ವೈಟ್ಫೀಲ್ಡ್ನಲ್ಲಿ ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ ಆರೋಪ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಕಸದ ಕಪ್ ರಸ್ತೆಬದಿಗೆ ಎಸೆಯಬೇಡಿ ಎಂದು ಹೇಳಿದ್ದಕ್ಕೆ ಜಿಬಿಎ ಪೌರಕಾರ್ಮಿಕನ ಮೇಲೆ ಯುವತಿ ಒಬ್ಬರು ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಪೌರಕಾರ್ಮಿಕ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿರುವ ವೈಟ್ಫೀಲ್ಡ್ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 11: ಕಸದ ಕಪ್ ಅನ್ನು ರಸ್ತೆಬದಿಗೆ ಎಸೆಯಬೇಡಿ, ಕಸದ ಬುಟ್ಟಿಗೆ ಹಾಕಿ ಎಂದು ಹೇಳಿದ್ದಕ್ಕೆ ಜಿಬಿಎ ಪೌರಕಾರ್ಮಿಕನ ಮೇಲೆ ಯುವತಿಯೊಬ್ಬರು ಕಲ್ಲಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಈ ಘಟನೆ ನಡೆದಿದೆ. ಪಟ್ಟಂದೂರು ಅಗ್ರಹಾರದ ಕುವೆಂಪು ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಘಟನೆ ನಡೆದಿದೆ. ಗೆಳೆಯನ ಜೊತೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ಯುವತಿ ಹಾಗೂ ಯುವಕ, ಕಪ್ ಅನ್ನು ರಸ್ತೆಬದಿಗೆ ಎಸೆದಿದ್ದಾರೆ. ಇದನ್ನು ಗಮನಿಸಿದ ಪೌರಕಾರ್ಮಿಕರು ಕಪ್ ಅನ್ನು ಕಸದ ಬುಟ್ಟಿಗೆ ಹಾಕುವಂತೆ ಸೂಚಿಸಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಯುವತಿ ಪೌರಕಾರ್ಮಿಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈ ಸನ್ನೆ ಮಾಡಿದ್ದಲ್ಲದೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ಪೌರಕಾರ್ಮಿಕ ನೀಡಿದ ದೂರಿನ ಮೇರೆಗೆ ಯುವಕ ಹಾಗೂ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ ಹಲ್ಲೆ ನಡೆಸಿದ ಯುವತಿಯನ್ನು ಕೇರಳ ಮೂಲದ ವೈದೇಹಿ ಎಂದು ಗುರುತಿಸಲಾಗಿದೆ. ಕೇವಲ ಕಸವನ್ನು ಸರಿಯಾಗಿ ವಿಲೇವಾರಿ ಮಾಡುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