ಶುರುವಾಯ್ತಾ ಮೈತ್ರಿ ಕುಸ್ತಿ? ಹೆಚ್ಡಿ ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಸುಮಲತಾ ಅಂಬರೀಶ್ಗೆ ರಾಜ್ಯಸಭೆ ಟಿಕೆಟ್ ನಿರಾಕರಣೆ ಕುರಿತು ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಇದು ಪಕ್ಷದ ಆಂತರಿಕ ವಿಚಾರ ಎಂದ ಅಶೋಕ್, ಯಾರಿಗೂ ಭರವಸೆ ನೀಡಿರಲಿಲ್ಲ, ರಾಜ್ಯಸಭಾ ಟಿಕೆಟ್ ಕಾರ್ಯಕರ್ತರಿಗೆ ನೀಡಲಾಗಿದೆ ಎಂದರು. ರೇವಣ್ಣ ಅಥವಾ ಬೇರೆಯವರಿಗೆ ಈ ಕುರಿತು ಮಾತನಾಡುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ಜೂನ್ 19: ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ನೀಡುವ ವಿಚಾರದಲ್ಲಿ ಭರವಸೆ ನೀಡಿ ನಂತರ ನಿರಾಕರಿಸಿದೆ ಎಂಬರ್ಥದಲ್ಲಿ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ ನೀಡಿರುವ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ರೇವಣ್ಣ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಇದು ತಮ್ಮ ಪಕ್ಷದ ಆಂತರಿಕ ವಿಚಾರ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಜೆಡಿಎಸ್ ಪಕ್ಷದ ನಾಯಕರಾದ ಹೆಚ್.ಡಿ. ರೇವಣ್ಣಗಾಗಲಿ ಅಥವಾ ಇತರ ಯಾವುದೇ ಹೊರಗಿನವರಿಗಾಗಲಿ ಮಾತನಾಡುವ ಅಧಿಕಾರ ಇಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.
ಬಿಜೆಪಿ ಯಾರಿಗೂ ರಾಜ್ಯಸಭಾ ಟಿಕೆಟ್ ಭರವಸೆ ನೀಡಿರಲಿಲ್ಲ ಎಂದು ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ಪಕ್ಷದ ನಿಯಮಾನುಸಾರ, ನಾವು ನಮ್ಮ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ರಾಜ್ಯಸಭಾ ಟಿಕೆಟ್ ನೀಡಿದ್ದೇವೆ. ಈ ನಿರ್ಧಾರ ಸಂಪೂರ್ಣವಾಗಿ ನಮ್ಮ ಪಕ್ಷದ ಆಂತರಿಕ ಪ್ರಕ್ರಿಯೆಯ ಭಾಗವಾಗಿದೆ. ರೇವಣ್ಣ ಅವರು ಈ ಕುರಿತು ಅನಗತ್ಯವಾಗಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಆರ್. ಅಶೋಕ್ ಹೇಳಿದ್ದಾರೆ. ರಾಜ್ಯಸಭಾ ಸ್ಥಾನಕ್ಕೆ ಮೊದಲು ದೇವೇಗೌಡರು ಮತ್ತು ಸದಾನಂದಗೌಡರ ಹೆಸರುಗಳು ಕೇಳಿಬಂದಿದ್ದವು. ನಂತರ ಮಂಡ್ಯದ ಮೇಡಂ ಹೆಸರು ಕೇಳಿಬಂದಿತ್ತು. ನಂತರ ಅವರಿಗೂ ಟೋಪಿ ಹಾಕಿದರು ಎಂದು ರೇವಣ್ಣ ಹೇಳಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
