ಕಲಬುರಗಿ: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪನವರ (KS Eshwarappa) ರಾಜಕೀಯ ಜೀವನ ಮುಗಿದುಹೋಗಿದೆ, ಬಿಜೆಪಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲದಂಥ ಸ್ಥಿತಿಯಲ್ಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಗೇಲಿ ಮಾಡಿದರು. ಕಲಬುರಗಿಯಲ್ಲಿ ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರೊಂದಿಗೆ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಅವರು, ದೇಶದ್ರೋಹದ ಮಾತುಗಳನ್ನಾಡುವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಈಶ್ವರಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸುತ್ತಾ ಅಂಥ ಕಾನೂನು ಏನಾದರೂ ತಂದರೆ ಅರ್ಧ ಬಿಜೆಪಿ ಖಾಲಿಯಾಗುತ್ತದೆ ಮತ್ತು ಆರ್ ಎಸ್ ಎಸ್ ಬಾಗಿಲು ಹಾಕಬೇಕಾಗುತ್ತದೆ ಎಂದರು. ಪಕ್ಷವೇ ಈಶ್ವರಪ್ಪಗೆ ಬಲವಂತದ ನಿವೃತ್ತಿ ನೀಡಿ ಮನೆಯಲ್ಲಿರಲು ಹೇಳಿದಾಗ್ಯೂ ಅವರು ತಾನಿನ್ನೂ ಅಸ್ತಿತ್ವದಲ್ಲಿದ್ದೇನೆ ಅಂತ ತೋರಿಸಲು ಇಂಥ ಹೇಳಿಕೆಗಳನ್ನು ನೀಡುತ್ತಾರೆ ಎಂದು ಖರ್ಗೆ ಹೇಳಿದರು.
ಪಕ್ಷದಲ್ಲಿ ಅವರು ಹೇಗೆ ಕೆಳಗೆ ಬೀಳುತ್ತಾ ಹೋದರು ಅಂತ ಎಲ್ಲರಿಗೂ ಗೊತ್ತಿದೆ, ಡಿಸಿಎಂ ಆಗಿದ್ದವರು ಶಾಸಕನಾದರು ಮತ್ತು ಈ ಬಾರಿ ಟಿಕೆಟ್ ನಿರಾಕರಿಸಲಾಯಿತು. ಅವರ ಮಗನಿಗೂ ಬಿಜೆಪಿ ಟಿಕೆಟ್ ನೀಡಲಿಲ್ಲ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಅಂತೇನೋ ಮಾಡಿದ್ದರು, ಈಗ ಅದೆಲ್ಲಿದೆ ಅಂತ ಯಾರಿಗೂ ಗೊತ್ತಿಲ್ಲ ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Fri, 9 February 24