9 ಗಂಟೆಗಳ ಶೋಧ, ಸಿಗದ ದಾಖಲೆಗಳು: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 9 ಗಂಟೆಗಳ ಶೋಧನೆ ನಡೆಸಿದರೂ, ಮಹತ್ವದ ದಾಖಲೆಗಳು ಸಿಕ್ಕಿಲ್ಲ. ದಾಳಿಯ ಸುಳಿವು ಅರಿತು ಜ್ಞಾನೇಂದ್ರ ಕುಮಾರ್ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ಡಿವೈಸ್ಗಳೊಂದಿಗೆ ಪೂರ್ವನಿಯೋಜಿತವಾಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರು, ಆಗಸ್ಟ್ 24: ಕೆಪಿಎಸ್ಸಿ ಪರೀಕ್ಷಾ ಅಕ್ರಮದ ತನಿಖೆ ಚುರುಕುಗೊಳಿಸಿರುವ ಇಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ಸತತ 9 ಗಂಟೆಗಳ ಕಾಲ ಶೋಧ ನಡೆಸಿದರೂ ಯಾವುದೇ ಮಹತ್ವದ ದಾಖಲೆಗಳು ಲಭ್ಯವಾಗಿಲ್ಲ. ಇಡಿ ದಾಳಿಯ ಮುನ್ಸೂಚನೆ ಅರಿತಿದ್ದ ಜ್ಞಾನೇಂದ್ರ ಕುಮಾರ್, ಲ್ಯಾಪ್ಟಾಪ್, ಮೊಬೈಲ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಮೊದಲೇ ಪ್ಯಾಕ್ ಮಾಡಿಕೊಂಡು ಪಕ್ಕಾ ಪ್ಲಾನ್ ಮಾಡಿ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮತ್ತೊಂದೆಡೆ, ತಂದೆಗೆ ಹೃದಯಾಘಾತವಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಕಾರಣ ನೀಡಿ 15 ದಿನಗಳ ತುರ್ತು ರಜೆ ಕೋರಿ ಪತ್ರ ಬರೆದಿದ್ದರು. ಆದರೆ ಉತ್ತರ ಪ್ರದೇಶದ ಲಕ್ನೋ ಸಮೀಪದ ಗ್ರಾಮದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳಿಗೆ ತಂದೆಯು ತಾನು ಆರೋಗ್ಯವಾಗಿದ್ದು ಪುತ್ರ ಮನೆಗೆ ಬಂದೇ ಇಲ್ಲ ಎಂದು ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ. ಸದ್ಯ ಮನೆಯಲ್ಲಿ ಯಾವುದೇ ದಾಖಲೆಗಳು ಸಿಗದ ಹಿನ್ನೆಲೆ ಇಡಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಜ್ಞಾನೇಂದ್ರ ಕುಮಾರ್ ನಿವಾಸಕ್ಕೆ ಸಮನ್ಸ್ ನೋಟಿಸ್ ಅಂಟಿಸಿ ವಾಪಸಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
