AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೇಕಲ್‌ನಲ್ಲಿ ಅಪರೂಪದ ಪ್ರೇಮ ವಿವಾಹ: ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ

ಆನೇಕಲ್‌ನಲ್ಲಿ ಅಪರೂಪದ ಪ್ರೇಮ ವಿವಾಹ: ಅಂಬೇಡ್ಕರ್ ಪ್ರತಿಮೆ ಮುಂದೆ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ

TV9 Web
| Edited By: |

Updated on: Sep 02, 2026 | 3:34 PM

Share

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ವಿಶಿಷ್ಟ ಪ್ರೇಮ ವಿವಾಹವೊಂದು ನಡೆದಿದೆ. ನಾಗರತ್ನ (ವಿಧವೆ, ಇಬ್ಬರು ಮಕ್ಕಳ ತಾಯಿ) ಮತ್ತು ಐಟಿ ಉದ್ಯೋಗಿ ಪುರುಷೋತ್ತಮ್, ಕುಟುಂಬದ ವಿರೋಧದ ನಡುವೆಯೂ ಪ್ರಜಾಶಕ್ತಿ ಸಂಘಟನೆ ಹಾಗೂ ವಕೀಲರ ನೆರವಿನಿಂದ ಒಂದಾದರು. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂದೆ ನಡೆದ ಈ ಸರಳ ಮದುವೆಗೆ ಶಾಸಕರ ಆಶೀರ್ವಾದ ದೊರೆತಿದ್ದು, ಸಮುದಾಯದ ಬೆಂಬಲಕ್ಕೆ ಉತ್ತಮ ಉದಾಹರಣೆಯಾಗಿದೆ.

ಆನೇಕಲ್, ಸೆ,2: ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಅಪರೂಪದ ಪ್ರೇಮ ವಿವಾಹವೊಂದು ನಡೆದಿದ್ದು, ಸರ್ವವಿಘ್ನಗಳನ್ನು ಮೀರಿ ಪ್ರೇಮಿಗಳು ಅಂಬೇಡ್ಕರ್ ಪ್ರತಿಮೆಯ ಮುಂದೆ ಪರಸ್ಪರ ಮಾಲೆ ಬದಲಿ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಗರತ್ನ ಎಂಬ ಮಹಿಳೆಗೆ ಈ ಹಿಂದೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ಆದರೆ, ದುರದೃಷ್ಟವಶಾತ್ ರಸ್ತೆ ಅಪಘಾತವೊಂದರಲ್ಲಿ ಆಕೆಯ ಪತಿ ಮೃತಪಟ್ಟಿದ್ದರು. ಪತಿಯ ಅಗಲಿಕೆಯ ನಂತರ ಆಕೆಗೆ ಐಟಿ (IT) ಉದ್ಯೋಗಿಯಾಗಿದ್ದ ಪುರುಷೋತ್ತಮ್ ಎಂಬುವರ ಪರಿಚಯವಾಗಿತ್ತು. ಕಾಲಕ್ರಮೇಣ ಈ ಪರಿಚಯ ಪ್ರೀತಿಗೆ ತಿರುಗಿ, ಇಬ್ಬರೂ ಕೆಲ ದಿನಗಳ ಕಾಲ ‘ಲಿವಿಂಗ್ ಇನ್ ರಿಲೇಷನ್‌ಷಿಪ್’ನಲ್ಲಿದ್ದರು (Living-in relationship). ಬಳಿಕ ಮದುವೆಯಾಗಲು ನಿರ್ಧರಿಸಿದಾಗ, ಪುರುಷೋತ್ತಮ್ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಮನೆಯವರ ಒತ್ತಡಕ್ಕೆ ಮಣಿದು ಪುರುಷೋತ್ತಮ್ ಮದುವೆಗೆ ಹಿಂದೇಟು ಹಾಕಿದ್ದರು. ನ್ಯಾಯಕ್ಕಾಗಿ ನಾಗರತ್ನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ವಿಷಯ ತಿಳಿದ ಪ್ರಜಾಶಕ್ತಿ ಸಂಘಟನೆಯ ಪದಾಧಿಕಾರಿಗಳು ಹಾಗೂ ವಕೀಲರು ರಂಗಕ್ಕಿಳಿದು, ಯುವಕ ಪುರುಷೋತ್ತಮ್ ಅವರಿಗೆ ತಿಳಿಹೇಳಿ ಮನವೊಲಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, ಶುಕ್ರವಾರ ಆನೇಕಲ್ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರಜಾಶಕ್ತಿ ಸಂಘಟನೆ, ವಕೀಲರು ಹಾಗೂ ಆಪ್ತರ ಸಮ್ಮುಖದಲ್ಲಿ ಪುರುಷೋತ್ತಮ್ ಹಾಗೂ ನಾಗರತ್ನ ಸರಳವಾಗಿ ವಿವಾಹವಾದರು. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಆನೇಕಲ್ ಶಾಸಕ ಬಿ. ಶಿವಣ್ಣ ಅವರು ನವವಧುವರರಿಗೆ ಶುಭ ಹಾರೈಸಿ, ಆಶೀರ್ವದಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us