ವಿಮಾನ ನಿಲ್ದಾಣದಲ್ಲಿಯೂ ತಾಯಿಯ ಆಲೂಪರಾಠಾ ಸವಿದ ಮಧುರ್ ಸಿಂಗ್

Airport : ‘ಮಧ್ಯಮ ವರ್ಗದವರಿಗೆ ವಿಮಾನ ಪ್ರಯಾಣವೇನೋ ಸುಲಭವಾಯಿತು. ಆದರೆ ರೂ. 400 ಗೆ ಒಂದು ದೋಸೆ, ರೂ. 100ಗೆ ನೀರಿನ ಬಾಟಲಿ ಖರೀದಿಸುವುದು ಇನ್ನೂ ಒಂದು ರೀತಿಯ ಸಾಮಾಜಿಕ ಒತ್ತಡದಂತೆ ತೋರುತ್ತಿದೆ.’

ವಿಮಾನ ನಿಲ್ದಾಣದಲ್ಲಿಯೂ ತಾಯಿಯ ಆಲೂಪರಾಠಾ ಸವಿದ ಮಧುರ್ ಸಿಂಗ್
ಅಮ್ಮನೊಂದಿಗೆ ಏರ್​ಪೋರ್ಟ್​ನಲ್ಲಿ ಆಕೆ ಮಾಡಿದ ಆಲೂ ಪರಾಠಾ ಸವಿಯುತ್ತಿರುವ ಮಧುರ್ ಸಿಂಘ್
ಶ್ರೀದೇವಿ ಕಳಸದ

Updated on: Feb 17, 2023 | 3:46 PM

Viral Video : ವಿಮಾನಗಳು ಆಕಾಶದಿಂದ ನೆಲಕ್ಕಿಳಿದರೂ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿರುವ ತಿಂಡಿ ಪದಾರ್ಥಗಳ ಬೆಲೆ ಮಾತ್ರ ಗಗನದಲ್ಲಿಯೇ ಇರುತ್ತವೆ ಎನ್ನುವ ಕೂಗು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಮುಂಬೈನ ಏರ್​ಪೋರ್ಟ್​ವೊಂದರಲ್ಲಿ ಪತ್ರಕರ್ತೆಯೊಬ್ಬರು ‘ಅಚ್ಛೇ ದಿನ್’ ಅನ್ನು ಗೇಲಿ ಮಾಡಿದ್ದರು. 2 ಸಮೋಸಾ, 1 ಕಾಫಿ, 1 ನೀರಿನ ಬಾಟಲಿಗೆ ಮುಂಬೈ ಏರ್​ಪೋರ್ಟ್​ನಲ್ಲಿ ರೂ. 490 ಕೊಡಬೇಕೇ? ಎಂದು ಕೇಳಿದ್ದರು. ಆಗ ನೆಟ್ಟಿಗರೆಲ್ಲರೂ ಏರ್​ಪೋರ್ಟ್​ ಮತ್ತು ಮಲ್ಟಿಪ್ಲೆಕ್ಸ್​​ ಆಹಾರ ಮಳಿಗೆಗಳಲ್ಲಿರುವ ಪದಾರ್ಥಗಳ ಬೆಲೆಯ ಬಗ್ಗೆ ಚರ್ಚಿಸಿದ್ದರು. ಇದೀಗ ವೈರಲ್ ಆಗಿರುವ ಈ ವಿಡಿಯೋ ಟ್ವೀಟ್ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದ್ದು.

‘ಮಧ್ಯಮ ವರ್ಗದವರಿಗೆ ವಿಮಾನ ಪ್ರಯಾಣವೇನೋ ಸುಲಭವಾಯಿತು. ಆದರೆ ರೂ. 400 ಗೆ ಒಂದು ದೋಸೆ, ರೂ. 100ಗೆ ನೀರಿನ ಬಾಟಲಿ ಖರೀದಿಸುವುದು ಇನ್ನೂ ಒಂದು ರೀತಿಯ ಸಾಮಾಜಿಕ ಒತ್ತಡದಂತೆ ತೋರುತ್ತಿದೆ. ಈ ಮಧ್ಯೆ ಅಮ್ಮನೊಂದಿಗೆ ಗೋವಾಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಆಕೆ ಮಾಡಿದ ರುಚಿಯಾದ ಆಲೂ ಪರಾಠಾ ಅನ್ನು ನಿಂಬೆ ಉಪ್ಪಿನಕಾಯಿಯೊಂದಿಗೆ ಏರ್ಪೋರ್ಟಿನೊಳಗೆ ತಿಂದೆ.’ ಮಧುರ್ ಸಿಂಘ್​ ಎನ್ನುವವರು ಟ್ವೀಟ್ ಮಾಡಿರುವ ಈ ಪೋಸ್ಟ್​ ಇದೀಗ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಅನೇಕರು ಈ ಟ್ವೀಟ್​ ಗೆ ಪ್ರತಿಕ್ರಿಯಿಸಿದ್ದಾರೆ. ನಾವು ಹೀಗೆ ಮನೆಯಿಂದ ತಂದ ತಿಂಡಿಯನ್ನು ತಿನ್ನುವಾಗ ಕೆಲವರು ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆ. ಆದರೆ ನಾವು ಇಂಥವರನ್ನು ನಿರ್ಲಕ್ಷಿಸುತ್ತೇವೆ ಎಂದಿದ್ದಾರೆ ಒಬ್ಬರು. ನಿಮ್ಮ ಬಜೆಟ್​ಗೆ ತಕ್ಕಂತೆ ಖರ್ಚು ಮಾಡಿ. ಏನು ರುಚಿ ಅನ್ನಿಸುತ್ತದೆಯೋ ಅದನ್ನು ತಿನ್ನಿ. ಸಮಾಜ ನಿಮ್ಮ ಬಗ್ಗೆ ಏನು ಯೋಚಿಸುತ್ತದೆ ಎಂದು ಯೋಚಿಸಲೇಬೇಡಿ. ನಿಮ್ಮ ಜೀವನಶೈಲಿ ನಿಮ್ಮ ಸ್ವಂತದ್ದು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : ಟರ್ಕಿ: ‘ನೀನೇ ನನ್ನನ್ನು ರಕ್ಷಿಸಿದ್ದು, ಈಗ ಹೊರಟು ನಿಂತರೆ?’ ಬೆಕ್ಕಿನ ವಿಡಿಯೋ ವೈರಲ್

ಮಧ್ಯಮ ವರ್ಗದವರು ಸಮಾಜದಲ್ಲಿ ಸ್ಥಾನಮಾನದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆಂದು ನಾನಂತೂ ಅಂದುಕೊಂಡಿಲ್ಲ. ಈತನಕವೂ ನನ್ನ ಅಮ್ಮ ಅಥವಾ ಹೆಂಡತಿ ಕಟ್ಟಿ ಕಳಿಸಿದ ಬುತ್ತಿಯನ್ನೇ ಉಣ್ಣುತ್ತೇನೆ. ಅವರ ಈ ಕಾಳಜಿ ಮತ್ತು ಪ್ರೀತಿಯ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ ಮಗದೊಬ್ಬರು. ನಾವೂ ಕೂಡ ವಿಮಾನ ನಿಲ್ದಾಣಕ್ಕೆ ಹೋಗುವಾಗೆಲ್ಲ ಆಲೂ ಪರಾಠಾವನ್ನೇ ತಿನ್ನುತ್ತೇವೆ ಎಂದಿದ್ದಾರೆ ಅನೇಕರು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 3:38 pm, Fri, 17 February 23

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us