35 ವರ್ಷದ ಆನೆಯ ಜೀವ ಉಳಿಸಲು ಕೈಜೋಡಿಸಿದ ಭಾರತೀಯ ಸೇನೆ; ನೋಡಿ ವಿಡಿಯೋ

Elephant : ಉತ್ತರಾಖಂಡದ 35 ವರ್ಷದ ಮೋತಿ ಇದೀಗ ಸವಾರಿ ನಿಲ್ಲಿಸಿದೆ. ಎದ್ದು ನಿಂತು ಆಹಾರ, ನೀರು ಸೇವಿಸಲು ಪ್ರಯತ್ನಿಸುತ್ತಿದೆಯಾದರೂ ಆರೋಗ್ಯ ಸ್ಥಿತಿ ಗಂಭೀರವೇ. ನೆಟ್ಟಿಗರು ಇದರ ಉಳಿವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

35 ವರ್ಷದ ಆನೆಯ ಜೀವ ಉಳಿಸಲು ಕೈಜೋಡಿಸಿದ ಭಾರತೀಯ ಸೇನೆ; ನೋಡಿ ವಿಡಿಯೋ
ಮೋತಿಗೆ ಚಿಕಿತ್ಸೆ ನೀಡುತ್ತಿರುವ ಸೇನಾ ಯೋಧರು
ಶ್ರೀದೇವಿ ಕಳಸದ

Updated on: Feb 08, 2023 | 12:31 PM

Viral Video : ಉತ್ತರಾಖಂಡದಲ್ಲಿ 35 ವರ್ಷದ ಆನೆಯ ಜೀವ ಉಳಿಸಲು ಎನ್​ಜಿಒದೊಂದಿಗೆ ಭಾರತೀಯ ಸೇನೆಯು ಕೈಜೋಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಆನೆಯ ಹೆಸರು ಮೋತಿ. ವಯೋಸಹಜ ಕಾರಣದಿಂದ ನಿತ್ರಾಣಗೊಂಡಿದ್ದ ಇದು ವೈಲ್ಡ್​ಲೈಫ್​ ಎಸ್​ಒಎಸ್​ ಮತ್ತು ಸೇನೆಯ ಆರೈಕೆ ಮತ್ತು ಚಿಕಿತ್ಸೆಯ ಪರಿಣಾಮವಾಗಿ ಚೇತರಿಸಿಕೊಳ್ಳುತ್ತಿದೆ.

ಉತ್ತರಾಖಂಡದ ರಾಮನಗರ ಜಿಲ್ಲೆಯಲ್ಲಿ ಮೋತಿ ಕುಸಿದು ಬೀಳುತ್ತಿದ್ದಂತೆ ಗಂಭೀರವಾಗಿ ಅಸ್ವಸ್ಥಗೊಂಡಿತು. ಆಗ ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್​ ಭಾರತೀಯ ಸೇನೆಯ ಸಹಾಯ ಕೋರಿದರು. ಭಾರತೀಯ ಸೇನೆಯ ಎಂಜಿನಿಯರ್​ಗಳ ತಂಡವು ಮೋತಿಗೆ ಅವಶ್ಯಕವಿರುವ ಚಿಕಿತ್ಸೆಗೆ ಸಹಾಯ ಮಾಡಿತು. 24 ಗಂಟೆಗಳೊಳಗೆ ಅದು ಎದ್ದುನಿಲ್ಲಲು ಬೇಕಾದ ತಾಂತ್ರಿಕ ಸಹಾಯವನ್ನು ಈ ತಂಡ ಮಾಡಿತು.

ಇದನ್ನೂ ಓದಿ : ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್

ಮೋತಿ ಭಿಕ್ಷೆ ಬೇಡಲು ಸಹಕರಿಸುವ ಆನೆ. 35 ವರ್ಷಗಳ ತನಕ ಎಣಿಕೆಗೆ ಸಿಗದಷ್ಟು ಸಾರ್ವಜನಿಕ ಸವಾರಿ ಪೂರೈಸಿದೆ. ಇದೀಗ ವಯೋಸಹಜವಾಗಿ ದಣಿದಿದೆ. ಚಿಕಿತ್ಸೆ ಮತ್ತು ಉಪಚಾರದ ನಂತರ ಇದೀಗ ನಿಂತುಕೊಂಡೇ ಆಹಾರ ಸೇವಿಸುವುದು, ನೀರು ಕುಡಿಯುವುದನ್ನು ಶುರುಮಾಡಿದೆ. ಆದರೂ ಇದರ ಆರೋಗ್ಯದ ಬಗ್ಗೆ ಭರವಸೆ ಅಷ್ಟಕ್ಕಷ್ಟೇ. ಚಿಕಿತ್ಸೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತದೆ.

‘ಮೋತಿ ಇನ್ನೂ ಗಂಭೀರ ಸ್ಥಿತಿಯಲ್ಲಿದೆ. ಮುಂಗಾಲುಗಳಲ್ಲಿ ಶಕ್ತಿ ಇಲ್ಲ. ಸಾಕಷ್ಟು ಮಸಾಜ್​ ಮಾಡಿದಾಗ ಸ್ವಲ್ಪ ಎತ್ತಲು ಪ್ರಯತ್ನಿಸುತ್ತದೆ. ಹಿಂಗಾಲುಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ಸಾಧ್ಯವಾಗಿದೆ. ಚಿಕಿತ್ಸೆ ಮುಂದುವರಿಯುತ್ತದೆ’ ಎಂದು ವೈಲ್ಡ್​ಲೈಫ್​ ಎಸ್​ಒಎಸ್ ಟ್ವೀಟ್ ಮಾಡಿದೆ. ಅನೇಕರು ಈ ಪೋಸ್ಟ್​ ಮೆಚ್ಚಿಕೊಂಡು ಮೋತಿಯ ಆರೋಗ್ಯಕ್ಕೆ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಚೆನ್ನೈನ ಈ ಅಮ್ಮನಿಗೆ 90, ಮಗಳಿಗೆ 72; ಇವರೀಗ ಸ್ವಂತ ಉದ್ಯಮಿಗಳು

ಮೋತಿಯ ಬಗ್ಗೆ ಅಪ್​ಡೇಟ್ ಮಾಡಿದ್ದಕ್ಕೆ ಧನ್ಯವಾದ, ಖಂಡಿತವಾಗಿಯೂ ನೀವು ಅವನನ್ನು ನಿರಾಸೆಗೊಳಿಸುವುದಿಲ್ಲ. ಇದೋ ನಮ್ಮ ಪ್ರಾರ್ಥನೆ ಅವನಿಗೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಮೋತಿ ನಿನಗಾಗಿ ನಾವೆಲ್ಲರೂ ಇದ್ದೇವೆ. ನಿನ್ನನ್ನು ಉಳಿಸಲು ಅವರು ನಡೆಸುತ್ತಿರುವ ಪ್ರಯತ್ನ ನೋಡಿ ಕಣ್ಣೀರಿಳಿಯಿತು. ನೀನು ಬೇಗ ಸುಧಾರಿಸುತ್ತೀ ಅವರ ಪ್ರೀತಿ ಮತ್ತು ಆರೈಕೆಯಲ್ಲಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿ ನಾನು ಭಾವುಕನಾಗುತ್ತಿದ್ದೇನೆ. ನಿಮ್ಮ ಪ್ರೀತಿ, ಶ್ರಮಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಮಗದೊಬ್ಬರು ಹೇಳಿದ್ದಾರೆ.

ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:30 pm, Wed, 8 February 23

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us