Tumakuru: ಪತ್ನಿಗೆ ಡಿವೋರ್ಸ್ ನೀಡದೆ 2ನೇ ಮದುವೆಗೆ ಯತ್ನ; ವ್ಯಕ್ತಿಗೆ ಡಬಲ್ ಶಾಕ್
ಹಾಲಿ ಪತ್ನಿ ಜೊತೆಗಿನ ವಿಚ್ಛೇದನ ವಿಚಾರ ಕೋರ್ಟ್ನಲ್ಲಿ ಇರುವಾಗಲೇ ಮತ್ತೊಬ್ಬಳ ಜೊತೆ ವಿವಾಹವಾಗಲು ಹೊರಟಿದ್ದ ವ್ಯಕ್ತಿಗೆ ಡಬಲ್ ಶಾಕ್ ಸಿಕ್ಕಿದೆ. ಪತ್ನಿ ಮದುವೆ ನಿಲ್ಲಿಸಿ ದೂರು ನೀಡಿದ್ದರೆ, ಇತ್ತ ವಿವಾಹವಾಗಲು ಹೊರಟಿದ್ದ ಮಹಿಳೆಯೂ ಕಂಪ್ಲೇಂಟ್ ನೀಡಿದ್ದಾಳೆ. ಮೊದಲ ಮದುವೆ ಮುಚ್ಚಿಟ್ಟು ಮದುವೆ ಯತ್ನಿಸಿದ್ದಲ್ಲದೆ, ಹಣ ಮತ್ತು ಒಡವೆ ಪಡೆದಿದ್ದಾಗಿ ದೂರಿದ್ದಾಳೆ.
ತುಮಕೂರು, ಫೆಬ್ರವರಿ 09: ಪತ್ನಿಗೆ ವಿಚ್ಛೇದನ ನೀಡದೆ ಮತ್ತೊಬ್ಬಳ ಜೊತೆ ವಿವಾಹವಾಗಲು ಹೊರಟಿದ್ದ ವೇಳೆ ಕಲ್ಯಾಣಮಂಟಪಕ್ಖೇ ಪೊಲೀಸರ ಜೊತೆ ನುಗ್ಗಿ ಪತಿಗೆ ಮಹಿಳೆ ಶಾಕ್ ಕೊಟ್ಟ ಘಟನೆ ನಿನ್ನೆ ತುಮಕೂರಿನ ಎಡೆಯೂರಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಅರೋಪಿ ಹರಿಪ್ರಸಾದ್ಗೆ ಈಗ ಮತ್ತೊಂದು ಶಾಕ್ ಸಿಕ್ಕಿದೆ. ಈತ ಎರಡನೇ ವಿವಾಹವಾಗಲು ಹೊರಟಿದ್ದ ಮಂಡ್ಯ ಮೂಲದ ಯುವತಿಯೂ ಈಗ ದೂರು ನೀಡಿದ್ದಾಳೆ. ಮೊದಲ ಮದುವೆ ಮುಚ್ಚಿಟ್ಟು 2ನೇ ಮದುವೆಯಾಗ್ತಿದ್ದ ಹರಿಪ್ರಸಾದ್, ವಿವಾಹಕ್ಕೆಂದು ಲಕ್ಷಾಂತರ ಹಣ ಮತ್ತು ಚಿನ್ನಾಭರಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಯುವತಿಯ ಕೆಲ ಫೋಟೋ ಇಟ್ಟುಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಎನ್ಸಿಆರ್ ದಾಖಲಿಸಿದ ಅಮೃತೂರು ಪೊಲೀಸರು, ವಂಚನೆ ಸಂಬಂಧ ಮಂಡ್ಯದಲ್ಲಿ ದೂರು ನೀಡುವಂತೆ ಸೂಚನೆ ನೀಡಿದ್ದಾರೆ. ಮೊದಲ ಹೆಂಡತಿ ಡೈವರ್ಸ್ ವಿಚಾರ ಇನ್ನೂ ಕೋರ್ಟ್ನಲ್ಲಿ ಇರುವಾಗಲೇ ಈತ ಮತ್ತೊಂದು ಮದುವೆಗೆ ಮುಂದಾಗಿದ್ದ. ಬೆಂಗಳೂರಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕನಾಗಿರುವ ಹರಿಪ್ರಸಾದ್ಗೆ ಮಂಡ್ಯದ ಯುವತಿ ಕಳೆದ 3 ವರ್ಷಗಳ ಹಿಂದೆ ಪರಿಚಯವಾಗಿದ್ದಳು. ಆದರೆ ಮೊದಲನೇ ಮದುವೆ ವಿಚಾರ ಯುವತಿ ಹಾಗೂ ಆಕೆಯ ತಾಯಿಗೆ ಗೊತ್ತಿತ್ತು ಎಂದು ಹರಿಪ್ರಸಾದ್ ಹೇಳಿದ್ದಾನೆ ಎನ್ನಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
