ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ಚಾಮರಾಜನಗರದಲ್ಲಿ ಅರಣ್ಯಾಧಿಕಾರಿಗಳಿಗೆ ರೈತರ ಖಡಕ್ ಎಚ್ಚರಿಕೆ

Edited By:

Updated on: Jul 13, 2026 | 2:49 PM

ಚಾಮರಾಜನಗರದಲ್ಲಿ ಹೆಚ್ಚುತ್ತಿರುವ ಹುಲಿ ಹಾಗೂ ಚಿರತೆ ಹಾವಳಿಯಿಂದ ಬೇಸತ್ತ ರೈತರು, ಡಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಾಡುಪ್ರಾಣಿಗಳ ಸೆರೆಗೆ ತಕ್ಷಣ ಕೂಂಬಿಂಗ್ ಕಾರ್ಯಾಚರಣೆ ನಡೆಸುವಂತೆ ಆಗ್ರಹಿಸಿದ ರೈತರು, ಅರಣ್ಯ ಇಲಾಖೆಯ ವೈಜ್ಞಾನಿಕ ನಿರ್ವಹಣೆಯ ಕೊರತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ಚಾಮರಾಜನಗರ, ಜುಲೈ 13: ಚಾಮರಾಜನಗರದಲ್ಲಿ ಹುಲಿ ಮತ್ತು ಚಿರತೆಯ ಉಪಟಳ ಮಿತಿಮೀರಿದ್ದು, ಆಕ್ರೋಶಗೊಂಡ ರೈತರು ಡಿಸಿಎಫ್ ಕಚೇರಿ ಎದುರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದರು. ಕಾಡುಪ್ರಾಣಿಗಳನ್ನು ತಕ್ಷಣ ಸೆರೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಾರ್ಯಾಚರಣೆ ಆರಂಭಿಸದಿದ್ದರೆ ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದ ರೈತರು, ಅರಣ್ಯ ಸಿಬ್ಬಂದಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಹುಲಿ ಹಿಡಿಯದಿದ್ದರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ನಿರತರು, ‘‘ಬೇಕೇ ಬೇಕು ನ್ಯಾಯ ಬೇಕು. ವಿಫಲವಾಗಿರೋ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ, ಧಿಕ್ಕಾರ. ಹುಲಿ, ಚಿರತೆ, ಕಾಡುಪ್ರಾಣಿಗಳ ಸೆರೆ ಹಿಡಿಯಲು ವಿಫಲವಾಗಿರೋ ಅರಣ್ಯ ಅಧಿಕಾರಿಗಳಿಗೆ ಧಿಕ್ಕಾರ ಧಿಕ್ಕಾರ. ರಕ್ಷಿಸಿ ರಕ್ಷಿಸಿ ನಮ್ಮ ರೈತರನ್ನು ರಕ್ಷಿಸಿ’’ ಎಂಬ ಘೋಷಣೆಗಳನ್ನು ಕೂಗಿದರು. ಕಾಡಿನ ಪ್ರಾಣಿಗಳು ಕಾಡಿನಲ್ಲೇ ಇರಬೇಕು. ಆದರೆ ಅರಣ್ಯ ಇಲಾಖೆ ವೈಜ್ಞಾನಿಕವಲ್ಲದ ನಿರ್ವಹಣೆಯಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ರೈತರು ದೂರಿದರು.

ಸೆರೆ ಹಿಡಿದಂತಹ ಕಾಡುಪ್ರಾಣಿಗಳಾದ ಹುಲಿ, ಚಿರತೆ ಮತ್ತು ಇತರೆ ಪ್ರಾಣಿಗಳನ್ನು ಮಾದೇಶ್ವರನ ಬೆಟ್ಟ ಹಾಗೂ ಬಿಳಿಗಿರಂಗನ ಬೆಟ್ಟಕ್ಕೆ ಬಿಡುತ್ತಾ ಇರುವುದು ಕೂಡ ಈ ಹಾವಳಿಗೆ ಒಂದು ಕಾರಣ ಎಂದು ರೈತರು ಆರೋಪಿಸಿದರು. ಇದರಿಂದ ಆಹಾರ ಅರಸಿ, ವಯಸ್ಸಾಗಿರುವ ಪ್ರಾಣಿಗಳು ಹೊರಗಡೆ ಬರುತ್ತಿವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us