ಪ್ರವಾಸಿಗರ ತಪ್ಪಿಗೆ ಪರಿತಪ್ಪಿಸಿದ ವಾನರ: ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್
ಬಂಡೀಪುರದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸಿಲುಕಿ ಕೋತಿಯೊಂದು ಪರದಾಡಿದ ಘಟನೆ ಮಾನವನ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಪ್ರವಾಸಿಗರು ಬಿಸಾಡುವ ಪ್ಲಾಸ್ಟಿಕ್, ವನ್ಯಜೀವಿಗಳ ಜೀವಕ್ಕೆ ಕಂಟಕವಾಗಿದ್ದು, ಚಾಮರಾಜನಗರ ಪರಿಸರದಲ್ಲಿ ಆತಂಕ ಸೃಷ್ಟಿಸಿದೆ. ಈ ದುರ್ಘಟನೆ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಬಂಡೀಪುರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಚಾಮರಾಜನಗರ, ಮೇ 15: ಪ್ರವಾಸಿಗರ ಬೇಜವಾಬ್ದಾರಿಗೆ ಮೂಕಪ್ರಾಣಿಗಳು ಸಂಕಷ್ಟಕ್ಕೆ ಸಿಲುಕುವ ಘಟನೆಗಳು ಬಂಡೀಪುರದಲ್ಲಿ ಮರುಕಳಿಸುತ್ತಲೇ ಇವೆ. ತಿಂದು ಬಿಸಾಡಿದ ಪ್ಲಾಸ್ಟಿಕ್ ಚೀಲ ಕೋತಿಯ ತಲೆಗೆ ಸಿಲುಕಿ ಅರ್ಧ ಗಂಟೆಗೂ ಹೆಚ್ಚು ಕಾಲ ಪರದಾಡಿದ ಹೃದಯ ವಿದ್ರಾವಕ ಘಟನೆ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಊಟಿ-ಗುಂಡ್ಲುಪೇಟೆ ಹೆದ್ದಾರಿಯಲ್ಲಿ, ಬಂಡೀಪುರ ಹಳೆಯ ಡಿಸಿಎಫ್ ಕಚೇರಿಯ ಕೂಗಳತೆ ದೂರದಲ್ಲೇ ಈ ಘಟನೆ ನಡೆದಿದ್ದು, ಪ್ಲಾಸ್ಟಿಕ್ ಚೀಲದಲ್ಲಿ ಮುಖ ಸಿಲುಕಿಕೊಂಡು ನಡೆದಾಡುತ್ತಿದ್ದ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವಾರ ನಡೆದ ಈ ಘಟನೆಯನ್ನು ನೋಡಿ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿರುವುದು ಕಾಡುಪ್ರಾಣಿಗಳಿಗೆ ಮಾರಕವಾಗುತ್ತಿದ್ದು, ಬಂಡೀಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

