ಬೆಳ್ಳಂಬೆಳಗ್ಗೆಯೇ ಸಚಿವ ಸತೀಶ್ ಜಾರಕಿಹೊಳಿ ಮನೆಗಳ ಮೇಲೆ ಇಡಿ ರೇಡ್ ಆಗಿದ್ದೇಕೆ? ಕಾರಣ ಇಲ್ಲಿದೆ
ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್ ನಿವಾಸಗಳ ಮೇಲೆ ಇ.ಡಿ ದಾಳಿ ನಡೆಸಿದೆ. ಅಬಕಾರಿ ಪರವಾನಗಿ ಹಗರಣದಲ್ಲಿ ಶಾಮೀಲಾದ ಆರೋಪದಲ್ಲಿ ಅವರ ಬಾಮೈದ ಮಂಜುನಾಥ್ ಡೈರಿ ಆಧಾರದ ಮೇಲೆ ಈ ದಾಳಿ ನಡೆದಿದೆ. ಭ್ರಷ್ಟಾಚಾರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಾತ್ರದ ಬಗ್ಗೆ ಇ.ಡಿ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 9: ಕಾಂಗ್ರೆಸ್ನ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಗೋಕಾಕ್ನಲ್ಲಿರುವ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಅಬಕಾರಿ ಪರವಾನಗಿ ಹಗರಣಕ್ಕೆ ಸಂಬಂಧಿಸಿದ ದಾಳಿ ಆಗಿದ್ದು, ಸತೀಶ್ ಜಾರಕಿಹೊಳಿ ಬಾಮೈದ ಮಂಜುನಾಥ್ ಎಂಬುವರ ಮೇಲಿನ ಆರೋಪಗಳಿಗೆ ಸಂಬಂಧಪಟ್ಟಂತೆ ಈ ಕಾರ್ಯಾಚರಣೆ ನಡೆದಿದೆ. ಮಂಜುನಾಥ್ ಅವರು ಬೆಳಗಾವಿಗೆ ವರ್ಗಾವಣೆಯಾಗುವ ವಿಚಾರದಲ್ಲಿ ಸತೀಶ್ ಜಾರಕಿಹೊಳಿ ಪ್ರಭಾವ ಬೀರಿದ್ದರು ಎಂಬ ಆರೋಪವಿದೆ. ಅಲ್ಲದೆ, ಮಂಜುನಾಥ್ ತಮ್ಮ ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಅಬಕಾರಿ ಪರವಾನಗಿಗಳನ್ನು ಪಡೆದುಕೊಂಡಿದ್ದರು. ಈ ಭ್ರಷ್ಟಾಚಾರದಿಂದ ಬಂದ ಹಣವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದರು ಎಂಬ ಆರೋಪ ಇದೆ.
ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿದಂತೆ ಮಂಜುನಾಥ್ ನಿವಾಸದಲ್ಲಿ ಡೈರಿಯೊಂದು ಪತ್ತೆಯಾಗಿತ್ತು. ಈ ಡೈರಿ ಆಧಾರದ ಮೇಲೆ ಜೂನ್ 24ರಿಂದ ಇ.ಡಿ. ಅಧಿಕಾರಿಗಳು ಕೂಲಂಕುಷ ತನಿಖೆ ನಡೆಸಿದ್ದು, ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ. ಡೈರಿಯಲ್ಲಿನ ಮಾಹಿತಿಯನ್ನಾಧರಿಸಿ ಸತೀಶ್ ಜಾರಕಿಹೊಳಿ ಅವರ ಪಾತ್ರದ ಬಗ್ಗೆ ಇ.ಡಿ. ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
