ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ CWRC ನೀಡಿರುವ ಆದೇಶಕ್ಕೆ ಮಂಡ್ಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನೀರಿಲ್ಲದಿದ್ದರೂ ಆದೇಶ ಹೊರಡಿಸುವುದು ಗ್ರೌಂಡ್ ರಿಯಾಲಿಟಿ ಅರ್ಥ ಮಾಡಿಕೊಳ್ಳದ ಕ್ರಮ. ಕರ್ನಾಟಕದಲ್ಲಿ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿಲ್ಲ, ಬರ ಪರಿಸ್ಥಿತಿಯಿದೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಾರದು. ಸರ್ಕಾರ ಕಾನೂನು ಹೋರಾಟ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮಂಡ್ಯ, ಜುಲೈ 29: ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ನೀಡಿರುವ ಆದೇಶಕ್ಕೆ ಮಂಡ್ಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನೀರೇ ಇಲ್ಲದಿದ್ದರೂ ನೀರು ಬಿಡಲು ಆದೇಶ ನೀಡುವುದು ಗ್ರೌಂಡ್ ರಿಯಾಲಿಟಿಯನ್ನು ಅರ್ಥಮಾಡಿಕೊಳ್ಳದ ಕ್ರಮ ಎಂದು ಅವರು ಹೇಳಿದ್ದಾರೆ. ಇಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರಿಲ್ಲ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಭಾಗದ ಜನರ ಜೀವನ ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಕುಡಿಯುವ ನೀರಿಗೂ ತತ್ವಾರ ಇರುವಾಗ, ಕೆರೆಕಟ್ಟೆಗಳಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಲು ಆದೇಶ ನೀಡುತ್ತಿರುವುದು ಬೇಜವಾಬ್ದಾರಿತನ ಎಂದು ಪುಟ್ಟಣ್ಣಯ್ಯ ಆಪಾದಿಸಿದ್ದಾರೆ.
ಕಳೆದ ಮೂರ್ನಾಲ್ಕು ವಾರಗಳ ಹಿಂದೆ ಬೆಳೆಗಳಿಗೆ ನೀರು ಬಿಡಿಸಲು ರೈತರು ದಿನಗಟ್ಟಲೆ ಕೆಆರ್ಎಸ್ನಲ್ಲಿ ಹೋರಾಟ ನಡೆಸಿದ್ದರು. ಪ್ರತಿ ವರ್ಷವೂ ಇದೇ ಸಮಸ್ಯೆ ಎದುರಾಗುತ್ತಿದೆ. 2000ನೇ ಇಸವಿಯಿಂದ 17-18 ವರ್ಷ ಬರಗಾಲ ಎಂದು ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಕಾನೂನಾತ್ಮಕ ಹೋರಾಟ ಕೈಗೆತ್ತಿಕೊಳ್ಳಬೇಕು ಮತ್ತು ನೀರು ಬಿಡುಗಡೆ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
