ಅಮಿತಾಬ್ ಬಚ್ಚನ್ ಕಾರಣಕ್ಕೆ ದಿಲ್ಜೀತ್​​ಗೆ ಬಂತು ಖಲಿಸ್ಥಾನಿಗಳ ಬೆದರಿಕೆ

Diljit Dosanjh: ಪಂಜಾಬಿನಲ್ಲಿ ಹಲವಾರು ಮಂದಿ ಕಲಾವಿದರಿದ್ದಾರೆ. ಆದರೆ ದಶಕಗಳಿಂದಲೂ ಅವರು ಖಲಿಸ್ಥಾನಿ ಉಗ್ರರು, ಕೆನಡಾನಲ್ಲಿ ನೆಲೆಸಿರುವ ಪಂಜಾಬಿ ಮಾಫಿಯಾದಿಂದ ಹಿಂಸೆ ಅನುಭವಿಸುತ್ತಲೇ ಬರುತ್ತಿದ್ದಾರೆ. ಪಂಜಾಬಿನ ಖ್ಯಾತ ಕಲಾವಿದ ದಿಲ್ಜೀತ್ ದೊಸ್ಸಾಂಜ್​ಗೆ ಈಗ ಖಲಿಸ್ಥಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ಅದೂ ಅಮಿತಾಬ್ ಬಚ್ಚನ್ ಅವರ ಕಾರಣಕ್ಕೆ.

ಅಮಿತಾಬ್ ಬಚ್ಚನ್ ಕಾರಣಕ್ಕೆ ದಿಲ್ಜೀತ್​​ಗೆ ಬಂತು ಖಲಿಸ್ಥಾನಿಗಳ ಬೆದರಿಕೆ
Diljit Dosanjh

Updated on: Oct 29, 2025 | 1:28 PM

ಪಂಜಾಬ್​​ನಲ್ಲಿ (Punjab) ಹಲವಾರು ಮಂದಿ ಅದ್ಭುತವಾದ ಕಲಾವಿದರಿದ್ದಾರೆ. ಪಂಜಾಬಿ ಹಾಡುಗಳದ್ದು ಕೋಟ್ಯಂತರ ಮೌಲ್ಯದ ಉದ್ಯಮವೇ ಆಗಿದೆ. ಹಲವಾರು ಮಂದಿ ಪಂಜಾಬಿ ಕಲಾವಿದರು ಆಲ್ಬಂಗಳನ್ನು, ಲೈವ್ ಕಾನ್ಸರ್ಟ್​​ಗಳನ್ನು ನಡೆಸುತ್ತಾ ಕೋಟ್ಯಂತರ ಹಣ ಮತ್ತು ಜನಪ್ರಿಯತೆಯನ್ನೂ ಗಳಿಸಿದ್ದಾರೆ. ಪಂಜಾಬಿಗರದ್ದು ಹಾಡಿನ ಇತಿಹಾಸವೇ ಇದೆ. ಆದರೆ ಪಂಜಾಬಿ ಕಲಾವಿದರಿಗೆ ಮಾಫಿಯಾದ, ಖಲಿಸ್ಥಾನಿಗಳ ಸಮಸ್ಯೆ ದಶಕಗಳಿಂದಲೂ ಕಾಡುತ್ತಲೇ ಇದೆ. ಈಗಾಗಲೇ ಹಲವು ಪಂಜಾಬಿ ಕಲಾವಿದರಿಗೆ ಈ ಖಲಿಸ್ಥಾನಿಗಳಿಂದ, ಪಂಜಾಬಿ ಮಾಫಿಯಾದವರಿಂದ ಬೆದರಿಕೆಗಳು ಬಂದಿವೆ. ಕೆಲವರ ಕೊಲೆಯೂ ಆಗಿದೆ. ಇದೀಗ ದಿಲ್ಜೀತ್ ದೊಸ್ಸಾಂಜ್ ಅವರಿಗೆ ಬೆದರಿಕೆ ಬಂದಿದೆ. ಅದೂ ಅಮಿತಾಬ್ ಬಚ್ಚನ್ ಕಾರಣಕ್ಕೆ!

ದಿಲ್ಜೀತ್ ದೊಸ್ಸಾಂಜ್ ಭಾರತ ಸಂಗೀತ ಕ್ಷೇತ್ರದ ಬಲು ಜನಪ್ರಿಯ ಸೆಲೆಬ್ರಿಟಿ. ಅವರ ಲೈವ್ ಕಾನ್ಸರ್ಟ್​​ನ ಟಿಕೆಟ್​ಗಳು ಬಿಸಿ ದೋಸೆಯಂತೆ ಬಿಕರಿ ಆಗುತ್ತವೆ ಅದೂ ಲಕ್ಷಾಂತರ ರೂಪಾಯಿಗಳಿಗೆ. ಒಳ್ಳೆಯ ನಟರೂ ಆಗಿರುವ ದಿಲ್ಜೀತ್ ದೊಸ್ಸಾಂಜ್ ಬಾಲಿವುಡ್​​ನಲ್ಲೂ ಬ್ಯುಸಿ ಆಗಿರುತ್ತಾರೆ. ಆದರೆ ಇದೀಗ ಅವರಿಗೆ ಖಲಿಸ್ಥಾನಿಗಳಿಗೆ ಬೆದರಿಕೆ ಬಂದಿದ್ದು, ಆಸ್ಟ್ರೇಲಿಯಾನಲ್ಲಿ ನಡೆಯಲಿರುವ ಅವರ ಶೋ ಅನ್ನು ಧಿಕ್ಕರಿಸುವಂತೆ ಖಲಿಸ್ಥಾನಿ ಉಗ್ರ ಸಂಘಟನೆಯಾಗಿರುವ ಎಸ್​​ಎಫ್​ಜೆ (ಸಿಖ್ ಫಾರ್ ಜಸ್ಟಿಸ್) ಕರೆ ನೀಡಿದೆ.

ಸಂಘನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಮಾತನಾಡಿ, ನವೆಂಬರ್ 1 ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ದಿಲ್ಜೀತ್ ಅವರ ಶೋ ಅನ್ನು ಧಿಕ್ಕರಿಸುವಂತೆ ಕರೆ ನೀಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಕಾಲಿಗೆ ನಮಸ್ಕರಿಸುವ ಮೂಲಕ ದಿಲ್ಜೀತ್ ದೊಸ್ಸಾಂಜ್, 1984ರ ಸಿಖ್ ನರಮೇಧದಲ್ಲಿ ಹತ್ಯೆಯಾದ ಎಲ್ಲ ಹುತಾತ್ಮರ, ಅವರ ವಿಧವೆಯರ ಹಾಗೂ ಅನಾಥ ಮಕ್ಕಳಿಗೆ ಅವಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸ್ಟಾರ್ ಸಿನಿಮಾದಿಂದ ಹೊರ ನಡೆದ ದಿಲ್ಜೀತ್ ದುಸ್ಸಾಂಜ್

1984ರ ಸಿಖ್ಖರ ಮಾರಣಹೋಮಕ್ಕೆ ಅಮಿತಾಬ್ ಬಚ್ಚನ್ ಅವರ ಸಂಭಾಷಣೆಯನ್ನೇ ಬಳಸಲಾಗಿತ್ತು. ಅಮಿತಾಬ್ ಹೇಳಿದ್ದ ‘ಖೂನ್ ಕ ಬದ್ಲಾ ಖೂನ್​ ಸೇ ಲೆಂಗೆ’ (ರಕ್ತ ಹರಿಸಿದವರ ರಕ್ತ ಹರಿಸುತ್ತೇವೆ) ಡೈಲಾಗ್ ಹೇಳಿಕೊಂಡು ಅಂದು ಸಿಖ್ಖರ ನರಮೇಧ ಮಾಡಲಾಗಿತ್ತು. ಹತ್ಯೆಕೋರರಿಗೆ ವಿಷಯ ಒದಗಿಸಿದ್ದ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟುವ ಮೂಲಕ ದಿಲ್ಜೀತ್, ಸಿಖ್ ನರಮೇಧದಲ್ಲಿ ಬಲಿಯಾದವರಿಗೆ, ಅವರ ಕುಟುಂಬದವರಿಗೆ ಅವಮಾನ ಎಸಗಿದ್ದಾರೆ ಎಂದು ಸಿಖ್ ಫಾರ್ ಜಸ್ಟಿಸ್, ಭಯೋತ್ಪಾದಕ ಸಂಘಟನೆ ಹೇಳಿದೆ.

ದಿಲ್ಜೀತ್ ದೊಸ್ಸಾಂಜ್ ತಮ್ಮ ಅದ್ಭುತ ಹಾಡು, ನಟನೆಯ ಜೊತೆಗೆ ತಮ್ಮ ವಿನಯತೆ, ಮಾನವೀಯ ಗುಣಗಳಿಂದಲೂ ಜನಪ್ರಿಯರು. ಸಂಕೋಚದ ಸ್ವಭಾವದ ದಿಲ್ಜೀತ್, ಹಿರಿಯರಿಗೆ, ಕಿರಿಯರಿಗೆ ಗೌರವ ನೀಡುತ್ತಾರೆ. ಅದರಲ್ಲೂ ಅಮಿತಾಬ್ ಬಚ್ಚನ್ ಬಾಲಿವುಡ್​ನ ದಿಗ್ಗಜ ನಟ, ಹಾಗಾಗಿಯೇ ಇತ್ತೀಚೆಗೆ ಕೆಬಿಸಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದಾಗ ಅಮಿತಾಬ್ ಅವರ ಕಾಲಿಗೆ ದಿಲ್ಜೀತ್ ನಮಸ್ಕರಿಸಿದ್ದರು.

ಖಲಿಸ್ಥಾನಿಗಳು, ಕೆನಡಾ ಅನ್ನು ನೆಲೆ ಮಾಡಿಕೊಂಡಿರುವ ಪಂಜಾಬಿ ಮಾಫಿಯಾದವರು ಪಂಜಾಬಿನ ಹಲವಾರು ಮಂದಿ ಕಲಾವಿದರಿಗೆ ಬೆದರಿಕೆ ಹಾಕಿದ್ದಾರೆ. ಕೆನಡಾನಲ್ಲಿರುವ ಕಪಿಲ್ ಶರ್ಮಾ ಅವರ ಕೆಫೆ ಮೇಲೆ ಗುಂಡಿನ ದಾಳಿ ಮಾಡಿದ್ದರು. ಈ ಹಿಂದೆ ಹನಿಸಿಂಗ್ ಅವರಿಗೂ ಬೆದರಿಕೆ ಕರೆಗಳು ಬಂದಿದ್ದವು. ಬಾದ್​​​ಶಾಗೂ ಬೆದರಿಕೆ ಬಂದಿತ್ತು. ಗಾಯಕ ಸಿಧು ಮೂಸೆವಾಲ ಅನ್ನು ಕೊಂದು ಹಾಕಲಾಯ್ತು. ಖ್ಯಾತ ಗಾಯಕ ಅಮರ್ ಸಿಂಗ್ ಚಮ್ಕೀಲ ಅನ್ನು ಸಹ ಕೊಲೆ ಮಾಡಲಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Wed, 29 October 25