ಬೀದರ್: ಕೆಲವೊಂದು ಪುಣ್ಯಕ್ಷೇತ್ರಗಳು ಅಲ್ಲಿ ನಡೆಯುವ ಪವಾಡ ಪುಣ್ಯ ಕಾರ್ಯಗಳಿಂದಲೇ ಪ್ರಸಿದ್ಧಿ ಪಡೆಯುತ್ತವೆ. ಅಂತಾ ಕ್ಷೇತ್ರಗಳಲ್ಲಿ ಒಂದು ಬೀದರ್ನ ಗುಪ್ತ ಲಿಂಗೇಶ್ವರನ ಸನ್ನಿಧಾನ. ಇಲ್ಲಿರುವ ಔಷಧೀಯ ಗುಣಗಳಿಂದ ಪ್ರಖ್ಯಾತಿ ಪಡೆದಿದೆ. ಶತಶತಮಾನಗಳಿಂದ ಇಲ್ಲಿರುವ ನೀರಿನ ಸೆಲೆ ಬತ್ತಿಲ್ಲ. ಇಲ್ಲಿ ಹರಿಯುತ್ತಿರುವ ಗಂಗೆಯ ವೇಗವೂ ಕಡಿಮೆಯಾಗಿಲ್ಲ. ಇಲ್ಲಿ ಶಿವನ ವಾಹನ ನಂದಿ ಬಾಯಿಂದ ಬರುತ್ತಿರುವ ನೀರಿಗೆ ಔಷಧೀಯ ಗುಣವಿದೆ ಎಂಬ ನಂಬಿಕೆ ಭಕ್ತರಿಗಿದೆ. ನಂದಿ ಬಾಯಿಯಿಂದ ಬರುವ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿಯಾಗುತ್ತವೆ ಎಂದು ಜನರು ನಂಬಿದ್ದಾರೆ. ಔಷಧೀಯ ಗುಣವಿರುವ ನೀರು ವರ್ಷದ ಯಾವುದೇ ಕಾಲದಲ್ಲೂ ಕಡಿಮೆಯಾಗಿಲ್ಲ. ಗುಹೆಯಲ್ಲಿರುವ ಶಿವಲಿಂಗದ ಮೂಲಕವೂ ಇಲ್ಲಿ ನೀರು ಹರಿದು ಬರುವುದು ಗುಪ್ತ ಲಿಂಗೇಶ್ವರ ದೇವಾಲಯದ ಮತ್ತೊಂದು ವಿಶೇಷ. ಆದರೆ ಈ ಪುಣ್ಯಕ್ಷೇತ್ರ ಅಷ್ಟಾಗಿ ಪ್ರಸಿದ್ಧಿ ಪಡೆದಿಲ್ಲ. ಸರ್ಕಾರ ಕೂಡ ದೇವಾಲಯದ ಐತಿಹ್ಯವನ್ನು ತಿಳಿದು ಅದನ್ನು ಜೀರ್ಣೋದ್ಧಾರ ಮಾಡುವ ಕಾರ್ಯಕ್ಕೆ ಮುಂದಾಗಿಲ್ಲ ಅನ್ನೋದು ಸ್ಥಳೀಯರ ಬೇಸರ.