ಬಿಜೆಪಿ ಸಭೆಯಲ್ಲಿ ಅಡ್ಡಮತದಾನಕ್ಕೆ ಹಿರಿಯರ ಆಕ್ಷೇಪ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಮುಖ್ಯಾಂಶಗಳು
- ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಡ್ಡಮತದಾನ ಬಗ್ಗೆ ಚರ್ಚೆ
- ಪರಿಷತ್ ಚುನಾವಣೆಗೆ ಸೂಕ್ತ ತಯಾರಿ ಮಾಡಿಕೊಳ್ಳಲಿಲ್ಲ
- ಸರಿಯಾಗಿ ತರಬೇತಿ ಕೊಡಲಿಲ್ಲ ಎಂದು ಹಿರಿಯರ ಆಕ್ಷೇಪ
MLC ಚುನಾವಣೆಯ ಅಡ್ಡಮತದಾನದ ಕುರಿತು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸೂಕ್ತ ತರಬೇತಿ ನೀಡದಿರುವುದು ಅಡ್ಡಮತದಾನಕ್ಕೆ ಕಾರಣವೆಂದು ಹಿರಿಯ ನಾಯಕರು ಆಕ್ಷೇಪಿಸಿದರು. ಶಾಸಕರ ಮೇಲಿನ ವಿಶ್ವಾಸವೇ ತಪ್ಪಾಯ್ತು ಎಂದು ಆರ್. ಅಶೋಕ್ ಹೇಳಿದ್ದಾರೆ. ಇದೇ ವೇಳೆ ಸುಧಾಕರ್-ವಿಶ್ವನಾಥ್ ನಡುವಿನ ಕಿತ್ತಾಟಕ್ಕೆ ಹೈಕಮಾಂಡ್ ಮಧ್ಯಪ್ರವೇಶಿಸಿ ಸಂಧಾನ ನಡೆಸಿದೆ.
ಬೆಂಗಳೂರು, ಜುಲೈ 05: ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ಮಾಡಲಾಯಿತು. ಪಕ್ಷವು ಪ್ರಸ್ತುತ ಎದುರಿಸುತ್ತಿರುವ ಪ್ರಮುಖ ಸವಾಲುಗಳ ಕುರಿತು ಚರ್ಚೆ ಮಾಡಲಾಗಿದೆ. ಅದರಲ್ಲೂ ಪ್ರಮುಖವಾಗಿ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಬಗ್ಗೆ ಚರ್ಚೆ ಮಾಡಲಾಗಿದೆ. ಹಿರಿಯ ನಾಯಕರು ಈ ವಿಷಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳದಿರುವುದು ಮತ್ತು ಶಾಸಕರಿಗೆ ಮತಚಲಾವಣೆಯ ಕುರಿತು ಕನಿಷ್ಠ ತರಬೇತಿಯನ್ನು ನೀಡದಿರುವುದೇ ಅಡ್ಡಮತದಾನಕ್ಕೆ ಮುಖ್ಯ ಕಾರಣ ಎಂದು ಹಿರಿಯರು ಅಭಿಪ್ರಾಯಪಟ್ಟಿದ್ದಾರೆ. ಸೂಕ್ತ ತರಬೇತಿಯನ್ನು ನೀಡಿದ್ದರೆ ಇಂತಹ ಸಮಸ್ಯೆಗಳು ಉದ್ಭವಿಸುತ್ತಿರಲಿಲ್ಲ ಎಂದಿದ್ದಾರೆ. ಈ ವೇಳೆ ಮಾತನಾಡಿರುವ ಆರ್. ಅಶೋಕ್, ಶಾಸಕರ ಮೇಲೆ ಅತಿಯಾದ ವಿಶ್ವಾಸ ಇಟ್ಟಿದ್ದೇ ತಪ್ಪಾಯಿತು. ಶಾಸಕರು ಅಡ್ಡ ಮತ ಹಾಕುತ್ತಾರೆ ಎಂಬ ಸಣ್ಣ ಸುಳಿವು ಕೂಡ ನನಗೆ ಇರಲಿಲ್ಲ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
