಿಟ್ಟು ಬರಲು ಬ್ಯಾಂಕ್ ಉದ್ಯೋಗಿಗಳು ಆದೇಶಿಸುತ್ತಾರೆ. ಆದರೆ, ಆ ಆದೇಶವನ್ನು ಆ ಯುವತಿ ವಿರೋಧಿಸುವುದನ್ನು ಕೇಳಬಹುದು. ಆಕೆ ತನ್ನ ಪೋಷಕರಿಗೆ ಕರೆ ಮಾಡಿ, ಹಿಜಾಬ್ ಧರಿಸಿದರೆ ಬ್ಯಾಂಕ್ ಒಳಗೆ ಬಿಡುವುದಿಲ್ಲ ಎಂಬ ಲಿಖಿತ ಸೂಚನೆಯನ್ನು ತೋರಿಸಲು ಆಕೆ ಬ್ಯಾಂಕ್ ಉದ್ಯೋಗಿಗಳನ್ನು ಕೇಳಿದಳು. ಆ ಯುವತಿ ಮತ್ತು ಆಕೆಯ ಕುಟುಂಬಕ್ಕೆ ಬ್ಯಾಂಕ್ ಒಳಗೆ ಪ್ರವೇಶಿಸಲು ನಿರಾಕರಿಸಿದ ಘಟನೆಯನ್ನು ರೆಕಾರ್ಡ್ ಮಾಡುವುದನ್ನು ನಿಲ್ಲಿಸುವಂತೆ ಬ್ಯಾಂಕ್ ಉದ್ಯೋಗಿಗಳು ಕೇಳಿಕೊಂಡರು.

ನಾನು ಮತ್ತು ನನ್ನ ಮಗಳು ಪ್ರತಿ ತಿಂಗಳು ಬ್ಯಾಂಕ್‌ಗೆ ಬರುತ್ತಿದ್ದೆವು. ಆದರೆ ಹಿಂದೆ ಯಾರೂ ಹಿಜಾಬ್​ಗೆ ಆಕ್ಷೇಪಿಸಿರಲಿಲ್ಲ. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆ? ಕರ್ನಾಟಕದಲ್ಲಿ ಅಂಥದ್ದೇನಾದರೂ ನಿಯಮ ಜಾರಿಯಾಗಿದ್ದರೆ ಬಿಹಾರದಲ್ಲಿ ಯಾಕೆ ಜಾರಿಗೆ ತರುತ್ತಿದ್ದಾರೆ? ಬ್ಯಾಂಕಿಂಗ್ ಕಾರ್ಯಾಚರಣೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವ ಕುರಿತು ಅವರ ಬಳಿ ಯಾವುದಾದರೂ ಲಿಖಿತ ಅಧಿಸೂಚನೆ ಇದೆಯೇ? ಎಂದು ಆಕೆಯ ತಂದೆ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಈ ವಿಡಿಯೋವನ್ನು ಶೇರ್ ಮಾಡಿ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ನಿಮ್ಮ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ನೀವು ಯಾವ ಮಟ್ಟಿಗೆ ಇಳಿಯಬಹುದು? ನೀವು ಬಿಜೆಪಿಯ ಮುಂದೆ ನಿಮ್ಮ ಸಿದ್ಧಾಂತ, ನೀತಿ, ನೈತಿಕ ಹೊಣೆಗಾರಿಕೆ ಮತ್ತು ಆತ್ಮಸಾಕ್ಷಿಯನ್ನು ಅಡಮಾನವಿಟ್ಟಿದ್ದೀರಿ. ನೀವು ಸಂವಿಧಾನವನ್ನು ಗೌರವಿಸಿ ಮತ್ತು ಆಪಾದಿತ ನೌಕರರನ್ನು ಬಂಧಿಸಿ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ.

ಹಿಜಾಬ್‌ ಧರಿಸಿದ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿಗಳನ್ನು ಜನವರಿ 1ರಂದು ಕ್ಯಾಂಪಸ್‌ನಿಂದ ಹೊರಹೋಗುವಂತೆ ಕೇಳಿದ ನಂತರ ಹಿಜಾಬ್ ವಿವಾದ ಭುಗಿಲೆದ್ದಿತು. ಇದಾದ ಬಳಿಕ ಮಂಡ್ಯ, ಶಿವಮೊಗ್ಗ, ಮಂಗಳೂರು, ಬೆಂಗಳೂರು ಸೇರಿದಂತೆ ಅನೇಕ ಕಡೆ ಹಿಜಾಬ್ ಗಲಾಟೆ ತಾರಕಕ್ಕೇರಿತ್ತು. ಇದರಿಂದ ಹಲವೆಡೆ ನಿಷೇಧಾಜ್ಞೆ ಕೂಡ ಜಾರಿಗೊಳಿಸಲಾಗಿತ್ತು. ಹಾಗೇ, ಶಾಲಾ-ಕಾಲೇಜುಗಳಿಗೆ ರಜೆ ಕೂಡ ಘೋಷಿಸಲಾಗಿತ್ತು.

ಇದನ್ನೂ ಓದಿ: Karnataka Hijab Row Live: ಸಮವಸ್ತ್ರ ಸಂಘರ್ಷ! ಹೈಕೋರ್ಟ್​ನಲ್ಲಿ ಹಿಜಾಬ್ ವಿಚಾರಣೆ ಆರಂಭ

News Analysis: ಹಿಜಾಬ್​ ವಿವಾದ- ಕಾಂಗ್ರೆಸ್​ನ ಶೂನ್ಯ ಸಂಪಾದನೆ