AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕಲಚೇತನರಾಗಿದ್ದರೂ ಸೋಲೊಪ್ಪಿಕೊಳ್ಳದೆ ಸ್ವಾವಲಂಬಿ ಬದುಕು ನಡೆಸುತ್ತಿರುವ ಇವರು ಅನೇಕರಿಗೆ ಪ್ರೇರಣಾದಾಯಕರು!

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಕಳೆದ ತಿಂಗಲೇ ಮುರುಗನ್ ಅವರ ಕತೆಯನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಅವರ ವ್ಹೀಲ್ ಚೇರ್ ಗೆ ಮೋಟಾರ್ ಅಳವಡಿಸಿರುವುದರಿಂದ ಓಡಾಟ ಸುಲಭವಾಗಿದೆ.

ವಿಕಲಚೇತನರಾಗಿದ್ದರೂ ಸೋಲೊಪ್ಪಿಕೊಳ್ಳದೆ ಸ್ವಾವಲಂಬಿ ಬದುಕು ನಡೆಸುತ್ತಿರುವ ಇವರು ಅನೇಕರಿಗೆ ಪ್ರೇರಣಾದಾಯಕರು!
ಡೆಲಿವರಿಗೆ ಹೊರಟಿರುವ ಗಣೇಶ್ ಮುರುಗನ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 28, 2022 | 4:34 PM

Share

‘ಆಗದು ಎಂದು ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು…’ ಅಂತ 1972 ರಲ್ಲಿ ತೆರೆಕಂಡ ಅಣ್ಣಾವ್ರ ಸೂಪರ್ ಡೂಪರ್ ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ ಹಾಡಿದ ಹಾಡು ಕೂಡ ಸೂಪರ್ ಹಿಟ್ ಆಗಿತ್ತು. ಆ ಹಾಡು ಮತ್ತು ಅದರ ತಿರುಳು ಇವತ್ತಿಗೂ ಮತ್ತು ಯಾವತ್ತಿಗೂ ಪ್ರಸ್ತುತ ಮಾರಾಯ್ರೇ. ಮನಸ್ಸಿದ್ದರೆ ಮಾರ್ಗವುಂಟು ಅನ್ನೋದು ನಮ್ಮೆಲ್ಲರಿಗೂ ಪ್ರೇರಣಾದಾಯಕ. ಚೆನೈ ನಿವಾಸಿ 37-ವರ್ಷದ ಗಣೇಶ ಮುರುಗನ್ ಹೆಸರಿನ ವಿಕಲಚೇತನರೊಬ್ಬರು ಈ ಉಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬತ್ತದ ಚೈತನ್ಯ ಪ್ರದರ್ಶಿಸುತ್ತಾ ನಮಗೆ ಸ್ಫೂರ್ತಿದಾಯಕರಾಗಿದ್ದಾರೆ.

ಕಾಲುಗಳಿಂದ ಊನರಾಗಿರುವ ಮುರುಗನ್ ಜೊಮ್ಯಾಟೊ ಫುಡ್ ಡೆಲಿವರಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾರೆ ಅಂದರೆ ನಂಬುತ್ತೀರಾ? ಅವರು ಸಂಸ್ಥೆಯ ಟಿ ಶರ್ಟ್ ಧರಿಸಿ ಮೋಟಾರ್ ಚಾಲಿತ ವ್ಹೀಲ್ ಚೇರ್ ನಲ್ಲಿ ಫುಡ್ ಡೆಲಿವರಿಗೆ ಹೊರಟಿರುವ ದೃಶ್ಯ ವೈರಲ್ ಆಗಿದೆ ಮಾರಾಯ್ರೇ.

ಈ ವಿಡಿಯೋವನ್ನು ಗ್ರೂಮಿಂಗ್ ಬುಲ್ಸ್ ಹೆಸರಿನ ಪೇಜ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದೆ. ‘ಪ್ರೇರಣೆಗೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಕಳೆದ ತಿಂಗಲೇ ಮುರುಗನ್ ಅವರ ಕತೆಯನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಅವರ ವ್ಹೀಲ್ ಚೇರ್ ಗೆ ಮೋಟಾರ್ ಅಳವಡಿಸಿರುವುದರಿಂದ ಓಡಾಟ ಸುಲಭವಾಗಿದೆ. ಇದರ ಮತ್ತೊಂದು ವೈಶಿಷ್ಟ್ಯತೆಯೆಂದರೆ ಡೆಲಿವರಿ ಇಲ್ಲದ ಸಮಯದಲ್ಲಿ ಮೋಟಾರನ್ನು ಡಿಟ್ಯಾಚ್ ಮಾಡಿ ಒಂದು ಸಾಮಾನ್ಯ ವ್ಹೀಲ್ ಚೇರ್ ಮಾಡಿಕೊಳ್ಳಬಹುದು.

