“ಅಪ್ಪನಿಗೆ ನೀರು ಕೊಟ್ಟು ಹೋದ ಮಗಳು ಮಣ್ಣು ಪಾಲಾದಳು”: ನೆಲಮಂಗಲದಲ್ಲಿ ಮಗಳನ್ನು ಕಳೆದುಕೊಂಡ ತಂದೆಯ ಆಕ್ರಂದನ

Updated on: Jul 30, 2026 | 2:59 PM

ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 10 ವರ್ಷದ ಬಾಲಕಿ ಲಿಖಿತಾ ಮೃತಪಟ್ಟಿದ್ದಾಳೆ. ಶಾಲೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಶಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಮಗಳು ಲಿಖಿತಾ ಕಳೆದುಕೊಂಡ ದುಃಖದಲ್ಲಿರುವ ತಂದೆ ಶ್ರೀಕಾಂತ್, ತನ್ನ ಕುಟುಂಬದ ಸಂಕಷ್ಟ ಹಾಗೂ ಮಗಳೊಂದಿಗಿನ ಕೊನೆಯ ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು, ಜು.30: ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ವರ್ಷದ ಬಾಲಕಿ ಲಿಖಿತಾ ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಲಿಖಿತಾ, ಪ್ರತಿದಿನದಂತೆ ತನ್ನ ದೊಡ್ಡಮ್ಮನ ಜೊತೆ ಶಾಲೆಗೆ ತೆರಳುತ್ತಿದ್ದಳು. ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಮಾರುತಿ ಶಿಫ್ಟ್ ಕಾರು ಆಕೆಗೆ ಡಿಕ್ಕಿ ಹೊಡೆದಿದೆ. ನೆಲಮಂಗಲದಿಂದ ಕುಣಿಗಲ್ ಕಡೆ ಸಾಗುತ್ತಿದ್ದ ಈ ಕಾರು ಅತಿ ವೇಗದಲ್ಲಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಗಳು ಲಿಖಿತಾಳನ್ನು ಕಳೆದುಕೊಂಡ ಆಘಾತದಲ್ಲಿರುವ ತಂದೆ ಶ್ರೀಕಾಂತ್ ಅವರ ಆಳವಾದ ದುಃಖ ಮಾಧ್ಯಮದವರೊಂದಿಗೆ ಹಂಚಿಕೊಂಡಾಗ ಎಲ್ಲರ ಮನ ಕರಗಿದೆ. ಗಾರೆ ಕೆಲಸ ಮಾಡುವ ಶ್ರೀಕಾಂತ್, ತನ್ನ ಕುಟುಂಬದ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. “ನನಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಯಾರ ಸಹಾಯವೂ ಇಲ್ಲದೆ, ಒಬ್ಬರ ಹತ್ತಿರ ಒಂದು ರೂಪಾಯಿ ಪಡೆಯದೆ ಅವರನ್ನು ಬೆಳೆಸಿದ್ದೇನೆ” ಎಂದು ಹೇಳಿದ್ದಾರೆ. ಇದರ ಜೊತೆಗೆ, ಶ್ರೀಕಾಂತ್ ಅವರ ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರ ಆರೈಕೆಯ ಜವಾಬ್ದಾರಿಯೂ ಶ್ರೀಕಾಂತ್ ಮೇಲಿದೆ. “ನಾನು ನನ್ನ ಅಮ್ಮನನ್ನು ನೋಡಿಕೊಳ್ಳಲು ವಾರಕ್ಕೆ ಒಂದೆರಡು ಬಾರಿ ಬರುತ್ತಿದ್ದೆ. ನನ್ನ ಮಕ್ಕಳನ್ನು ನೋಡಲು ಭಾನುವಾರ ಬಂದಿದ್ದೆ” ಎಂದು ಹೇಳಿದ್ದಾರೆ.ಶ್ರೀಕಾಂತ್ ತಮ್ಮ ಮಗಳೊಂದಿಗಿನ ಕೊನೆಯ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ.

ವರದಿ: ಮಂಜುನಾಥ್​​​​​​​​ ನೆಲಮಂಗಲ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 30, 2026 01:40 PM
Loading...
Unable to load recommendations.
Follow Us