Video Viral: ಅರ್ಜುನನ್ನು ಕಳೆದುಕೊಂಡು ದುಃಖದಲ್ಲಿರುವ ವಿನುವಿನ ಮುಖದಲ್ಲಿ ನಗು ತರಿಸಿದ ತಮ್ಮನ ಮಗಳು

ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಸ್ಸು ಕರಗಿಸುವ ವಿಡಿಯೋ ಒಂದು ಹರಿದಾಡುತ್ತಿದೆ. ಎಲ್ಲರಿಗೂ ಅರ್ಜುನನ ಸಾವು ನೋವು ಕೊಟ್ಟಿದೆ. ಆದರೆ ವಿನುವಿನ ನೋವು ನಮ್ಮ ಎಲ್ಲರ ನೋವಿಗಿಂತಲೂ ಮಿಗಿಲು. ಅವನನ್ನು ಸಮಾಧಾನ ಪಡಿಸಲು ಮನೆಯವರು, ಕುಟುಂಬಸ್ಥರು ಹೆಣಗಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ ಇಲ್ಲೊಂದು ಪುಟ್ಟ ಹುಡುಗಿ ವಿನುವಿನ ಮುಖದಲ್ಲಿ ನಗು ನೋಡಲು ಏನೆಲ್ಲಾ ಮಾಡುತ್ತಿದೆ ಎಂಬುದನ್ನು ನೀವು ನೋಡಿದರೆ ನಿಮ್ಮ ಕಣ್ಣಿನಲ್ಲಿಯೂ ನೀರು ಜಿನುಗದೇ ಇರಲಾರದು.

Video Viral: ಅರ್ಜುನನ್ನು ಕಳೆದುಕೊಂಡು ದುಃಖದಲ್ಲಿರುವ ವಿನುವಿನ ಮುಖದಲ್ಲಿ ನಗು ತರಿಸಿದ ತಮ್ಮನ ಮಗಳು
ವೈರಲ್​​ ವಿಡಿಯೋ
Edited By:

Updated on: Dec 18, 2023 | 3:58 PM

ಇತ್ತೀಚಿಗೆ ನಡೆದ ಘಟನೆಯೊಂದು ಕರ್ನಾಟಕ ಜನತೆಯನ್ನು ಇನ್ನಿಲ್ಲದಂತೆ ಕಾಡಿದ್ದು ಸುಳ್ಳಲ್ಲ. ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಯ ದುಃಖಕ್ಕೆ ಸಮನಾಗಿದ್ದ ಅರ್ಜುನನ ಮಾವುತ ವಿನುವಿನ ಕಷ್ಟವನ್ನು ಕಂಡು ನಾಡಿಗೆ ನಾಡೇ ಮರುಗಿತ್ತು. ಮೈಸೂರು ದಸರಾ ಕ್ಯಾಪ್ಟನ್ ಅರ್ಜುನ ಕಾಡಾನೆ ತಿವಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದ. ಬಳಿಕ ಸರ್ಕಾರದ ವತಿಯಿಂದ ಗೌರವಸಲ್ಲಿಸಿ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಸಮಾಧಿ ಮಾಡಲಾಗಿತ್ತು. ಇದೀಗ ಅರ್ಜುನನ ಮಾವುತ ವಿನು ಹಾಗೂ ಕುಟುಂಬಸ್ಥರು ಡಿ. 15ಕ್ಕೆ 11ನೇ ದಿನದ ಕಾರ್ಯ ಮಾಡಿದ್ದಾರೆ. ಅರ್ಜುನನ ಸಾವು ಎಲ್ಲರಿಗೂ ದುಃಖ ನೀಡಿದ್ದು ನಿಜವಾದರೂ ವಿನುವಿನ ಪಾಡು ಮಾತ್ರ ಯಾರಿಗೂ ನೀಡ ಬೇಡ ಎಂದು ಎಲ್ಲರೂ ದೇವರನ್ನು ಬೇಡಿಕೊಂಡಿದ್ದು ಕೂಡ ಅಷ್ಟೇ ನಿಜ.

