ಅನ್ನಭಾಗ್ಯ ಅಕ್ಕಿ ವಿತರಣೆಯಲ್ಲಿ ಗೊಂದಲ, ಸಂಕಷ್ಟದಲ್ಲಿ ಸಿಲುಕಿದ್ಯಾ ಗ್ಯಾರಂಟಿ ಯೋಜನೆ?
ಅನ್ನಭಾಗ್ಯ ಯೋಜನೆ. ಸಿಎಂ ಸಿದ್ದರಾಮಯ್ಯಗೆ ಅನ್ನರಾಮಯ್ಯ ಅನ್ನೋ ಕೀರ್ತಿ ತಂದು ಕೊಟ್ಟ ಮಹತ್ವದ ಯೋಜನೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಅನ್ನೋ ಧೇಯೋದ್ದೇಶದಿಂದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದ್ರೆ ಇದೇ ಯೋಜನೆ ಹಲವು ಗೊಂದಲಗಳಿಗೆ ಕಾರಣವಾಗಿದೆ. ಅಷ್ಟಕ್ಕೂ ಆಗಿರುವ ಅಸಲಿ ಗೊಂದಲ ಏನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಮೇ 24): ಅನ್ನಭಾಗ್ಯ ಯೋಜನೆ (Anna Bhagya Scheme). ಸಿಎಂ ಸಿದ್ದರಾಮಯ್ಯಗೆ ಅನ್ನರಾಮಯ್ಯ ಅನ್ನೋ ಕೀರ್ತಿ ತಂದು ಕೊಟ್ಟ ಮಹತ್ವದ ಯೋಜನೆ. ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಅನ್ನೋ ಧೇಯೋದ್ದೇಶದಿಂದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಆದ್ರೆ ಇದೇ ಯೋಜನೆ ಹಲವು ಗೊಂದಲಗಳಿಗೆ ಕಾರಣವಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ, ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುತ್ತೆ. ಅಂದ್ರೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ, ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಅಕ್ಕಿಯನ್ನ ವಿತರಣೆ ಮಾಡಲಾಗುತ್ತೆ. ಪ್ರತಿ ತಿಂಗಳೂ ಹೀಗೆ ನಡೆದುಕೊಂಡು ಬರ್ತಿದೆ. ಆದ್ರೆ, ಈ ಬಾರಿ ಕೇಂದ್ರ ಸರ್ಕಾರ ಮೇ ಹಾಗೂ ಜೂನ್ ಸೇರಿಸಿ 2 ತಿಂಗಳ ಅಕ್ಕಿಯನ್ನ ಒಟ್ಟಿಗೆ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಕೇಂದ್ರದಿಂದ ಬಂದಿರೋ ದವಸ ಧಾನ್ಯಗಳನ್ನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ 2 ತಿಂಗಳ ಅಕ್ಕಿ ಒಟ್ಟಿಗೆ ಕಳಿಸಿರೋದ್ರಿಂದ, ರಾಜ್ಯ ಸರ್ಕಾರ ಮೇ ತಿಂಗಳ ತನ್ನ ಪಾಲಿನ ಅಕ್ಕಿ ಕೊಡದೆ ಕೈ ಎತ್ತಿದೆ. ಹೀಗಾಗಿ ಸದ್ಯ ಫಲಾನುಭವಿಗಳಿಗೆ ಕೇಂದ್ರ ಕೊಟ್ಟಿರೋ 2 ತಿಂಗಳ ರೇಷನ್ ಮಾತ್ರ ವಿತರಣೆ ಮಾಡ್ತಿದ್ದು, ಮುಂದಿನ ತಿಂಗಳು ಅಕ್ಕಿ ಕೊಡ್ತಾರಾ ಇಲ್ವಾ ಅನ್ನೋ ಗೊಂದಲ ಮನೆ ಮಾಡಿದೆ.
ವಿಷ್ಯ ಏನಪ್ಪ ಅಂದ್ರೆ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಚ್ಚಿನ ಪ್ರಮಾಣದಲ್ಲಿ ರಾಗಿ, ಅಕ್ಕಿ ಖರೀದಿಸಿ ಸಂಗ್ರಹಿಸಿದೆ. ಹೀಗಾಗಿ ಒಟ್ಟಿಗೆ 2 ತಿಂಗಳ ಅಕ್ಕಿ, ರಾಗಿ ಕಳಿಸಿದೆ. ಮುಂದಿನ ತಿಂಗಳು ಕೇಂದ್ರ ತನ್ನ ಪಾಲು ಕಳಿಸಲ್ಲ. ಇದನ್ನರಿತ ರಾಜ್ಯ ಸರ್ಕಾರ, ಮೇ ತಿಂಗಳ ಬಾಕಿ ಅಕ್ಕಿ, ಜೂನ್ ಅಂದ್ರೆ ಮುಂದಿನ ತಿಂಗಳ ಪಡಿತರದ ಜೊತೆ ಸೇರಿಸಿ 2 ತಿಂಗಳ ರೇಷನ್ ಕೊಡಲು ನಿರ್ಧರಿಸಿದೆ. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಒಟ್ನಲ್ಲಿ ಅನ್ನಭಾಗ್ಯ ಅಕ್ಕಿ ಬಗ್ಗೆ ಯಾವುದೇ ಆತಂಕಬೇಡ. ಮುಂದಿನ ತಿಂಗಳು 2 ತಿಂಗಳ ಅಕ್ಕಿ ಸಿಗುತ್ತೆ ಅಂತಾ ಸರ್ಕಾರ ಭರವಸೆ ನೀಡಿದೆ.
