ಆನೇಕಲ್, ಮಾರ್ಚ್ 11: ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಗೂ (Bannerghatta National Park) ನೀರಿನ ಕೊರತೆ ಕಾಡುತ್ತಿದೆ. ಬನ್ನೇರುಘಟ್ಟ (Bannerghatta) ಜೈವಿಕ ಉದ್ಯಾನವನ 731 ಹೆಕ್ಟರ್ ಪ್ರದೇಶದಲ್ಲಿದ್ದು, ಉದ್ಯಾನವನದಲ್ಲಿ 100 ವಿವಿಧ ಜಾತಿಯ 2000ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಸಂಕುಲ ಇವೆ. ಬರಗಾಲದಿಂದ ಉದ್ಯಾನವನದ 8 ಬೋರ್ವೆಲ್ಗಳಲ್ಲಿ 6 ಬೋರ್ವೆಲ್ಗಳು ಬತ್ತಿವೆ.
ಇದರಿಂದ ಸಾಕಾನೆಗಳು, ಜಿಂಕೆ, ಹುಲಿ, ಸಿಂಹ, ನೀರಾನೆ ಸೇರಿದಂತೆ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಒದ್ದಾಡುತ್ತಿವೆ. ಮೊಸಳೆ, ಹಿಪ್ಪೋ ಮತ್ತು ಕೊಕ್ಕರೆ ಹೊಂಡಗಳು ಖಾಲಿಯಾಗುತ್ತಿವೆ. ಅಲ್ಲದೆ ಉದ್ಯಾನವನದ ಸಿಬ್ಬಂದಿ ಹಾಗೂ ಪ್ರವಾಸಿಗರ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಝೂ, ಚಿಟ್ಟೆಪಾರ್ಕ್, ಸಫಾರಿ, ರೆಸ್ಕ್ಯೂ ಸೆಂಟರ್ ಸೇರಿದಂತೆ ಇನ್ನೂ ಅನೇಕ ಕಾರ್ಯಕಗಳಿಗೆ ನಿತ್ಯ ಒಂದು ಲಕ್ಷ ಲೀಟರ್ ನೀರು ಬೇಕು. ಸದ್ಯ ಇಷ್ಟು ಪ್ರಮಾಣದಲ್ಲಿ ನೀರು ಲಭ್ಯವಿಲ್ಲ. ಹೀಗಾಗಿ ನಿತ್ಯ ಐದು ಟ್ಯಾಂಕರ್ ಮೂಲಕ ಮತ್ತು ರೆಸ್ಕ್ಯೂ ಸೆಂಟರ್ನಲ್ಲಿರುವ 2 ಬೋರ್ ವೆಲ್ಗಳಿಂದ 60 ರಿಂದ 70 ಸಾವಿರ ಲೀಟರ್ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ.
ಉದ್ಯಾನವನದ ಸಾಕಾನೆಗಳ ಬಿಡಾರದ ಸೀಗೆಕಟ್ಟೆ ಕೆರೆಯಲ್ಲೂ ನೀರಿಲ್ಲ. ನೀರಿಲ್ಲದೆ ಸಫಾರಿ ಸೀಗೆಕಟ್ಟೆ ಕೆರೆ ಒಣಗುತ್ತಿದೆ. ಕೆರೆ ಇದೇ ಮೊದಲ ಬಾರಿಗೆ ನೀರಿಲ್ಲದೆ ಬತ್ತುವ ಹಂತಕ್ಕೆ ತಲುಪಿದೆ. ಹೀಗಾಗಿ ಉದ್ಯಾನವನ ಸಿಬ್ಬಂದಿ ಟ್ಯಾಂಕರ್ ಮೂಲಕ ಕರೆ ತುಂಬಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನೀರಿಗೆ ಮತ್ತಷ್ಟು ಪರದಾಡುವಂತಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Mon, 11 March 24