ಅರ್ಜುನನ ಸಮಾಧಿ ಬಳಿಗೆ ಬಂದ ಮಾವುತ ವಿನು, ಆನೆಯನ್ನು ನೆನೆದು ಮತ್ತೆ ಕಣ್ಣೀರಿಟ್ಟಿದ್ದ ವಿಡಿಯೋ ಕೂಡ ವೈರೆಲ್ ಆಗಿತ್ತು. ಆದರೆ ಅದರ ಹೊರತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮನಸ್ಸು ಕರಗಿಸಿದೆ. ಎಲ್ಲರಿಗೂ ಅರ್ಜುನನ ಸಾವು ನೋವು ಕೊಟ್ಟಿದೆ. ಆದರೆ ವಿನುವಿನ ನೋವು ನಮ್ಮ ಎಲ್ಲರ ನೋವಿಗಿಂತಲೂ ಮಿಗಿಲು. ಅವನನ್ನು ಸಮಾಧಾನ ಪಡಿಸಲು ಮನೆಯವರು, ಕುಟುಂಬಸ್ಥರು ಹೆಣಗಾಡುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ ಇಲ್ಲೊಂದು ಪುಟ್ಟ ಹುಡುಗಿ ವಿನುವಿನ ಮುಖದಲ್ಲಿ ನಗು ನೋಡಲು ಏನೆಲ್ಲಾ ಮಾಡುತ್ತಿದೆ ಎಂಬುದನ್ನು ನೀವು ನೋಡಿದರೆ ನಿಮ್ಮ ಕಣ್ಣಿನಲ್ಲಿಯೂ ನೀರು ಜಿನುಗದೇ ಇರಲಾರದು. ವಿಡಿಯೋದಲ್ಲಿ ಕಾಣುವ ಪುಟ್ಟ ಹುಡುಗಿ ವಿನುವಿನ ತಮ್ಮ ರಾಜಣ್ಣನ ಮಗಳು. ತನ್ನ ದೊಡ್ಡಪ್ಪನ ಕೂದಲನ್ನು ಬಾಚುತ್ತಾ, ಕೀಟಲೆ ಮಾಡುತ್ತಾ, ಅವನ ಸುತ್ತ ಮುತ್ತ ಸುಳಿದಾಡುತ್ತಾ ತನ್ನ ತುಂಟಾಟಗಳಿಂದ ಅವನನ್ನು ಖುಷಿ ಪಡಿಸಲು ನೋಡುತ್ತಾಳೆ. ಆಕೆ ಅದರಲ್ಲಿ ಯಶಸ್ವಿಯೂ ಆಗುತ್ತಾಳೆ. ಮನಸ್ಸಿನಲ್ಲಿ ದುಃಖದ ಮೂಟೆ ಹೊತ್ತುಕೊಂಡಿದ್ದರೂ ಕೂಡ ಆಕೆಯ ಖುಷಿಗೆ ಕೈ ಜೋಡಿಸುವುವ ವಿನುವನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ:  ಟ್ರ್ಯಾಕಿಂಗ್ ಆ್ಯಪ್ ಬಳಸಿ ಮಗನ ಅಕ್ರಮ ಸಂಬಂಧ ಪತ್ತೆ ಮಾಡಿದ ತಾಯಿ

ವೈರಲ್​​ ವಿಡಿಯೋ ಇಲ್ಲಿದೆ

ಈ ವಿಡಿಯೋವನ್ನು mc_vj_kousalya ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು, ಮಗಳ ಆಟಕ್ಕೆ ತುಸು ನಗು ಬಿರಿದ ಮಾವುತ ವಿನುವನ್ನು ನೋಡಿ ಕೆಲವರು ಮರುಗಿದರೆ ಇನ್ನು ಕೆಲವರು ಮನೆಯಲ್ಲಿ ಮಕ್ಕಳಿದ್ದರೆ ದುಖಃ ದೂರವಾಗುತ್ತದೆ. ಇದಕ್ಕೆ ಮನೆ ತುಂಬಾ ಮಕ್ಕಳಿರಬೇಕು ಎನ್ನುವುದು ಎಂದಿದ್ದಾರೆ. ಇನ್ನು ಹಲವರು ಅರ್ಜುನನ ಸಾವಿಗೆ ದುಃಖ ವ್ಯಕ್ತ ಪಡಿಸಿದ್ದು, ವಿನುವಿಗೆ ಅವನ ದುಃಖ ಮರೆಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಬೇಡಿಕೊಂಡಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ:

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us