ತರಕಾರಿಯಲ್ಲಿ ರಾಸಾಯನಿಕ ಪತ್ತೆಗೆ ಕಾರಣ ರಿವೀಲ್: ಪರಿಸರವಾದಿ ಬಿಚ್ಚಿಟ್ರು ಅಸಲಿ ಸತ್ಯ
ರಾಜ್ಯದ ತರಕಾರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ಅವುಗಳಲ್ಲಿ ಸೀಸ ಮತ್ತು ಹೇರಳ ಕೀಟನಾಶಕ ಅಮಶ ಪತ್ತೆಯ ಬಗ್ಗೆ ವರದಿ ನೀಡಿತ್ತು. ಆದರೆ ಮಾನವನ ಆರೋಗ್ಯಕ್ಕೆ ಮಾರಕವಾಗಿರುವ ಈ ಅಂಶಗಳು ಪ್ರಮುಖವಾಗಿ ಕಲುಷಿತ ನೀರಿನಿಂದಲೇ ಬೆಳೆಗಳನ್ನು ಸೇರುತ್ತಿವೆ ಎನ್ನಲಾಗಿದೆ. ಈ ಬಗ್ಗೆ ಪರಿಸರವಾದಿ ಆಂಜನೇಯ ರೆಡ್ಡಿ ಟಿವಿ9 ಜೊತೆ ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.
ಚಿಕ್ಕಬಳ್ಳಾಪುರ, ಫೆಬ್ರವರಿ 24: ಚಿಕ್ಕಬಳ್ಳಾಪುರ ಜಿಲ್ಲೆ ಎಂದರೆ ಹೂ, ಹಣ್ಣು ಮತ್ತು ತರಕಾರಿ ಬೆಳೆಗೆ ಖ್ಯಾತಿ. ಇಲ್ಲಿನ ಬೆಳೆಗಳು ತಮಿಳುನಾಡು, ಹೈದರಾಬಾದ್ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುತ್ತವೆ. ಆದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ನೀಡಿರುವ ವರದಿ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. ತರಕಾರಿಗಳಲ್ಲಿ ರಾಸಾಯನಿಕ ಪತ್ತೆ ಹಿನ್ನೆಲೆ ಜನ ತರಕಾರಿ ತಿನ್ನಲೂ ಯೋಚಿಸಬೇಕಾದ ಸ್ಥಿತಿ ಬಂದೊದಗಿದೆ. ಈ ಬಗ್ಗೆ ಪರಿಸರವಾದಿ ಆಂಜನೇಯ ರೆಡ್ಡಿ ಟಿವಿ9 ಜೊತೆ ಮಾತನಾಡಿದ್ದು, ಬೆಂಗಳೂರಿನ ಅಕ್ಕಪಕ್ಕದ ಬರಬೀಡಿತ ಜಿಲ್ಲೆಗಳಲ್ಲಿ ತರಕಾರಿ ಬೆಳೆ ಹೆಚ್ಚು. ಆದರೆ, ವರದಿ ಪ್ರಕಾರ ಕಲುಷಿತ ನೀರಿನಿಂದ ಕೃಷಿ ಭೂಮಿಯೂ ಮಲಿನಗೊಳ್ಳುತ್ತೆ. ಅದೇ ಮಣ್ಣಲ್ಲಿ ತರಕಾರಿ ಬೆಳೆಯುವ ಕಾರಣ ಅವು ಮನುಷ್ಯನ ಆರೋಗ್ಯಕ್ಕೆ ಮಾರಕವಾಗುತ್ತಿವೆ. ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗಿದ್ದು, ಕೆಲವು ಕೊಳವೆ ಬಾವಿಗಳ ನೀರು ಕೃಷಿಗೂ ಅಯೋಗ್ಯ ಎಂಬ ವರದಿ ಇದೆ. ಜೊತೆಗೆ ತ್ಯಾಜ್ಯ ನೀರು ಜಲ ಮೂಲಗಳಿಗೆ ಸೇರುವ ಕಾರಣ ರಾಸಾಯನಿಕಗಳು ಪತ್ತೆಯಾಗ್ತಿವೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