ಮುರುಗನ್ ವಿಡಿಯೋ ಈಗಾಗಲೇ 60 ಲಕ್ಷಕ್ಕೂ ಹೆಚ್ಚು ವ್ಯೂಸ್ ಮತ್ತು 1 ಲಕ್ಷಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿದೆ. ವಿಡಿಯೋ ವೀಕ್ಷಿಸಿದವರಲ್ಲಿ ಒಬ್ಬರು

‘ಶಹಬ್ಬಾಸ್ ಬ್ರದರ್, ನಿಮಗೆ ನನ್ನ ಸಲಾಂ,’ ಅಂತ ಕಾಮೆಂಟ್ ಮಾಡಿದರೆ ಮತ್ತೊಬ್ಬರು, ‘ಕೈಕಾಲು ನೆಟ್ಟಗಿದ್ದರೂ ತಮ್ಮ ಬದುಕಿನ ಬಗ್ಗೆ ಸದಾ ದೂರುವ ಜನರಿಗೆ ಇದು ಅತ್ಯಂತ ಸ್ಫೂರ್ತಿದಾಯಕ ಮತ್ತು ಅತ್ಯುತ್ತಮ ಉದಾಹರಣೆ,’ ಅಂತ ಹೇಳಿದ್ದಾರೆ.

ಕೈಕಾಲು ನೆಟ್ಟಗಿರುವನು ನಾನು ಶಕ್ತಿಶಾಲಿ ಅಂತ ಬೀಗುವ ಅವಶ್ಯಕತೆಯಿಲ್ಲ ಹಾಗೆಯೇ ವಿಕಲ ಚೇತನರು ಕಡಿಮೆ ಸಾಮರ್ಥ್ಯದವರು ಅಂತ ಭಾವಿಸುವ ಅವಶ್ಯಕತೆಯಿಲ್ಲ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಐಎಎಸ್ ಅಧಿಕಾರಿ ಸೋನಲ್ ಗೋಯಲ್ ಅವರು ಮುಂಬೈ ನಗರದ ಮಲಾಡಲ್ಲಿ ಮತ್ತೊಬ್ಬ ವಿಕಲಚೇತನ ವ್ಯಕ್ತಿ ಪಾವ್ ಭಾಜಿ ಸ್ಟಾಲ್ ಇಟ್ಟುಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಒಂದು ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಮಿತೇಶ ಗುಪ್ತಾ ಹೆಸರಿನ ವ್ಯಕ್ತಿ ಅಪಘಾತವೊಂದರಲ್ಲಿ ದುರದೃಷ್ಟವಶಾತ್ ಒಂದು ಕೈಯನ್ನು ಕಳೆದುಕೊಂಡರೂಆ ಅದನ್ನು ತನ್ನ ಬದುಕಿಗೆ ಅಡಚಣೆ ಅಂತ ಭಾವಿಸದೆ ಶ್ರಮವಹಿಸಿ ದುಡಿಯುತ್ತಾ ತಮ್ಮ ಅನ್ನ ಸಂಪಾದಿಸಿಕೊಳ್ಳುತ್ತಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋನಲ್ಲಿ ಮಿತೇಶ್ ಊನಗೊಂಡಿರುವ ಎಡಗೈನ ಕಂಕುಳಲ್ಲಿ ಚಾಕು ಸಿಕ್ಕಿಸಿಕೊಂಡು ಬಲಗೈಯಿಂದ ಈರುಳ್ಳಿ, ಟೊಮ್ಯಾಟೊ ಮತ್ತು ಹಸಿರುಮೆಣಸಿನಕಾಯಿ ಮೊದಲಾದವುಗಳನ್ನು ಕಟ್ ಮಾಡುತ್ತಿರುವುದು ನೋಡಬಹುದು. ಅವರ ಸಂಕಲ್ಪ ಮತ್ತು ಸೋಲಪ್ಪಿಕೊಳ್ಳದ ಮನಸ್ಥಿತಿ ಎಲ್ಲರಿಗೂ ಪ್ರೇರಣೆದಾಯಕವಾಗಿದೆ.

‘ನನಗಿರುವ ಎಲ್ಲಾ ಸಮಸ್ಯೆ ಮತ್ತು ಕಷ್ಟಗಳಿಗಿಂತ ನನ್ನ ದೇವರು ದೊಡ್ಡವನು’ ಅಂತ ಶಿರ್ಷಿಕೆಯನ್ನು ಸೋನಲ್ ಗೋಯೆಲ್ ತಮ್ಮ ಪೋಸ್ಟ್ ಗೆ ನೀಡಿದ್ದಾರೆ.

‘ಕೆಲ ವರ್ಷಗಳ ಹಿಂದೆ ನಡೆದ ಅಪಘಾತವೊಂದರಲ್ಲಿ ದುರದೃಷ್ಟಕರವಾಗಿ ಕೈ ಕಳೆದುಕೊಂಡ ಮಿತೇಶ್ ಗುಪ್ತಾ ಈಗಲೂ ಮುಂಬೈನ ಮಲಾಡ್ ನಲ್ಲಿ ಪಾವ್ ಭಾಜಿ ಅಂಗಡಿ ನಡೆಸುತ್ತಾರೆ,’ ಎಂದು ಸೋನಲ್ ಹೇಳಿದ್ದಾರೆ