ಬೆಂಗಳೂರು: ಸೈರನ್ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರಿನ ಶೇಷಾದ್ರಿಪುರಂನ ಕೆನರಾ ಬ್ಯಾಂಕ್ನಲ್ಲಿ ಕಳ್ಳತನ ಯತ್ನ ವಿಫಲವಾಗಿದೆ. ಕಿಟಕಿ ಗ್ರಿಲ್ ಮುರಿದು ಒಳನುಗ್ಗಿದ ಆರೋಪಿ ಸಿಸಿಟಿವಿ ವೈರ್ ಕತ್ತರಿಸಿದಾಗ ಅಲಾರಾಂ ಮೊಳಗಿದೆ. ಇದು ಕಳ್ಳನನ್ನು ಓಡಿಸಿದೆ. ಇದೇ ರೀತಿ ಹನುಸೂರು ಗೇಟ್ ಬಳಿ ಎಚ್ಡಿಎಫ್ಸಿ ಎಟಿಎಂ ದರೋಡೆ ಯತ್ನವೂ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 24: ಬೆಂಗಳೂರಿನ ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ಕಳ್ಳತನ ಯತ್ನ ವಿಫಲವಾಗಿದೆ. ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಕಳ್ಳರು ಬ್ಯಾಂಕ್ನ ಎಡಭಾಗದಲ್ಲಿದ್ದ ಕಿಟಕಿ ಗ್ರಿಲ್ ಮುರಿದು ಒಳನುಗ್ಗಿದ್ದಾರೆ. ಬ್ಯಾಂಕ್ನೊಳಗಡೆ ಪ್ರವೇಶಿಸಿದ ಆರೋಪಿ ಸಿಸಿಟಿವಿ ವೈರ್ಗಳನ್ನು ಕತ್ತರಿಸಲು ಪ್ರಯತ್ನಿಸಿದಾಗ ಅಲಾರಾಂ ಮೊಳಗಿದೆ. ಅಲಾರಾಂ ಶಬ್ದ ಕೇಳಿದ ತಕ್ಷಣ ಕಳ್ಳ ಗಾಬರಿಯಾಗಿ ಬಂದ ದಾರಿಯಲ್ಲೇ ಪರಾರಿಯಾಗಿದ್ದಾನೆ. ಬ್ಯಾಂಕ್ನ ಭದ್ರತಾ ಸಿಬ್ಬಂದಿ ಅಲಾರಾಂ ಮೊಳಗಿದಾಗ ಪರಿಶೀಲಿಸಿದ್ದರೂ, ಕಿಟಕಿಯ ಬಳಿ ಹೋಗಿ ನೋಡದೆ ನಿರ್ಲಕ್ಷಿಸಿದ್ದಾರೆ. ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಬಂದು ನೋಡಿದಾಗ ಕಳ್ಳತನ ಯತ್ನದ ಬಗ್ಗೆ ತಿಳಿದುಬಂದಿದೆ.
ಮಾಹಿತಿ ಪಡೆದ ಶೇಷಾದ್ರಿಪುರಂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್ನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

